ವೈದ್ಯ, ಎಂಜಿನಿಯರಿಂಗ್‌ ವ್ಯಾಮೋಹದಿಂದ ವಿಜ್ಞಾನ ಕಲಿಕೆ ಕುಸಿದಿದೆ

| Published : Mar 04 2025, 12:32 AM IST

ಸಾರಾಂಶ

ಈಗ ಶಿಕ್ಷಣ ಬಹಳ ದುಬಾರಿಯಾಗಿದೆ. ಸರ್ಕಾರಿ ಸೀಟು ಸಿಕ್ಕರೂ ಭರಿಸಲಾಗದ ಪರಿಸ್ಥಿತಿ ಇದೆ

ಕನ್ನಡಪ್ರಭ ವಾರ್ತೆ ಮೈಸೂ

ವೈದ್ಯ, ಎಂಜಿನಿಯರಿಂಗ್‌ ವ್ಯಾಮೋಹದಿಂದಾಗಿ ಶಿಕ್ಷಣ ದುಬಾರಿಯಾಗಿದ್ದು, ವಿಜ್ಞಾನ ಓದುವವರ ಸಂಖ್ಯೆ ಕುಸಿದಿರುವುದು ಸರಿಯಲ್ಲ ಎಂದು ವಿಜ್ಞಾನಿ ಡಾ.ಟಿ.ತಿಪ್ಪೇಸ್ವಾಮಿ ಕಳವಳ ವ್ಯಕ್ತಪಡಿಸಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾಗೂ ಮಂತ್ರ ಫಾರ್ ಜೇಂಜ್ ಸಹಯೋಗದಲ್ಲಿ ಇಲ್ಲಿನ ವಸಂತಮಹಲ್‌ ನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಆವರಣದಲ್ಲಿ ಶುಕ್ರವಾರ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿಜ್ಞಾನ ಕಲಿಕೋಪಕರಣ ಮೇಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈಗ ಶಿಕ್ಷಣ ಬಹಳ ದುಬಾರಿಯಾಗಿದೆ. ಸರ್ಕಾರಿ ಸೀಟು ಸಿಕ್ಕರೂ ಭರಿಸಲಾಗದ ಪರಿಸ್ಥಿತಿ ಇದೆ. ಈಗ ಬಿಎಸ್ಸಿಗೆ ಸೇರುವವರ ಸಂಖ್ಯೆ ಕಡಿಮೆ ಆಗಿದೆ. ಎಲ್ಲದಕ್ಕೂ ಎಂಜಿನಿಯರಿಂಗ್‌ ಅಥವಾ ವೈದ್ಯಕೀಯ ಶಿಕ್ಷಣವೇ ಪರಿಹಾರವಲ್ಲ. ವಿಜ್ಞಾನವೂ ಬೇಕು. ಅದನ್ನು ಓದಿದವರಿಗೂ ಬಹಳಷ್ಟು ಅವಕಾಶವಿದೆ. ವಿಜ್ಞಾನಿಗಳಾಗಿ ಸಾಧಿಸಿದವರು ಬಹಳಷ್ಟು ಮಂದಿ ಇದ್ದಾರೆ. ಮಾರಕ ಕಾಯಿಲೆಗಳಿಂದ ರಕ್ಷಣೆ ಪಡೆಯಲು ‌ಔಷಧಿ ಕಂಡುಹಿಡಿಯುವುದು ಸಾಧ್ಯವಾಗಿರುವುದು ಆವಿಷ್ಕಾರದಿಂದ ಎನ್ನುವುದನ್ನು ಮರೆಯಬಾರದು. ಇದೆಲ್ಲವನ್ನೂ ಶಿಕ್ಷಕರು ಮಕ್ಕಳಿಗೆ ತಿಳಿಸಿಕೊಡಬೇಕು. ತರಕಾರಿಗಳು ಮೊದಲಾದವುಗಳಿಗೆ ಇರುವ ವೈಜ್ಞಾನಿಕ ಹೆಸರನ್ನು ಚಿಕ್ಕಂದಿನಲ್ಲೇ ಕಲಿಸಬೇಕು ಎಂದು ಅವರು ತಿಳಿಸಿದರು.

ಆದ್ದರಿಂದ ಮೊದಲು ಶಿಕ್ಷಕರು ಪ್ರಚಲಿತ ವಿದ್ಯಮಾನಗಳ ಬಗ್ಗೆ ಅಪ್‌ ಡೇಟ್‌ ಆಗುತ್ತಾ ಶಾಲಾ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕು ಹಾಗೂ ಮೂಲ ವಿಜ್ಞಾನದತ್ತ ಆಸಕ್ತಿ ಬೆಳೆಸಬೇಕು ಎಂದರು.

ಸಾರ್ವಜನಿಕ ಶಿಕ್ಷಕ ಶಿಕ್ಷಣ ವಿದ್ಯಾಲಯದ ಪ್ರಾಂಶುಪಾಲೆ ಎಚ್‌.ಎನ್. ಗೀತಾಂಬಾ ಮಾತನಾಡಿ, ವಿಜ್ಞಾನದ ಪರಿಕಲ್ಪನೆ ಸರಳವಾಗಿ ತಿಳಿಸುವಲ್ಲಿ ಕಲಿಕೋಪಕರಣ ಸಹಕಾರಿ ಆಗಿದೆ. ಲಭ್ಯ ಸಂಪನ್ಮೂಲ ಬಳಸಿಕೊಂಡು‌ ಮಾದರಿ ಮಾಡಿ ತೋರಿಸಬಹುದು ಎಂದು ಅವರು ಹೇಳಿದರು.

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ ಸಿ.ಆರ್. ನಾಗರಾಜಯ್ಯ, ನೋಡಲ್‌ ಅಧಿಕಾರಿ ಪುಷ್ಪಲತಾ, ಡಿವೈಪಿಸಿಗಳಾದ ಶೋಭಾ, ಪುಷ್ಪಾ, ಬಿ.ಆರ್‌.ಸಿಗಳಾದ ನಾಗೇಶ್, ಶ್ರೀಕಂಠಸ್ವಾಮಿ, ಉಪನ್ಯಾಸಕ ಧನಂಜಯ, ರಾಜ್ಯ ಶಿಕ್ಷಕರ ಸಂಘದ ನಿರ್ದೇಶಕ ಮಹದೇವು, ತೀರ್ಪುಗಾರರಾದ ಮೀರಾ, ಉಷಾ, ರುಕ್ಸಾನಾ ಹಾಗೂ ಶಾರದಾ, ಮಂತ್ರ ಸಂಸ್ಥೆಯ ಮಹಮ್ಮದ್ ರಫಿ ಇದ್ದರು.