- ಚನ್ನಗಿರಿ ಕ್ಷೇತ್ರದಲ್ಲಿ ₹6.36 ಕೋಟಿ ವೆಚ್ಚದ ವಿವಿಧ ಕಾಮಗಾರಿಗೆ ಗುದ್ದಲಿಪೂಜೆ
- ನನ್ನ ಅಭಿವೃದ್ಧಿ ವೇಗಕ್ಕೆ ಅಧಿಕಾರಿಗಳು ಸ್ಪಂದಿಸಬೇಕು: ಶಾಸಕ- - -
ಕನ್ನಡಪ್ರಭ ವಾರ್ತೆ ಚನ್ನಗಿರಿಚನ್ನಗಿರಿ ವಿಧಾನಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ. ಕ್ಷೇತ್ರದಲ್ಲಿ ಶಾಸಕನಾದ ಮೇಲೆ ಅಭಿವೃದ್ಧಿ ಪರ್ವವೇ ಪ್ರಾರಂಭವಾಗಿದೆ ಎಂದು ಶಾಸಕ ಬಸವರಾಜು ವಿ. ಶಿವಗಂಗಾ ಹೇಳಿದರು.
ಅವರು ಬುಧವಾರ ₹3 ಕೋಟಿ ವೆಚ್ಚದಲ್ಲಿ ಸಂತೆಬೆನ್ನೂರು- ಕೋಗಲೂರು ರಸ್ತೆ, ಸಿದ್ದನಮಠ ಗ್ರಾಮದಲ್ಲಿ ₹30 ಲಕ್ಷ ವೆಚ್ಚದಲ್ಲಿ ದೇವಾಲಯ ನಿರ್ಮಾಣ, ತೋಪೇನಹಳ್ಳಿ ಗ್ರಾಮದಲ್ಲಿ ₹14.5 ಲಕ್ಷ ವೆಚ್ಚದಲ್ಲಿ ಶಾಲಾ ಕೊಠಡಿ ನಿಮಾಣ, ಮಂಟರಘಟ್ಟ ಗ್ರಾಮದಲ್ಲಿ ₹13.5 ಲಕ್ಷ ವೆಚ್ಚದಲ್ಲಿ ಶಾಲಾ ಕೊಠಡಿ ನಿರ್ಮಾಣ, ಚಿಕ್ಕಬೆನ್ನೂರು ಗ್ರಾಮದಲ್ಲಿ ₹20 ಲಕ್ಷ ವೆಚ್ಚದ ಅಂಗನವಾಡಿ ಕೇಂದ್ರದ ನಿರ್ಮಾಣ, ಸಂತೆಬೆನ್ನೂರು ಗ್ರಾಮದಲ್ಲಿ ₹58 ಲಕ್ಷ ವೆಚ್ಚದ ಕೆ.ಪಿ.ಎಸ್. ಶಾಲೆ ನಿರ್ಮಾಣ, ಚನ್ನಗಿರಿಯ ತರಳಬಾಳು ವೃತ್ತದಿಂದ ನಲ್ಲೂರು ಗ್ರಾಮದವರೆಗೆ ₹2 ಕೋಟಿ ವೆಚ್ಚದ ರಸ್ತೆ ನಿರ್ಮಾಣಕ್ಕೆ ಗುದ್ದಲಿಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಜನತೆ ನೀಡಿರುವ 5 ವರ್ಷಗಳ ಅಧಿಕಾರದ ಅವಧಿಯಲ್ಲಿ ಚನ್ನಗಿರಿ ಕ್ಷೇತ್ರವನ್ನು ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಲಿದ್ದೇನೆ. ನನ್ನ ಅಭಿವೃದ್ಧಿಯ ವೇಗಕ್ಕೆ ಅಧಿಕಾರಿಗಳು ಸಹ ಸ್ಪಂದಿಸಿ ಕೆಲಸ ಮಾಡಬೇಕು. ಕ್ಷೇತ್ರದ ಜನತೆ ನನಗೆ ಕೇಳುವ ಮೊದಲೇ ಅವರ ಸಮಸ್ಯೆಗಳನ್ನು ಅರಿತು ಕೆಲಸ ಮಾಡುವವನು ನಾನು. ಚನ್ನಗಿರಿಯಿಂದ ಶಿವಮೊಗ್ಗಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಹದಗೆಟ್ಟಿದ್ದು, ಶೀಘ್ರದಲ್ಲಿಯೇ ಈ ರಸ್ತೆಯ ಕಾಮಗಾರಿ ಕೆಲಸವನ್ನು ಪ್ರಾರಂಭಿಸಲಾಗುವುದು ಎಂದರು.
ನಮ್ಮ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತಂದು ವಿರೋಧ ಪಕ್ಷದವರ ಟೀಕೆಗಳಿಗೆ ಅಭಿವೃದ್ಧಿ ಮೂಲಕವೇ ಉತ್ತರ ನೀಡುತ್ತಿದೆ. ನಾನು ಶಾಸಕನಾದ ಮೇಲೆ ಕ್ಷೇತ್ರದ ಪ್ರತಿಯೊಂದು ಗ್ರಾಮಗಳಲ್ಲಿ ಒಂದಲ್ಲಾ ಒಂದು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಮುಂದೆ ಬರಲಿರುವ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನೂ ನಮ್ಮ ಪಕ್ಷದ ಕಾರ್ಯಕರ್ತರು ಧೈರ್ಯದಿಂದ ಮಾಡಬಹುದು. ಈ ದಿನ ₹6.36 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ ನಡೆಸಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಇಲಾಖೆಯ ಅಭಿಯಂತರ ರವಿಕುಮಾರ್, ಚಿಕ್ಕೂಲಿಕೆರೆ ಶಿವಲಿಂಗಪ್ಪ, ಪುರಸಭೆಯ ಮಾಜಿ ಸದಸ್ಯರಾದ ಜಿ.ನಿಂಗಪ್ಪ, ಸೈಯ್ಯಾದ್ ಗೌಸ್ ಪೀರ್, ತನ್ವೀರ್, ಜ್ಯೋತಿ ಕೊಟ್ರೇಶ್ ಕೋರಿ, ಪುರಸಭೆ ಮುಖ್ಯಾಧಿಕಾರಿ ಜೆ.ವಿ.ಮಂಜುನಾಥ್, ಅಭಿಯಂತರ ಮಂಜುನಾಥ್, ಅಜ್ಜಿಹಳ್ಳಿ ಗ್ರಾಪಂ ಕಾರ್ಯದರ್ಶಿ ಕುಮಾರಪ್ಪ ಮೊದಲಾದವರು ಹಾಜರಿದ್ದರು.
- - --13ಕೆಸಿಎನ್ಜಿ2:
ಚನ್ನಗಿರಿಯ ತರಳಬಾಳು ವೃತ್ತದಿಂದ ನಲ್ಲೂರು ಗ್ರಾಮದವರೆಗೆ ₹2 ಕೋಟಿ ವೆಚ್ಚದ ರಸ್ತೆ ನಿರ್ಮಾಣಕ್ಕೆ ಶಾಸಕ ಬಸವರಾಜು ವಿ. ಶಿವಗಂಗಾ ಗುದ್ದಲಿಪೂಜೆಯನ್ನು ನೆರವೇರಿಸಿದರು.