ಬಡತನ ದಾರಿದ್ರ್ಯವನ್ನು ಹಣೆಬರಹ ಸೃಷ್ಟಿ ಮಾಡುವುದಿಲ್ಲ

| Published : Feb 07 2025, 12:30 AM IST

ಸಾರಾಂಶ

ಬಡತನ ದಾರಿದ್ರ್ಯವನ್ನು ಹಣೆಬರಹ ಸೃಷ್ಟಿ ಮಾಡುವುದಿಲ್ಲ, ನಾವೇ ಅದನ್ನು ಸೃಷ್ಟಿ ಮಾಡಿಕೊಳ್ಳುತ್ತೇವೆ. ನಾನು ಬದುಕುತ್ತಿರುವ ಬದುಕು ಸಾಮಾನ್ಯವಲ್ಲವೆಂದು ಮನಗಂಡು ಮುನ್ನಡೆದರೇ ಸಾಧಿಸಲು ಸಾಧ್ಯ ಎಂದು ಸಾಧನಾ ಅಕಾಡೆಮಿಯ ಸಂಸ್ಥಾಪಕ ಮಂಜುನಾಥ.ಬಿ ಹೇಳಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ಬಡತನ ದಾರಿದ್ರ್ಯವನ್ನು ಹಣೆಬರಹ ಸೃಷ್ಟಿ ಮಾಡುವುದಿಲ್ಲ, ನಾವೇ ಅದನ್ನು ಸೃಷ್ಟಿ ಮಾಡಿಕೊಳ್ಳುತ್ತೇವೆ. ನಾನು ಬದುಕುತ್ತಿರುವ ಬದುಕು ಸಾಮಾನ್ಯವಲ್ಲವೆಂದು ಮನಗಂಡು ಮುನ್ನಡೆದರೇ ಸಾಧಿಸಲು ಸಾಧ್ಯ ಎಂದು ಸಾಧನಾ ಅಕಾಡೆಮಿಯ ಸಂಸ್ಥಾಪಕ ಮಂಜುನಾಥ.ಬಿ ಹೇಳಿದರು.

ನಗರದ ಚೆನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಲಿಂ.ಬಸವ ಮಹಾಸ್ವಾಮಿಗಳ ಪುಣ್ಯಸ್ಮರಣೋತ್ಸವ ನಿಮಿತ್ತ ಹಮ್ಮಿಕೊಂಡ 20ನೇ ಶರಣ ಸಂಸ್ಕೃತಿ ಉತ್ಸವದ ಕೊನೆಯ ಯುವ ಸಮಾವೇಶದಲ್ಲಿ ಮಾತನಾಡಿದ ಅವರು, ಯುವಕರು ಯುಥ್‌ಪುಲ್‌ ಆಗಿ ಕಾಣುವುದುಕ್ಕಿಂತ ಯೂಥ್‌ಪುಲ್‌ ಆಗಿ ಬದುಕಬೇಕು. ಯುವಪೀಳಿಗೆ ಸಾಮ್ರಾಜ್ಯವನ್ನು ಕಟ್ಟತ್ತೇವೆ ಎಂದು ದೃಢ ನಿರ್ಧಾರ ಕೈಗೊಂಡರೇ ಸಾಮ್ರಾಜ್ಯ ಕಟ್ಟಬಹುದು ಎಂದು ಸಲಹೆ ನೀಡಿದರು.ಹಂದಿಗುಂದ ವಿರಕ್ತಮಠದ ಶಿವಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ನಮ್ಮ ಭಾರತದಲ್ಲಿ ಅತ್ಯಂತ ಹೆಚ್ಚು ಯುವಕರು ಇದ್ದಾರೆ. ವಿವೇಕಾನಂದರ ಮಾರ್ಗ ನಮಗೆ ಆದರ್ಶವಾಗಬೇಕಾಗಿದೆ. ಶಾಲೆ, ಕಾಲೇಜು, ಗ್ರಂಥಾಲಯದಲ್ಲಿ ಕಾಣಬೇಕಾದ ಯುವಕರು ಇಂದು ಪಬ್, ಕ್ಲಬ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ನಮ್ಮ ದುರ್ದೈವ. ಯುವಕರು ಮೌಢ್ಯ, ಮೂಢನಂಬಿಕೆಯಿಂದ ಹೊರಬರಬೇಕು ಎಂದು ನುಡಿದರು.ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿ, ಶರಣ ಸಂಸ್ಕೃತಿ ಉತ್ಸವ ಅಚ್ಚುಕಟ್ಟಾಗಿ ಜರುಗಬೇಕಾದರೇ ಪ್ರತಿಯೊಬ್ಬ ಗೋಕಾಕ ಜನರ ಪರಿಶ್ರಮ ದೊಡ್ಡದಾಗಿದೆ. ಶರಣ ಸಂಸ್ಕೃತಿ ಉತ್ಸವದ ನೆಪದಲ್ಲಿ ಹಲವು ಚಿಂತಕರನ್ನು ಕರೆಯಿಸಿ ಅವರಿಂದ ಹಲವು ಚಿಂತನೆಗಳನ್ನು ಹರಿಬಿಟ್ಟು ಅವರಂತೆ ಈ ಭಾಗದ ಯುವಕರು ಆಗಬೇಕೆಂಬ ಮಹದಾಸೆ ಶೂನ್ಯ ಸಂಪಾದನ ಮಠ ಹೊಂದಿದೆ. ಹಲವು ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಉದ್ಯೋಗ ಮೇಳವನ್ನು ಸಂಘಟಿಸುತ್ತಿದ್ದು, ಮುಂದೆ ಶ್ರೀಮಠದಿಂದ ಸಮಾಜಕ್ಕೆ ಏನಾದರೂ ಕೊಡಬೇಕು ಎಂಬ ಯೋಜನೆ ಮತ್ತು ಯೋಚನೆ ಹೊಂದಿದ್ದು, ಮುಂದಿನ ದಿನಗಳಲ್ಲಿ ಇನ್ನು 10 ಹಲವಾರು ರಚನಾತ್ಮಕ ಕಾರ್ಯಗಳನ್ನು ಮಾಡುವ ವಿಚಾರವಿದ್ದು, ಅದರ ಸದುಪಯೋಗ ಪಡೆದುಕೊಂಡು ಪಾವನರಾಗಬೇಕು ಎಂದರು.ಕಾರ್ಯಕ್ರಮವನ್ನು ನವದೆಹಲಿ ಐಸ್ಕೋ ಅಧ್ಯಕ್ಷ ಲೋಕೇಶ್ವರ ನಾಯಕ ಉದ್ಘಾಟಿಸಿದರು. ಕಾರ್ಯಕ್ರಮದ ಸಾನ್ನಿಧ್ಯವನ್ನು ಯಲಬುರ್ಗಾದ ಪೂಜ್ಯಶ್ರೀ ಅಪ್ಪಾಜಿ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಶೂನ್ಯ ಸಂಪಾದನ ಮಠದ ಕಾಯಕಶ್ರೀ ಪ್ರಶಸ್ತಿ ಪಡೆದ ಮಹನೀಯರ ಬಗ್ಗೆ ಲೇಖಕ ಸಾದಿಕ್ ಹಲ್ಯಾಳ ಬರೆದ ಕರ್ಮಯೋಗಿ ಪುಸ್ತಕವನ್ನು ಗಣ್ಯರು ಲೋಕಾರ್ಪಣೆಗೊಳಿಸಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸತ್ಕರಿಸಿ, ಗೌರವಿಸಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್‌ ಡಾ.ಮೋಹನ ಭಸ್ಮೆ, ಲಕ್ಷ್ಮೀ ಎಜುಕೇಶನ್ ಟ್ರಸ್ಟ್‌ನ ನಿರ್ದೇಶಕ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ, ಕಾಂಗ್ರೆಸ್ ಮುಖಂಡ ಮಹಾಂತೇಶ ಕಡಾಡಿ, ಎಬಿವಿಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಪೃಥ್ವಿ ಕುಮಾರ್, ಉತ್ಸವ ಸಮಿತಿಯ ಅಧ್ಯಕ್ಷ ಬಸವರಾಜ ಕೊಟಗಿ, ಶಂಕರ ಗೋರೋಶಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕರುಗಳಾದ ಎಸ್.ಕೆ.ಮಠದ, ಆರ್.ಎಲ್.ಮಿರ್ಜಿ ನಿರೂಪಿಸಿ, ವಂದಿಸಿದರು.

