ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಕಾರಜೋಳ ಬಳಿ ಬಾಕಿ ಉಳಿದಿರುವ ೫೦೦ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತ ಗ್ರಾಮಗಳ ದೇಶ. ಹಳ್ಳಿಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾದಂತೆ. ಇದರಿಂದ ಗ್ರಾಮ ಸ್ವರಾಜ್ಯ ಸಾಧ್ಯಎಂದು ರಾಷ್ಟ್ರಪಿತ ಮಹಾತ್ಮಾಗಾಂಧಿ ಹೇಳಿದ್ದರು. ಆವರ ಆಶಯದಂತೆ ನಮ್ಮ ಸರಕಾರ ರೈತರು, ಬಡವರು ಸೇರಿದಂತೆಎಲ್ಲ ಜಾತಿ ವರ್ಗಗಳ ಕಲ್ಯಾಣಕ್ಕಾಗಿ ಯೋಜನೆಗಳನ್ನು ರೂಪಿಸಿದೆ. ಪಂಚ ಗ್ಯಾರಂಟಿ ಯೋಜನೆಗಳ ಜಾರಿಯಿಂದಾಗಿ ಸಮಾಜದಎಲ್ಲ ವರ್ಗದ ಜನರಿಗೆ ಶಕ್ತಿ ತುಂಬಲಾಗುತ್ತಿದೆ. ಗೃಹಲಕ್ಷ್ಮಿಯೋಜನೆಯಲ್ಲಿ ವಿಜಯಪುರ ಜಿಲ್ಲೆ ಮುಂಚೂಣಿಯಲ್ಲಿದೆ ಎಂದರು.
ಗೃಹಲಕ್ಷ್ಮಿಯುವನಿಧಿ, ಅನ್ನಭಾಗ್ಯ ಸೇರಿದಂತೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಕೊಟ್ಟ ಮಾತುಗಳನ್ನು ಉಳಿಸಿಕೊಂಡು, ನುಡಿದಂತೆ ನಡೆಯುತ್ತಿದ್ದೇವೆ ಎಂದರು.ಕಾರಜೋಳ ಬಳಿ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಭೂಮಿ ನೀಡಿದ ರೈತರ ಕುಟುಂಬಗಳಿಗೆ ಉದ್ಯೋಗಕಲ್ಪಿಸಲು ಕ್ರಮ ಕೈಗೊಳ್ಳುತ್ತೇವೆ. ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ರೂಪಿಸಿದ ನೀರಾವರಿ ಯೋಜನೆಗಳು ಈಗ ಉಂಟಾಗಿರುವ ಬರದ ತೀವ್ರತೆಯನ್ನು ಕಡಿಮೆ ಮಾಡಿವೆ. ಇದರಿಂದಾಗಿ ಪ್ರತಿವರ್ಷ ಬಳಸಲಾಗುತ್ತಿದ್ದ ನೀರಿನ ಟ್ಯಾಂಕರ್ಗಳ ಬಳಕೆ ಗಣನೀಯವಾಗಿ ಕಡಿಮೆಯಾಗಿದೆ. ಬರಪೀಡಿತ ಜಿಲ್ಲೆ ಎಂದು ಹಣೆಪಟ್ಟಿ ಹೊತ್ತಿದ್ದ ವಿಜಯಪುರದ ಇತಿಹಾಸವನ್ನು ಬದಲಿಸಲಾಗುತ್ತಿದೆ. ಜಲಸಂಪನ್ಮೂಲ ಇಲಾಖೆಯಲ್ಲಿ ಮಾಡಿರುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆಯಲ್ಲಿಯೂ ಛಾಪು ಮೂಡಿಸಲು ಯೋಜನೆಗಳನ್ನು ರೂಪಿಸಿದ್ದೇನೆ. ವಿಜಯಪುರ ಜಿಲ್ಲೆಯಲ್ಲಿ ಕನಿಷ್ಠ ೧೦ ಸಾವಿರ ಉದ್ಯೋಗ ಸೃಷ್ಠಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಇದಕ್ಕೂ ಮುನ್ನ ಸಚಿವರು ಶ್ರೀ ಬೀರಲಿಂಗೇಶ್ವರದೇವಸ್ಥಾನದಲ್ಲಿದರ್ಶನ ಪಡೆದರು. ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ, ಬಿ. ಡಿ. ಆಸಂಗಿ, ಸುಜಾತಾ ಕಳ್ಳಿಮನಿ, ಮಲ್ಲು ಪರಸಣ್ಣವರ, ರಾಜು ಕಂಬಾಗಿ, ಪಾಂಡುಜಾಧವ, ರಾಚಯ್ಯ ಮಠಪತಿ, ಕಾಂತುಒಡೆಯರ, ಪರಶುರಾಮ ಮಲಘಾಣ, ಸುರೇಶಜಾಧವ, ಬಸವರಾಜ ಪಾಯ್ಣಿ, ಶಿವಪ್ಪ ತಳವಾರ, ಮುದಕಪ್ಪ ಹಳಿಜೋಳ, ಕಲ್ಲಯ್ಯ ಹಿರೇಮಠ, ಯಲ್ಲಪ್ಪ ಆಸಂಗಿ ಇದ್ದರು.