ಚಿಕ್ಕಮಗಳೂರುಅಭಿವೃದ್ಧಿ ಕಾಮಗಾರಿ ನಡೆಯುವಾಗ ಗುತ್ತಿಗೆದಾರರು ಮುಖ್ಯವಲ್ಲ, ಕ್ಷೇತ್ರದ ಜನರು ಮುಖ್ಯ. ಸರ್ಕಾರ ಕೊಟ್ಟಿರುವ ಹಣ ಸದುಪಯೋಗ ಆಗಬೇಕು. ಗುಣಮಟ್ಟದ ರಸ್ತೆ ಆಗಬೇಕಷ್ಟೇ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಅಭಿವೃದ್ಧಿ ಕಾಮಗಾರಿ ನಡೆಯುವಾಗ ಗುತ್ತಿಗೆದಾರರು ಮುಖ್ಯವಲ್ಲ, ಕ್ಷೇತ್ರದ ಜನರು ಮುಖ್ಯ. ಸರ್ಕಾರ ಕೊಟ್ಟಿರುವ ಹಣ ಸದುಪಯೋಗ ಆಗಬೇಕು. ಗುಣಮಟ್ಟದ ರಸ್ತೆ ಆಗಬೇಕಷ್ಟೇ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.ರಾಂಪುರ- ಆದಿಶಕ್ತಿನಗರ ರಸ್ತೆ ಡಾಂಬರೀಕರಣ ಆರಂಭವಾಗಿರುವ ಕಾಮಗಾರಿಯನ್ನು ಶನಿವಾರ ವೀಕ್ಷಿಸಿ ಮಾತನಾಡಿದ ಅವರು, ಸರ್ಕಾರ ನೀಡಿರುವ ಹಣದಿಂದ ಜನರಿಗೆ ಅನುಕೂಲವಾಗಬೇಕು. ಇದು ಜನಪ್ರತಿನಿಧಿಯ ಕೆಲಸ ಎಂದರು.
ರಾಂಪುರ ಸರ್ಕಲ್ನಿಂದ ಆದಿಶಕ್ತಿನಗರ- ಕೆ.ಆರ್. ಪೇಟೆ, ಮಾಳಲೂರು ರಸ್ತೆಯವರೆಗೆ ಮೂರುವರೆ ಕಿಲೋ ಮೀಟರ್ ಅಂದಾಜು ₹8 ಕೋಟಿ ಇದಕ್ಕೆ 2024 ರ ಅಕ್ಟೋಬರ್ 30 ರಂದು ಗುದ್ದಲಿ ಪೂಜೆ ಮಾಡಲಾಗಿತ್ತು. ಇದಕ್ಕೆ ಕೆಲವರು ಮೊದಲು ತಾಂತ್ರಿಕ ಕಾರಣ ಒಡ್ಡಿದ್ದರು. ಆಗ ಸುಮ್ಮನಾಗಿದ್ದೆವು ಎಂದು ಹೇಳಿದ್ದರು.ಈ ಭಾಗದ ಜನ ಹಾಗೂ ಆಟೋ ಚಾಲಕರು ಮೊದಲು ರಾಂಪುರದಿಂದ ಕಾಮಗಾರಿ ಆರಂಭಿಸಬೇಕೆಂದು ಒತ್ತಾಯಿಸು ತ್ತಿದ್ದಾರೆ. ಹೀಗಾಗಿ ಅಧಿಕಾರಿಗಳಿಗೆ ಕಾಮಗಾರಿ ಆರಂಭಿಸುವಂತೆ ಸೂಚಿಸಿದ್ದೇನೆ. ಕಾರಣ, ರಾಂಪುರ, ಆದಿಶಕ್ತಿ ನಗರಗಳಲ್ಲಿ ಹೆಚ್ಚು ಮನೆಗಳಿರುವಂತಹ ಪ್ರದೇಶಗಳು, ಇಲ್ಲಿ ಪ್ರಾರಂಭ ಮಾಡುವ ಬದಲಿಗೆ ಮಳಲೂರು ರಸ್ತೆಯಿಂದ ಕಾಮಗಾರಿ ಆರಂಭಿಸಿದ್ದರು. ಹಾಗಾಗಿ, ತ್ವರಿತವಾಗಿ ಕಾಮಗಾರಿ ನಡೆಸುವಂತೆ ನಿರ್ದೇಶಿಸಿದ್ದೇನೆ ಎಂದರು.
ಕಳೆದ ಒಂದೂವರೆ ವರ್ಷಗಳಿಂದ ಜನರ ಒತ್ತಡ, ಯಾವುದೇ ಕಾರ್ಯಗಳಿಗೆ ಈ ಭಾಗದಲ್ಲಿ ಓಡಾಡದಂತಹ ಪರಿಸ್ಥಿತಿ ಇತ್ತು. ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಕೂಡ ಈ ರಸ್ತೆ ಕಾಮಗಾರಿಗೆ ಆಗ್ರಹಿಸುತ್ತಿದ್ದರು, ಪಕ್ಷಾತೀತವಾಗಿ ಜನರು ಕೇಳುತ್ತಿದ್ದರು. ಹಾಗಾಗಿ ಸಂಬಂಧಪಟ್ಟವರಿಗೆ ಗಟ್ಟಿಯಾಗಿ ಮಾತನಾಡಿದರ ಫಲ ಶನಿವಾರ ರಾಂಪುರದಿಂದ ಕೆಲಸ ಆರಂಭಗೊಂಡಿದೆ ಎಂದು ಹೇಳಿದರು.ಈ ಕಾಮಗಾರಿ ಹಿಂದಿನ ಸರ್ಕಾರದಲ್ಲಿ ಮಂಜೂರಾಗಿದ್ದರೂ ನಂತರದಲ್ಲಿ ಪತ್ರ ವ್ಯವಹಾರ ಆರಂಭಿಸಿದೆ. ಕಾಮಗಾರಿ ಆರಂಭಗೊಂಡಿದೆ ಆದಷ್ಟು ಬೇಗ ಕೆಲಸವನ್ನು ಮುಗಿಸಬೇಕು ಲೋಕಾರ್ಪಣೆಗೊಳಿಸಬೇಕೆಂಬ ಉದ್ದೇಶದಿಂದ ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಂಗನಾಥ್, ಉಲ್ಲಾಸ್, ಪರಮೇಶ್, ಬೇಬಿ ಜಾನ್, ವಾಜಿದ್, ಕಾರ್ಯಪಾಲಕ ಎಂಜಿನಿಯರ್ ದಿವಾಕರ್ ಹಾಜರಿದ್ದರು.