ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಪದವಿ ಪಡೆದುಕೊಳ್ಳತ್ತಿರುವ ವಿದ್ಯಾರ್ಥಿಗಳು ಧೈರ್ಯವಾಗಿ ಮಾತನಾಡುವ, ಪ್ರಶ್ನಿಸುವ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಹೇಳಿದರು.ತಾಲೂಕಿನ ಚಿನಕುರಳಿ ಗ್ರಾಮದ ಎಸ್ಟಿಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಮೊದಲ ವರ್ಷದ ಘಟಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಓದಿನ ಜೊತೆಗೆ ವಿದ್ಯಾರ್ಥಿಗಳು ತಾಳ್ಮೆ, ಸಂಯಮ, ಶಿಸ್ತು ಬೆಳೆಸಿಕೊಂಡು ಶಿಕ್ಷಣವನ್ನು ಉನ್ನತೀಕರಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದರು.
ಗುಣಮಟ್ಟದ ಶಿಕ್ಷಣ ಜೊತೆಗೆ ಎಲ್ಲ ರೀತಿ ಸವಲತ್ತು ಒದಗಿಸಿಕೊಡುವ ಮೂಲಕ ಎಸ್ಟಿಜಿ ಶಿಕ್ಷಣ ಸಂಸ್ಥೆ ಗ್ರಾಮೀಣ ಮಕ್ಕಳಿಗೆ ಸಹಕಾರಿಯಾಗಿ ಕೆಲಸ ಮಾಡುತ್ತಿದೆ. ಘಟಿಕೋತ್ಸವ ಎನ್ನುವುದು ಒಂದು ಪ್ರಮುಖ ಘಟ್ಟ. ಮುಂದೆ ಸ್ಪರ್ಧಾತ್ಮಕ ಯುಗದಲ್ಲಿ ಕಠಿಣ ಪರಿಶ್ರಮದೊಂದಿಗೆ ಸಾಧನೆ ಮಾಡಬೇಕು ಎಂದರು.ಸಂಸ್ಥೆ ಅಧ್ಯಕ್ಷ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ನಗರ ಪ್ರದೇಶದ ಮಕ್ಕಳಿಗೆ ಸಿಗುತ್ತಿರುವ ಗುಣಮಟ್ಟದ ಶಿಕ್ಷಣ ಗ್ರಾಮೀಣ ಪ್ರದೇಶದ ಮಕ್ಕಳಿಗೂ ದೊರೆಯಬೇಕು ಎಂಬ ಆಶಯದೊಂದಿಗೆ ಎಸ್ಟಿಜಿ ಶಿಕ್ಷಣ ಸಂಸ್ಥೆ ಆರಂಭಿಸಲಾಯಿತು. ಪ್ರಸ್ತುತ ಸಂಸ್ಥೆಯಲ್ಲಿ 3 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ ಎಂದರು.
ಸಂಸ್ಥೆಯಲ್ಲಿ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ (ಮೆಡಿಕಲ್) ಶಿಕ್ಷಣವನ್ನು ಆರಂಭಿಸಿ ನಮ್ಮ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು ಎನ್ನುವುದು ನನ್ನ ಆಶಯವಾಗಿದೆ ಎಂದರು.ಮಕ್ಕಳ ಶೈಕ್ಷಣಿಕ ಪ್ರಗತಿಗೆ ತಂದೆ-ತಾಯಿಗಳು ಸಾಕಷ್ಟು ಪರಿಶ್ರಮ ಪಡುತ್ತಾರೆ. ಅದನ್ನು ಅರಿತು ವಿದ್ಯಾರ್ಥಿಗಳು ಚನ್ನಾಗಿ ಓದಿ ಭವಿಷ್ಯ ರೂಪಿಸಿ ಪೋಷಕರಿಗೆ ನೆರವಾಗಬೇಕು ಎಂದರು.
ನಾನು 2006-07ರಲ್ಲಿ ಶಾಸಕನಾಗಿ ಕೆಲಸ ಮಾಡುವಾಗ ರಾಜ್ಯದಲ್ಲಿ ದೊಡ್ಡ ಶಿಕ್ಷಣ ಕ್ರಾಂತಿಯೇ ನಡೆಯಿತು. ಸ್ವಾತಂತ್ರ್ಯ ಬಂದು ಅಷ್ಟು ದಿನಗಳಲ್ಲಿ ಎಷ್ಟು ಶಾಲಾ-ಕಾಲೇಜುಗಳಿದ್ದವೂ ಅಷ್ಟೇ ಶಾಲಾ-ಕಾಲೇಜುಗಳನ್ನು ಅಂದಿನ ಸಿಎಂ ಆಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರು ಮಂಜೂರು ಮಾಡಿದರು. ನಮ್ಮ ಕ್ಷೇತ್ರದಲ್ಲಿ ಹೊಸದಾಗಿ ಡಿಗ್ರಿ, ಪದವಿ ಪೂರ್ವ, ಪ್ರೌಢಶಾಲೆಗಳು ಹೊಸದಾಗಿ ಆರಂಭಿಸಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನೆರವಾಗುವ ಕೆಲಸ ಮಾಡಿದ್ದೇನೆ ಎಂದರು.ಸಿಇಒ ಸಿ.ಪಿ.ಶಿವರಾಜು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಉತ್ತಮವಾಗಿ ವಿದ್ಯಾಭ್ಯಾಸ ಮಾಡಬೇಕು. ಮಕ್ಕಳ ಬಗ್ಗೆ ಪೋಷಕರು ಸಾಕಷ್ಟು ಕನಸ್ಸು ಕಂಡಿರುತ್ತಾರೆ. ಪೋಷಕರ ಕನಸ್ಸು ನನಸು ಮಾಡುವ ಜವಾಬ್ದಾರಿ ಪ್ರತಿಯೊಬ್ಬ ವಿದ್ಯಾರ್ಥಿಗಳ ಮೇಲಿದೆ ಎಂದರು.
ಇದೇ ವೇಳೆ ಸಂಸ್ಥೆಯ 92 ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು. ವಿದ್ಯಾರ್ಥಿಗಳಿಗೆ ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಪದವಿ ಪ್ರಮಾಣ ಪತ್ರ ವಿತರಣೆ ಮಾಡಿದರು. ಸಮಾರಂಭದಲ್ಲಿ ಆಡಳಿತಾಧಿಕಾರಿ ನಿವೇದಿತನಾಗೇಶ್, ಪ್ರಾಂಶುಪಾಲ ಡಾ.ನಿಶಾಂತ್ ಎ. ನಾಯ್ಡು, ಎಂ.ಎನ್.ಕುಮಾರ್, ಸೇರಿದಂತೆ ಉಪನ್ಯಾಸಕರು ಹಾಜರಿದ್ದರು.