ಈ ಬಾರಿ ನಗರಸಭೆಯಲ್ಲಿ 44.84 ಕೋಟಿ ರೂ.ಗಳ ವಿವಿಧ ಮೂಲಗಳಿಂದ ಆದಾಯದ ನಿರೀಕ್ಷಿ

ಕನ್ನಡಪ್ರಭ ವಾರ್ತೆ ಹುಣಸೂರುಹುಣಸೂರು ನಗರಸಭೆಯ 2026-27ನೇ ಸಾಲಿಗಾಗಿ 66.27 ಲಕ್ಷ ರೂ.ಗಳ ಉಳಿತಾಯದ ಬಜೆಟನ್ನು ಆಡಳಿತಾಧಿಕಾರಿಯೂ ಆದ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಮಂಡಿಸಿದರು.ಮಂಗಳವಾರ ನಗರಸಭೆಯ ಡಾ.ಬಿ.ಆರ್‌. ಅಂಬೇಡ್ಕರ್ ಸಭಾಂಗಣದಲ್ಲಿ ಆಯೋಜಿಸಿದ್ದ ಬಜೆಟ್ ಮಂಡನಾ ಸಭೆಯಲ್ಲಿ 55.70 ಕೋಟಿ ರೂ.ಗಳ ಗಾತ್ರದ ಬಜೆಟ್ ಮಂಡಿಸಿದರು. ಈ ಬಾರಿ ನಗರಸಭೆಯಲ್ಲಿ 44.84 ಕೋಟಿ ರೂ.ಗಳ ವಿವಿಧ ಮೂಲಗಳಿಂದ ಆದಾಯದ ನಿರೀಕ್ಷಿಸಿದ್ದರೆ, 55.04 ಕೋಟಿ ರೂ.ಗಳ ನಿರೀಕ್ಷಿತ ಖರ್ಚು ಅಂದಾಜಿಸಲಾಗಿದ್ದು, ಒಟ್ಟು 66 ಲಕ್ಷ 27ಸಾವಿರದ ರೂ.ಗಳ ಉಳಿತಾಯವನ್ನು ನಿರೀಕ್ಷಿಸಲಾಗಿದೆ.ಜಿಲ್ಲಾಧಿಕಾರಿ ಮಂಡಿಸಿರುವ ಆಯವ್ಯಯದಲ್ಲಿ ನಗರಸಭೆ ಆದಾಯ ಮೂಲಗಳು ಸರ್ಕಾರದ ವಿವಿಧ ಅನುದಾನಗಳನ್ನೇ ನೆಚ್ಚಿಕೊಂಡಿವೆ. ನಗರಸಭೆ ಸ್ವಂತ ಸಂಪನ್ಮೂಲಗಳು 8.77 ಕೋಟಿಯಾಗಿದ್ದು, ಈ ಪೈಕಿ ಆಸ್ತಿ ತೆರಿಗೆ ಬಹುಪಾಲು 6.24 ಕೋಟಿ ರೂ.ಗಳನ್ನು ಒಳಗೊಂಡಿದ್ದರೆ, ನೀರು ಸರಬರಾಜಿನಿಂದ 1.12 ಕೋಟಿ ರೂ.ಗಳ ಸಂಗ್ರಹಣೆಯ ನಿರೀಕ್ಷೆ ಇದೆ. ಆದರೆ ಸರ್ಕಾರದ ಅನುದಾನದ ಒಟ್ಟು ಮೊತ್ತ 21.10 ಲಕ್ಷ ರೂ.ಗಳ ನಿರೀಕ್ಷೆಯಿದ್ದು, ಕಳದ ಮೂರುವರ್ಷಗಳಿಂದ 15ನೇ ಹಣಕಾಸು ನಿಧಿ ಬಂದಿಲ್ಲ. ಜನಪ್ರತಿನಿಧಿಗಳು ಇಲ್ಲದ ಕಾರಣ ಕೇಂದ್ರ ಸರ್ಕಾರ ಮಂಜೂರು ಮಾಡಿಲ್ಲ. (4.21 ಕೋಟಿ ರೂ.ಗಳು) 16ನೇ ಹಣಕಾಸು ಆಯೋಗದ ಅನುದಾನ 5.37 ಕೋಟಿ ರೂ.ಗಳ ನಿರೀಕ್ಷಿಸಲಾಗಿದೆ.ಎಸ್‌.ಬಿಎಂ ಯೋಜನೆಗೆ 2.30 ಕೋಟಿ ರೂ.ಗಳ ಅನುದಾನ ನಿರೀಕ್ಷಿಸಲಾಗಿದೆ. ರಾಜಸ್ವ ಮತ್ತು ಬಂಡವಾಳದ ಮೊತ್ತ ಒಟ್ಟು 29.87 ಕೋಟಿ ರೂ.ಗಳಾಗಿದ್ದು, ಅಸಾಧಾರಣ ಸ್ವೀಕೃತಿಗಳು 14.96 ಕೋಟಿ ರೂ.ಗಳಾಗಿದ್ದು, ಒಟ್ಟು ಸ್ವೀಕೃತಿಯು 44.84 ಕೋಟಿ ರೂ.ಗಳೆಂದು ಆಯವ್ಯಯದಲ್ಲಿ ತಿಳಿಸಲಾಗಿದೆ.ಪ್ರಮುಖ ವೆಚ್ಚ ವಿಭಾಗದಲ್ಲಿ ಬೀದಿದೀಪಗಳ ಅಭಿವೃದ್ಧಿಗೆ 2 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ಘನತ್ಯಾಜ್ಯ ನಿರ್ವಹಣೆ (ಎಸ್‌ಬಿಎಂ 2ಗೆ) 2.30 ಕೋಟಿ ರೂ.ಗಳು, ಮಳೆ ನೀರು ಚರಂಡಿ ಹಾಗೂ ತೆರೆದ ಚರಂಡಿ ಕಾಮಗಾರಿಗಳಿಗೆ 4.14 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದ್ದು ಒಟ್ಟು 23.83 ಕೋಟಿ ರೂ.ಗಳ ಬಂಡವಾಳ ವೆಚ್ಚ ಮಾಡುವ ನಿರೀಕ್ಷೆ ಇದೆ. ವೇತನ ಪಾವತಿಗಾಗಿ 4.54 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ಸ್ಟೇಷನರಿ ಖರ್ಚು 2 ಕೋಟಿ ರೂ.ಗಳಾಗಿದೆ. ಘನತ್ಯಾಜ್ಯ ನಿರ್ವಹಣೆ ವಿಭಾಗದ ವೇತನ, ವಿಮೆ, ದುರಸ್ತಿಗೆ ಸಂಬಂಧಿಸಿದಂತೆ 4.41 ಕೋಟಿ ರೂ.ಗಳು, ಮಾರಾಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಪತ್ರಕರ್ತರಿಗೆ 5 ಲಕ್ಷ ರೂ.ಗಳ ಸಹಾಯಧನ ಮೀಸಲಿರಿಸಲಾಗಿದೆ. ಸಭೆಯಲ್ಲಿ ಶಾಸಕ ಜಿ.ಡಿ. ಹರೀಶ್‌ ಗೌಡ, ಪೌರಾಯುಕ್ತೆ ಕೆ. ಮಾನಸ, ಲೆಕ್ಕಾಧಿಕಾರಿ ಶಾರದಮ್ಮ ಇತರರು ಇದ್ದರು.