ಸಾರಾಂಶ
ಜು. 4ರಂದು ರೈತರನ್ನು ಕರೆದು ಮಾತನಾಡುವುದಾಗಿ ಸರ್ಕಾರ ಹೇಳಿದ್ದು ಅಲ್ಲಿವರೆಗೂ ಹೋರಾಟವನ್ನು ಮುಂದುವರಿಸಲಾಗುವುದು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ ವಿರೋಧಿಸಿ ದೇವನಹಳ್ಳಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರ ಜು.4ರಂದು ಕರೆದಿರುವ ಸಭೆಯಲ್ಲಿ ಭೂಸ್ವಾಧೀನ ನಿರ್ಧಾರ ಕೈಬಿಡದ ಬಗ್ಗೆ ನಿರ್ಧಾರ ಪ್ರಕಟಿಸದಿದ್ದರೆ ಹೋರಾಟ ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದಾರೆ.ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸಂಯುಕ್ತ ಹೋರಾಟ - ಕರ್ನಾಟಕ ಸಂಘಟನೆಯಡಿ ಶನಿವಾರ ನಡೆದ ಎರಡನೇ ದಿನದ ಪ್ರತಿರೋಧ ಸಮಾವೇಶದಲ್ಲಿ ರಾಮನಗರ ಸೇರಿ ಸುತ್ತಮುತ್ತಲ ಹಲವು ಜಿಲ್ಲೆಗಳ ರೈತ ಮುಖಂಡರು, ಸಿಐಟಿಯು ಸೇರಿ ಎಡಪಕ್ಷಗಳ ಪ್ರಮುಖರು ಪಾಲ್ಗೊಂಡು ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕಿದರು.
ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಸರ್ಕಾರ ದೇವನಹಳ್ಳಿಯಲ್ಲಿ ಏರೋಸ್ಪೇಸ್ ಪಾರ್ಕ್ಗೆ 495 ಎಕರೆ ಸ್ವಾಧೀನ ಮಾಡಲ್ಲ ಎಂದರೂ ಬೇರೆ ಕೈಗಾರಿಕಾ ಉದ್ದೇಶಕ್ಕೆ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ 1777 ಎಕರೆ ಭೂ ಸ್ವಾಧೀನ ಪ್ರಕ್ರಿಯೆ ನಡೆಸಲು ಮುಂದಾಗಿದೆ. ಸುತ್ತಲಿನ ರೈತರ ಆಕ್ರೋಶ ಕಡೆಗಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜು. 4ರಂದು ರೈತರನ್ನು ಕರೆದು ಮಾತನಾಡುವುದಾಗಿ ಸರ್ಕಾರ ಹೇಳಿದ್ದು ಅಲ್ಲಿವರೆಗೂ ಹೋರಾಟವನ್ನು ಮುಂದುವರಿಸಲಾಗುವುದು. ಸಭೆಯಲ್ಲಿ ಸರ್ಕಾರ ಭೂಸ್ವಾಧೀನ ಕೈಬಿಡುವ ನಿರ್ಧಾರ ಪ್ರಕಟಿಸಬೇಕು. ಇಲ್ಲದಿದ್ದಲ್ಲಿ ಅಂದೇ ಮುಂದಿನ ಪ್ರತಿಭಟನೆಯ ಸ್ವರೂಪವನ್ನು ತಿಳಿಸಲಿದ್ದೇವೆ. ಹೋರಾಟವನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂದರು.
ಹೋರಾಟದಲ್ಲಿ 400ಕ್ಕೂ ಹೆಚ್ಚಿನ ಜನರು ಪಾಲ್ಗೊಂಡಿದ್ದು, ಬೇರೆ ಜಿಲ್ಲೆಗಳಿಂದ ಹೋರಾಟಗಾರರು ಪಾಲ್ಗೊಳ್ಳಲಿದ್ದಾರೆ ಎಂದು ಸಂಯುಕ್ತ ಹೋರಾಟ - ಕರ್ನಾಟಕ ಸಂಘಟನೆ ತಿಳಿಸಿದೆ.-------
ಫೋಟೋಭೂಸ್ವಾಧೀನ ಕೈಬಿಡುವಂತೆ ದೇವನಹಳ್ಳಿ ರೈತರು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುತ್ತಿರುವುದು.