ಕನ್ನಡಪ್ರಭ ವಾರ್ತೆ ಹಳಿಯಾಳ

ಪಶ್ಚಿಮ ಘಟ್ಟದ ಜೀವ ವೈವಿಧ್ಯ ಸಂರಕ್ಷಣೆ ಉದ್ದೇಶದಿಂದ ಕೇಂದ್ರ ಪರಿಸರ ಮತ್ತು ಹವಾಮಾನ ಬದಲಾವಣೆಯ ಇಲಾಖೆಯು ಕಳೆದ ತಿಂಗಳು 27ರಂದು ಹೊರಡಿಸಿದ 7ನೇ ಕರಡು ಅಧಿಸೂಚನೆಗೆ ನನ್ನ ಬಲವಾದ ಆಕ್ಷೇಪಣೆ, ವಿರೋಧವಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದಕ್ಕೂ ಮುನ್ನ ಹೊರಡಿಸಿದ 6 ಕರಡು ಅಧಿಸೂಚನೆಗಳಿಗೆ ಆಕ್ಷೇಪಣೆಗಳನ್ನು ನಾನು ಸಲ್ಲಿಸಿದ್ದೆನೆ ಎಂದರು. ಈ ಹಿಂದೆಯೂ ಅಧಿಸೂಚನೆಗೆ ನನ್ನ ವಿರೋಧವಿತ್ತು, ಮುಂದೇಯೂ ಇರಲಿದೆ ಎಂದರು.

ಈ ಕರಡು ಅಧಿಸೂಚನೆಯಡಿಯಲ್ಲಿ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲೂಕು ಸೇರಿದಂತೆ ಜೋಯಿಡಾ ತಾಲೂಕು ಒಳಪಡುತ್ತಿದೆ. ಕರಡು ಅಧಿಸೂಚನೆಯಿಂದ ಜೋಯಿಡಾ ತಾಲೂಕಿನ ಪರಿಸರ ಪ್ರವಾಸೋದ್ಯಮಕ್ಕೆ ಹಾಗೂ ಕೃಷಿ ಚಟುವಟಿಕೆಗಳಿಗೆ ಬಾರಿ ಹಿನ್ನೆಡೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಎರಡು ತಿಂಗಳ ಕಾಲಾವಕಾಶವಿದ್ದು, ಜೋಯಿಡಾ ತಾಲೂಕಿನ ಜನರು ಪಕ್ಷಾತೀತವಾಗಿ ತಮ್ಮ ಆಕ್ಷೇಪಣೆಯನ್ನು ಕೇಂದ್ರ ಸರ್ಕಾರಕ್ಕೆ ಈ-ಮೇಲ್ ಮಾಡಬೇಕು ಎಂದರು. ನನ್ನ ಆಕ್ಷೇಪಣೆಯನ್ನು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಸಚಿವಾಲಯಕ್ಕೆ ಈ-ಮೇಲ್ ಮೂಲಕ ಸಲ್ಲಿಸಿದ್ದೆನೆ. ಸಂಬಂಧಿತ ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರಿಗೆ ಲಿಖಿತ ಮನವಿ ರವಾನಿಸಿ ಆಕ್ಷೇಪಣೆ ಸಲ್ಲಿಸಿದ್ದೇನೆ ಎಂದರು.


ಉತ್ತರ ಕನ್ನಡ ಜಿಲ್ಲೆಯನ್ನು ಪ್ರಸ್ತಾವಿತ ಮಂಗಳೂರು ಹೈಕೋರ್ಟ್‌ ಪೀಠದ ವ್ಯಾಪ್ತಿಗೆ ಸೇರಿಸುವ ಪ್ರಸ್ತಾವನೆಗೆ ನನ್ನ ವಿರೋಧವಿದ್ದು, ಈಗಾಗಲೇ ಪ್ರಸ್ತಾವನೆಯನ್ನು ವಿರೋಧಿಸಿ ರಾಜ್ಯ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಿಗೆ ಲಿಖಿತ ಮನವಿ ಕಳಿಸಿದ್ದೇನೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜೋಯಿಡಾ ತಾಲೂಕಿನ ಪ್ರಮುಖರಾದ ಸಂಜಯ ಹಣಬರ, ಮಾರುತಿ ಪಾಟೀಲ, ಅಕ್ಷಯ ರಾವಳ, ಅರುಣ ದೇಸಾಯಿ, ಮಂಜುನಾಥ ಮೋಕಾಶಿ, ಪ್ರಸನ್ನ ಗಾವಡಾ, ಹಾಗೂ ಹಳಿಯಾಳ ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ, ತಾಪಂ ಇಒ ವಿಲಾಸರಾಜ್ ಪ್ರಸನ್ನ ಇದ್ದರು.