ಸರ್ಕಾರದ ಯೋಜನೆ ಸಮರ್ಪಕ ಬಳಕೆಯಾದಾಗ ಗ್ರಾಮಗಳ ಅಭಿವೃದ್ದಿ ಸಾಧ್ಯ

| Published : Nov 05 2025, 02:00 AM IST

ಸರ್ಕಾರದ ಯೋಜನೆ ಸಮರ್ಪಕ ಬಳಕೆಯಾದಾಗ ಗ್ರಾಮಗಳ ಅಭಿವೃದ್ದಿ ಸಾಧ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಚಳ್ಳಕೆರೆ ತಾಲೂಕಿನ ರೇಣುಕಾಪುರ ಗ್ರಾಮ ಪಂಚಾಯಿತಿಯ ರೇಣುಕಾಪುರ ಗ್ರಾಮದಲ್ಲಿ ನಡೆದ ಗ್ರಾಮಗಳ ಸಮಗ್ರ ಪ್ರಗತಿಯ ಆಶಯ ಹೊಂದಿದ ಕಾಯಕ ಗ್ರಾಮ ಕಾರ್ಯಕ್ರಮವನ್ನು ರಾಜ್ಯ ನೋಡಲ್ ಅಧಿಕಾರಿ ಜಾಫರ್ ಷರೀಫ್ ಸುತಾರ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಸರ್ಕಾರ ನೀಡುವ ಅನುದಾನವನ್ನು ಸೂಕ್ತ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ಗ್ರಾಮಗಳ ಅಭಿವೃದ್ಧಿಗೆ ಪ್ರತಿಯೊಬ್ಬರು ಕೈಜೋಡಿಸಬೇಕು. ಗ್ರಾಮಗಳ ಅಭಿವೃದ್ಧಿಯಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಸರ್ಕಾರ ಯೋಜನೆಗಳ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಆಡಳಿತ ಉಪ ಕಾರ್ಯದರ್ಶಿ ಹಾಗೂ ರಾಜ್ಯ ನೋಡಲ್ ಅಧಿಕಾರಿ ಜಾಫರ್ ಷರೀಫ್ ಸುತಾರ್ ತಿಳಿಸಿದರು.

ತಾಲೂಕಿನ ರೇಣುಕಾಪುರ ಗ್ರಾಮ ಪಂಚಾಯಿತಿಯ ರೇಣುಕಾಪುರ ಗ್ರಾಮದಲ್ಲಿ ನಡೆದ ಗ್ರಾಮಗಳ ಸಮಗ್ರ ಪ್ರಗತಿಯ ಆಶಯ ಹೊಂದಿದ ಕಾಯಕ ಗ್ರಾಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಗ್ರಾಮಗಳ ಅಭಿವೃದ್ಧಿಗೆ 2025-26ನೇ ಸಾಲಿನ ಬಜೆಟ್‌ನಲ್ಲಿ ಕಾಯಕ ಗ್ರಾಮವೆಂಬ ಪರಿಕಲ್ಪನೆ ಘೋಷಿಸಿ ಗ್ರಾಮಗಳ ಅಭಿವೃದ್ಧಿಗೆ ಮುಂದಾಗಿದ್ದಾರೆ. ಅವುಗಳ ಅನುಷ್ಠಾನವನ್ನು ಅಧಿಕಾರಿಗಳು ಸಮರ್ಪಕವಾಗಿ ಮಾಡಬೇಕಿದೆ ಎಂದರು.

ರೇಣುಕಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಾನಜ್ಜ ಮಾತನಾಡಿ, ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಎಂಬ ಕಲ್ಪನೆಯನ್ನು ಮಹಾತ್ಮ ಗಾಂಧಿಜಿ ಹೊಂದಿದ್ದರು, ಅದರಂತೆ ಸರ್ಕಾರಗಳು ಹಲವಾರು ಯೋಜನೆಗಳ ಮೂಲಕ ಗ್ರಾಮದ ಅಭಿವೃದ್ಧಿಗೆ ಪಣತೊಟ್ಟಿದೆ. ಅವುಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಜವಾಬ್ದಾರಿ ನಮ್ಮದಾಗಿದೆ. ಜನರು, ಅಧಿಕಾರಿಗಳು ಸೂಕ್ತವಾಗಿ ಸದ್ಬಳಕೆ ಮಾಡಿಕೊಂಡಾಗ ಸರ್ಕಾರದ ದೇಯೋದ್ದೇಶಕ್ಕೆ ಸಹಕರಿಸಿದಂತಾಗುತ್ತದೆ ಎಂದರು.

ಗ್ರಾಪಂ ಸದಸ್ಯರಾದ ವೀರೇಶ, ಜಗಳೂರಪ್ಪ, ರಾಮಕ್ಕ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ದಯಾನಂದಸ್ವಾಮಿ, ಕಿರಿಯ ಅಭಿಯಂತರೆ ರಮ್ಯ, ಜಲಜೀವನ್ ಮಿಷನ್ ಯೋಜನೆಯ ಜಿಲ್ಲಾ ಯೋಜನೆಯ ವ್ಯವಸ್ಥಾಪಕ ಮಂಜುನಾಥ್ ಎಸ್ ನಾಡರ್, ಜಿಲ್ಲಾ ಐಇಸಿ ಸಮಾಲೋಚಕ ಬಿ.ಸಿ.ನಾಗರಾಜ್, ಕೆಎಸ್ಆರ್ಡಬ್ಲ್ಯೂಎಸ್ಪಿ ಸಮಾಲೋಚಕ ಕಿರಣ್ ಕುಮಾರ್ ಪಾಟೇಲ್, ಗೀತಾಲಕ್ಷ್ಮೀ, ಯಲ್ಲಪ್ಪ, ರೇಣುಕಾಪುರ ಗ್ರಾಮ ಪಂಚಾಯಿತಿ ಲೆಕ್ಕ ಸಹಾಯಕ ವೀರನಾಯಕ ಮುಂತಾದವರು ಉಪಸ್ಥಿತರಿದ್ದರು.