ಸೆರೆಗೆ ಕಾರ್ಯಾಚರಣೆ ನಡೆದ್ರೂಕಣ್ಣಿಗೆ ಬೀಳದ ದಾಳಿ ಕೋರ ಹುಲಿ!

| Published : Jun 25 2025, 01:17 AM IST

ಸಾರಾಂಶ

ಗುಂಡ್ಲುಪೇಟೆ ತಾಲೂಕಿನ ದೇಶಿಪುರ ಕಾಲೋನಿ ಬಳಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಕ್ಯಾಮೆರಾದ ಚಿಪ್‌ನಲ್ಲಿ ಸಿಬ್ಬಂದಿಗಳು ವೀಕ್ಷಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆತಾಲೂಕಿನ ದೇಶಿಪುರ ಕಾಲೋನಿ ಗಿರಿಜನ ಮಹಿಳೆ ಬಲಿ ಪಡೆದ ಹುಲಿ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಾಕಾನೆಗಳ ಮೂಲಕ ಕಾರ್ಯಾಚರಣೆ ನಡೆಸಿದರೂ ದಾಳಿ ಕೋರ ಹುಲಿ ಕ್ಯಾಮೆರಾ ಹಾಗೂ ಜನರ ಕಣ್ಣಿಗೂ ಬೀಳದಿರುವುದು ಬಂಡೀಪುರ ಅರಣ್ಯ ಇಲಾಖೆಗೆ ತಲೆ ನೋವಾಗಿ ಪರಿಣಮಿಸಿದೆ. ಕಳೆದ ನಾಲ್ಕು ದಿನಗಳಿಂದ ಎಡಬಿಡದೆ ಸಿಬ್ಬಂದಿ ಕೂಂಬಿಂಗ್‌ ಬಳಿಕ ಸಾಕಾನೆಗಳ ಮೂಲಕವೂ ಮೂರು ದಿನಗಳಿಂದ ಕೂಂಬಿಂಗ್‌ ನಡೆಯುತ್ತಿದೆ ಜೊತೆ ಹುಲಿ ಚಲನವಲನ ಪತ್ತೆ ಹಚ್ಚಲು ಘಟನೆ ನಡೆದ ಸ್ಥಳದ ಸುತ್ತ ಮುತ್ತ ಅಳವಡಿಸಲಾದ ಕ್ಯಾಮೆರಾ ಕಣ್ಣಿಗೂ ಬಿದ್ದಿಲ್ಲ. ಬೋನು ಕೂಡ ಇರಿಸಿದ್ದರೂ ಬೀಳದೆ ಕಾರ್ಯಾಚರಣೆ ಪಡೆಗೆ ಹುಲಿ ಚಳ್ಳೆ ಹಣ್ಣು ತಿನ್ನಿಸುತ್ತಿದೆ.

ರೋಹಿತ ಹಾಗೂ ಪಾರ್ಥ ಸಾರಥಿ ಸಾಕಾನೆಗಳು ಜೊತೆಗೆ ಎಸ್‌ಟಿಪಿಎಫ್‌ ಸಿಬ್ಬಂದಿ ನಿರಂತರವಾಗಿ ಐದು ದಿನಗಳಿಂದ ಎಡ ಬಿಡದೆ ಕಾರ್ಯಾಚರಣೆ ನಡೆಸುತ್ತಿದ್ದರೂ ದಾಳಿ ಕೋರ ಹುಲಿ ಕಾಣಿಸಿಕೊಳ್ಳದೆ ಇರುವುದು ನಿಜಕ್ಕೂ ಅರಣ್ಯ ಇಲಾಖೆಗೆ ಹಿನ್ನಡೆಯಂತಾಗಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್‌ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿ ಐದು ದಿನಗಳಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ, ದಾಳಿ ಕೋರ ಹುಲಿಯ ಯಾವ ಸುಳಿವು ಸಿಕ್ಕಿಲ್ಲ ಎಂದರು. ಹಾಗಂತ ಹುಲಿ ಸೆರೆ ಕಾರ್ಯಾಚರಣೆ ನಿಲ್ಲಿಸಿಲ್ಲ. ಮಂಗಳವಾರವೂ ಸಾಕಾನೆಗಳ ಜೊತೆಗೆ ಎಸ್‌ಟಿಪಿಎಫ್‌ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿ ಮುಂದಿನ ಕಾರ್ಯಾಚರಣೆ ಬಗ್ಗೆ ತಿಳಿಯಲಿದೆ ಎಂದರು.