ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಕೇಂದ್ರದಲ್ಲಿ ಮಹಿಳಾ ಭವನ ನಿರ್ಮಾಣಕ್ಕೆ ಎಲ್ಲ ಮಹಿಳೆಯರಿಂದ ಆಶಯ ವ್ಯಕ್ತವಾಗಿದೆ ಎಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮಾಜಿ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ ಹೇಳಿದರು.ನಗರದಲ್ಲಿರುವ ಎಸ್.ಬಿ.ಸಮುದಾಯ ಭವನದಲ್ಲಿ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯ, ಮಹಿಳಾ ಸಮಿತಿ ಮತ್ತು ಸಮನ್ವಯ ಸಮಿತಿ ಆಯೋಜಿಸಿದ್ದ ಸಮ್ಮೇಳನ ಯಶಸ್ಸಿನ ಧನ್ಯತೆ ಮತ್ತು ನೆನಪಿನ ಕಾಣಿಕೆ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಇಂದು ಬಹಳಷ್ಟು ಮಹಿಳೆಯರು ಮಹಿಳಾ ಭವನ ನಿರ್ಮಾಣವಾಗಲೆಂದು ಆಶಯ ವ್ಯಕ್ತಪಡಿಸಿದ್ದಾರೆ, ನಾನೂ ಕೂಡ ಕೈ ಜೋಡಿಸಿ ಮಹಿಳಾ ಭವನ ನಿರ್ಮಾಣಕ್ಕೆ ಎಲ್ಲರೊಂದಿಗೆ ಶ್ರಮಿಸಬೇಕು ಎಂದುಕೊಂಡಿದ್ದೇನೆ ಎಂದು ನುಡಿದರು.ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆದಿದೆ, ಸಮ್ಮೇಳನದ ಮೆರವಣಿಗೆಯಲ್ಲಿ ಮಹಿಳಾ ಸಮಿತಿಯವರು ಪುಸ್ತಕಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗುವುದರೊಂದಿಗೆ ಹೊಸ ಸಂಸ್ಕೃತಿಯನ್ನು ಅನಾವರಣಗೊಳಿಸಿದ್ದಾರೆ. ಮುಂದೆ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಪುಸ್ತಕ ಮೆರವಣಿಗೆ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬಹುದಾದ ದಿಕ್ಸೂಚಿ ನೀಡಿದ್ದಾರೆ ಎಂದು ತಿಳಿಸಿದರು.
ಸಮ್ಮೇಳನಕ್ಕೆ ಬಂದ ಹೊರ ಜಿಲ್ಲೆಯ ಅತಿಥಿಗಳನ್ನು ಮಹಿಳಾ ಸಮಿತಿಯವರು ತಮ್ಮ ತಮ್ಮ ಮನೆಗಳಲ್ಲಿ ಆತಿಥ್ಯ ನೀಡಿದ್ದಾರೆ, ಅವರಿಗೆಲ್ಲ ಧನ್ಯತೆ ಹೇಳುತ್ತೇನೆ, ಸಮ್ಮೇಳನದ ಯಶಸ್ಸಿಗಾಗಿ ಶ್ರಮಿಸಿದ ಎಲ್ಲರಿಗೂ ಒಳಿತಾಗಲಿ ಎಂದರು.ಬಳಿಕ ಮಾತನಾಡಿದ ಸಮ್ಮೇಳನದ ಮಹಿಳಾ ಸಮಿತಿ ಅಧ್ಯಕ್ಷೆ ಸುನಂದಾ ಜಯರಾಂ, ಸಮ್ಮೇಳನದಲ್ಲಿ ಮಹಿಳಾ ಸಮಿತಿಗೆ ವಹಿಸಿದ್ದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಸಮರ್ಥವಾಗಿ ನಿಭಾಯಿಸಿದ್ದೇವೆ. ಸಮಿತಿ ಮತ್ತು ಸಮನ್ವಯ ಸಮಿತಿ ಮೂಲಕ ಎಲ್ಲಾ ಜವಾಬ್ದಾರಿಗಳನ್ನು ವಿಕೇಂದ್ರಿಕರಣಗೊಳಿಸಿ, ಸಮ್ಮೇಳನದಲ್ಲಿ ಮಹಿಳಾ ಸಮಿತಿಯ ಹೆಗ್ಗುರುತನ್ನು ಮೂಡಿಸಿದ್ದೇವೆ ಎಂದರು.
ವೈಚಾರಿಕತೆಯ ಹೆಜ್ಜೆಯನ್ನು ಪ್ರಪ್ರಥಮ ಬಾರಿಗೆ ಇಡೀ ದೇಶಮಟ್ಟದಲ್ಲಿ ಮಂಡ್ಯ ಸಮ್ಮೇಳನದಲ್ಲಿ ಚಾಪು ಮೂಡಿಸಿದ್ದೇವೆ, ಸಾಹಿತ್ಯಕ್ಕಾಗಿ ಪುಸ್ತಕ, ನುಡಿಗಾಗಿ ಬಾವುಟ ಎನ್ನುವ ಘೋಷವಾಕ್ಯದೊಂದಿಗೆ ಮೆರವಣಿಗೆ ಮೂಲಕ ಒಂದು ಇತಿಹಾಸ ಸೃಷ್ಟಿಸಿದ್ದೇವೆ ಎಂದರು.ಕಾರ್ಯಕ್ರಮದಲ್ಲಿ ಮಹಿಳಾ ಸಮಿತಿ ಉಪಾಧ್ಯಕ್ಷೆ ಸೌಭಾಗ್ಯ ಮಹದೇವು ಮದ್ದೂರು, ಸದಸ್ಯ ಕಾರ್ಯದರ್ಶಿ ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ.ಬಿ.ಎಸ್.ಸೀತಾಲಕ್ಷ್ಮೀ, ಸಂಚಾಲಕರಾದ ಡಾ.ವೀಣಾ, ಜೆ.ಸುಜಾತಕೃಷ್ಣ, ಸಮನ್ವಯ ಸಮಿತಿಯ ಪ್ರೊ.ಶ್ರೀಲತಾ, ಅನುಸೂಯ ಹೊಂಬಾಳೆ, ಉಷಾರಾಣಿ, ಸಿ.ಕುಮಾರಿ, ಅರುಣಕುಮಾರಿ ಮತ್ತಿತರರಿದ್ದರು.
ಮಂಡ್ಯ ನಗರದಲ್ಲಿರುವ ಎಸ್.ಬಿ.ಸಮುದಾಯ ಭವನದಲ್ಲಿ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯ ಮಹಿಳಾ ಸಮಿತಿ ಮತ್ತು ಸಮನ್ವಯ ಸಮಿತಿ ಆಯೋಜಿಸಿದ್ದ ಸಮ್ಮೇಳನ ಯಶಸ್ಸಿಗೆ ಧನ್ಯತೆ ಮತ್ತು ನೆನಪಿನ ಕಾಣಿಕೆ ವಿತರಣೆ ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷೆ ಸದಸ್ಯರಿಗೆ ನೆನಪಿನಕಾಣಿಕೆ ವಿತರಿಸಿದರು.