ಯುವಕರು ಸ್ವಲ್ಪ ಸಾಧಿಸಿದರೆ ಅದೇ ದೊಡ್ಡ ಸಾಧನೆ ಎಂದು ಅಂದುಕೊಳ್ಳದೆ ನಿರಂತರ ಪ್ರಯತ್ನ ಶೀಲರಾಗಬೇಕು. ಯುವಕರು ಯೋಗಪಟು ಆಗಬೇಕು, ರೋಗಪಟು ಆಗಬಾರದು. ಆರೋಗ್ಯದ ಜೊತೆಗೆ ಸಮಾಜಕ್ಕೆ ಕೊಡುವಷ್ಟು ಸಂಪತ್ತನ್ನು ಸಂಪಾದಿಸಿ ಸದೃಢ ಸಮಾಜವನ್ನು ಕಟ್ಟಬೇಕು.

-ಮಂಜುನಾಥ.ಬಿ,

ಸಾಧನಾ ಅಕಾಡೆಮಿಯ ಸಂಸ್ಥಾಪಕರು.

ಸಂಸ್ಕಾರವಿಲ್ಲದ ಶಿಕ್ಷಣದಿಂದ ಏನು ಸಾಧಿಸಲು ಸಾಧ್ಯವಿಲ್ಲ. ಅದೃಷ್ಟದ ಮೇಲೆ ನಂಬಿಕೆ ಇಟ್ಟುಕೊಂಡವರಿಂದ ಏನು ಸಾಧಿಸಲು ಸಾಧ್ಯವಿಲ್ಲ. ನಾವು ಮನಸಾರೆ ದುಡಿಯುವ ಕಾಯಕ ನಮ್ಮನ್ನು ನಾಯಕರನ್ನಾಗಿ ಮಾಡುತ್ತದೆ. ಯುವಕರು ಮನಸ್ಸು ಮಾಡಿದರೇ ದೇಶವನ್ನು ಬದಲಾವಣೆ ಮಾಡಬಹುದು. ಆ ದಿಸೆಯಲ್ಲಿ ಯುವಕರು ಮುನ್ನೆಡೆಯಬೇಕು.

-ಶಿವಾನಂದ ಮಹಾಸ್ವಾಮಿಗಳು,

ಹಂದಿಗುಂದ ವಿರಕ್ತಮಠ.