ಸಾರಾಂಶ
ಅಗಸನಹಳ್ಳಿ ಗ್ರಾಮದಲ್ಲಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ವಾರ್ಷಿಕ ಶಿಬಿರದ ಯುವಜನತೆ ಮತ್ತು ಸಾಮಾಜಿಕ ಜವಾಬ್ದಾರಿಗಳು, ಪರಿಸರ ಸಂರಕ್ಷಣೆ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಎಫ್.ಪಿ.ಎಐ ಪೂರ್ವಾಧ್ಯಕ್ಷ ಎಚ್. ರಮೇಶ್ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ವಿಶ್ವದಲ್ಲೇ ಹೆಚ್ಚಿನ ಯುವಶಕ್ತಿ ಹೊಂದಿರುವ ದೇಶ ಭಾರತವಾಗಿದ್ದು ಯುವ ಜನತೆ ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಿದರೆ ದೇಶದ ಅಭಿವೃದ್ಧಿ ಸಾಧ್ಯ ಎಂದು ಶಿವಮೊಗ್ಗದ ಎಫ್.ಪಿ.ಎ.ಐ ಪೂರ್ವಾಧ್ಯಕ್ಷ ಎಚ್. ರಮೇಶ್ ಹೇಳಿದರು.ಅಗಸನಹಳ್ಳಿಯಲ್ಲಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ ಯುವಜನತೆ ಮತ್ತು ಸಾಮಾಜಿಕ ಜವಾಬ್ದಾರಿಗಳು, ಪರಿಸರ ಸಂರಕ್ಷಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಯುವಜನತೆ ಮೊಬೈಲ್ ಹಾಗೂ ಹಣದ ಹಿಂದೆ ಓಡುತ್ತಿದ್ದಾರೆ. ಇದರಿಂದಾಗಿ ಸಾಮಾಜಿಕವಾಗಿ ದೇಶಕ್ಕೆ ನ್ಯಾಯ ಕೊಡುವ ಕೆಲಸವಾಗುತ್ತಿಲ್ಲ. ಸ್ವಾರ್ಥದ ಬದುಕು ಕಟ್ಟಿಕೊಳ್ಳುತ್ತಿದ್ದಾರೆ ಹೊರತು ದೇಶಾಭಿಮಾನ, ದೇಶಭಕ್ತಿ ಕಡಿಮೆಯಾಗುತ್ತಿದೆ. ಶೇ.40 ರಷ್ಟಿರುವ ಯುವಕರು ದೇಶದ ಆಸ್ತಿಯಾಗಿದ್ದಾರೆ. ಇವರನ್ನು ಸದ್ಭಳಕೆ ಮಾಡಿಕೊಂಡರೆ ದೇಶದ ಅಭಿವೃದ್ದಿ ಖಚಿತ ಎಂದರು.ಘನತ್ಯಾಜ್ಯ ಹಾಗೂ ಪ್ಲಾಸ್ಟಿಕ್ ಕಸಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ತ್ಯಾಜ್ಯ ವಸ್ತುಗಳನ್ನು ಸರಿಯಾಗಿ ಬಳಸಿಕೊಂಡು ಗೊಬ್ಬರ ಮಾಡಿಕೊಳ್ಳಬೇಕು. ಪ್ಲಾಸ್ಟಿಕ್ ಕಸವನ್ನು ಸುಡಬಾರದು. ಬದಲಾಗಿ ಪುನರ್ ಬಳಕೆ ಮಾಡಬೇಕು. ಜೊತೆಗೆ ಕಾಡು ಜಾತಿಯ ಸಸಿಗಳನ್ನು ನೆಡುವುದರ ಮೂಲಕ ಪರಿಸರ ರಕ್ಷಣೆ ಮಾಡಬೇಕು ಎಂದರು.
ವೇದಿಕೆಯಲ್ಲಿ ಪರಶುರಾಮ್ ಆರ್, ನಾಗರಾಜ್ ನಾಯ್ಕ, ಹರ್ಷ ಪಿ, ಕೇಶವ, ದೇವೇಂದ್ರ, ಸಂದೇಶ್ ಬಿ. ರಾಜುನಾಯ್ಕ, ರುದ್ರಮುನಿ, ಪರಮೇಶ್ವರಪ್ಪ ಎಲ್, ಸವಿತಾ ಜನಾರ್ಧನ್, ಕಾರ್ತಿಕ್ ಆರ್, ಸುನಿತಾ ರವಿ, ವಿಜಯಮ್ಮ ಲೋಕೇಶ್, ಸರೋಜಮ್ಮ ಸೇರಿದಂತೆ ಇತರರಿದ್ದರು.