ಸಾರಾಂಶ
ವಿಶೇಷ ಯೋಜನೆಯಲ್ಲಿ ತ್ರಿಚಕ್ರ ಸ್ಕೂಟರ್ ಗಳನ್ನು ಪಡೆದ ಫಲಾನುಭವಿಗಳು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಸಂಚಾರ ಸುರಕ್ಷಣೆ, ಕಡ್ಡಾಯವಾಗಿ ಹೆಲ್ಮೆಟ್ ಬಳಸಿ ಜಾಗರೂಕತೆಯಿಂದ ನಿಯಮಿತ ವೇಗಮಿತಿಯಲ್ಲಿ ವಾಹನಗಳನ್ನು ಚಲಾಯಿಸಬೇಕು .
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಸಮಾಜದಲ್ಲಿ ವಿಕಲಚೇತನರನ್ನು ಸಮಾನವಾಗಿ ಕಂಡು ಅವರಿಗೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು, ಆರ್ಥಿಕವಾಗಿ ಸದೃಢಗೊಳಿಸಲು ಕಾರ್ಯ ಯೋಜನೆ ರೂಪಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ತಿಳಿಸಿದರು.ಭಾರತೀ ವಿದ್ಯಾ ಸಂಸ್ಥೆ ಆಡಳಿತ ಕಚೇರಿಯ ಆವರಣದಲ್ಲಿ ವಿಧಾನ ಪರಿಷತ್ನ ವಿಶೇಷ ಅಭಿವೃದ್ಧಿ ಅನುದಾನದಲ್ಲಿ ವಿಕಲಚೇತನರಿಗೆ ತ್ರಿಚಕ್ರ ಸ್ಕೂಟರ್ ಗಳನ್ನು ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದರು.
ವಿಧಾನ ಪರಿಷತ್ ಶಾಸಕನಾದ ನಂತರ ಕ್ಷೇತ್ರದ ಹಲವು ವಿಕಲಚೇತನರಿಗೆ ಚೈತನ್ಯ ತುಂಬಲು ಹಾಗೂ ಓಡಾಡಲು ಅನುಕೂಲಕ್ಕಾಗಿ ತ್ರಿಚಕ್ರ ವಾಹನಗಳನ್ನು ನೀಡವಂತೆ ಮನವಿ ಮಾಡಿದ್ದು, ಆ ಮನವಿ ಪೂರಕವಾಗಿ ನನ್ನ ವಿಶೇಷ ಅನುದಾನದಲ್ಲಿ ಮದ್ದೂರು ತಾಲೂಕಿನ ಏಳು ಜನ ವಿಕಲಚೇತನರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಿದ್ದು, ಫಲಾನುಭವಿಗಳು ವಾಹನಗಳನ್ನು ಸುರಕ್ಷಿತವಾಗಿ ಇಟ್ಟುಕೊಂಡು ಅಗತ್ಯ ಕಾರ್ಯಗಳಿಗೆ ಬಳಸಿಕೊಳ್ಳುವಂತೆ ಕಿವಿಮಾತು ಹೇಳಿದರು.ಯುವ ಮುಖಂಡ ಹಾಗೂ ಭಾರತಿ ವಿದ್ಯಾಸಂಸ್ಥೆ ಮುಖ್ಯ ನಿರ್ವಾಣಾಧಿಕಾರಿ ಆಶಯ್ ಮಧು ಮಾತನಾಡಿ, ಸಮಾಜದಲ್ಲಿ ವಿಕಲಚೇತನರಿಗೆ ವಿಶೇಷ ನೆರವು ನೀಡಲು ಸರ್ಕಾರದ ಜತೆ ಸಂಘ ಸಂಸ್ಥೆಗಳು ಕೈಜೋಡಿಸಬೇಕು. ವಿಕಲಚೇತನರನ್ನು ಸಮಾಜದಲ್ಲಿ ಮುಖ್ಯ ಭೂಮಿಕೆಗೆ ತಂದು ಅವರ ಕಲ್ಯಾಣಕ್ಕೆ ಸಹಕರಿಸಬೇಕು ಎಂದು ತಿಳಿಸಿದರು.
ವಿಶೇಷ ಯೋಜನೆಯಲ್ಲಿ ತ್ರಿಚಕ್ರ ಸ್ಕೂಟರ್ ಗಳನ್ನು ಪಡೆದ ಫಲಾನುಭವಿಗಳು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಸಂಚಾರ ಸುರಕ್ಷಣೆ, ಕಡ್ಡಾಯವಾಗಿ ಹೆಲ್ಮೆಟ್ ಬಳಸಿ ಜಾಗರೂಕತೆಯಿಂದ ನಿಯಮಿತ ವೇಗಮಿತಿಯಲ್ಲಿ ವಾಹನಗಳನ್ನು ಚಲಾಯಿಸಬೇಕು ಎಂದರು.ಫಲಾನುಭವಿಗಳಾದ ಮದ್ದೂರು ತಾಲೂಕಿನ ಮಣಿಗೆರೆ ಗ್ರಾಮದ ಪ್ರೇಮಾಪ್ರಸಾದ್, ಎಸ್.ಐ. ಹೊನ್ನಲಗೆರೆ ಗ್ರಾಮದ ಎಚ್. ಸಿ.ಪೂರ್ವಿಕ, ಸಾದೊಳಲು ಎಸ್. ಪಿ.ಪೂರ್ಣಿಮಾ, ಸೊಳ್ಳೆಪುರ ರಮೇಶ್, ಕಾರ್ಕಳ್ಳಿ ಬಸವರಾಜು, ಹುಣ್ಣನದೊಡ್ಡಿ ಚಿಕ್ಕಣ್ಣ, ಹನುಮಂತನಗರದ ಶಂಕರಯ್ಯ ಅವರಿಗೆ ತ್ರಿಚಕ್ರ ಸ್ಕೂಟರ್ಗಳನ್ನು ವಿತರಿಸಲಾಯಿತು.
ಈ ವೇಳೆ ತಾಪಂ ಮಾಜಿ ಸದಸ್ಯ ಭರತೇಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಣಿಗೆರೆ ಕಬ್ಬಾಳಯ್ಯ, ಕಾರ್ಕಳ್ಳಿ ಸ್ವರೂಪ್ ಚಂದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.