ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗೆ ₹38 ಕೋಟಿ ಅನುದಾನ ಮಂಜೂರು: ಶಾಸಕ ಆರ್.ವಿ. ದೇಶಪಾಂಡೆ

| N/A | Published : Jun 21 2025, 12:49 AM IST / Updated: Jun 21 2025, 02:17 PM IST

money
ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗೆ ₹38 ಕೋಟಿ ಅನುದಾನ ಮಂಜೂರು: ಶಾಸಕ ಆರ್.ವಿ. ದೇಶಪಾಂಡೆ
Share this Article
  • FB
  • TW
  • Linkdin
  • Email

ಸಾರಾಂಶ

ಹಾಲಕ್ಕಿ ಮತ್ತು ಕುಣುಬಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರವು ಮತ್ತೊಮ್ಮೆ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ.

ಹಳಿಯಾಳ: ಹಾಲಕ್ಕಿ ಮತ್ತು ಕುಣುಬಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರವು ಮತ್ತೊಮ್ಮೆ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.ಶುಕ್ರವಾರ ತಮ್ಮ ನಿವಾಸದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ಹಾಲಕ್ಕಿ ಮತ್ತು ಕುಣುಬಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಯತ್ನವನ್ನು ಹಲವಾರು ವರ್ಷಗಳಿಂದ ನಡೆದಿದೆ. ನಾವು ಕಳಿಸಿದ ಮನವಿ ಮತ್ತು ಪ್ರಸ್ತಾವನೆಯನ್ನು ಪ್ರತಿ ಬಾರಿಯೂ ಕೇಂದ್ರ ಸರ್ಕಾರವು ಒಂದಿಲ್ಲೊಂದು ಲೋಪ ಹುಡುಕಿ ತಿರಸ್ಕರಿಸುತ್ತಾ ಬಂದಿದೆ. ಆದರೆ ನಮ್ಮ ಪ್ರಯತ್ನ ಮುಂದುವರೆದಿದೆ ಎಂದರು.

ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಮೂರು ತಾಲೂಕುಗಳಲ್ಲಿ ಆಯ್ದ ರಸ್ತೆ ನಿರ್ಮಾಣ, ಡಾಂಬರೀಕರಣ, ಮತ್ತು ಪಿಯುಸಿ ಕಾಲೇಜು ಹಾಗೂ ಡಿಪ್ಲೋಮಾ ಕಾಲೇಜು ಅಭಿವೃದ್ಧಿಗಾಗಿ ಮತ್ತು ಆರೋಗ್ಯ ಇಲಾಖೆಯ ಸುಧಾರಣೆಗಾಗಿ ಹಾಗೂ ಬಾಂದಾರುಗಳ ಮತ್ತು ಕೆರೆಯ ದುರಸ್ತಿ ಕಾಮಗಾರಿಗಳಿಗಾಗಿ ರಾಜ್ಯ ಸರ್ಕಾರ ವಿವಿಧ ಯೋಜನೆಯಲ್ಲಿ ಅಂದಾಜು ₹38.31 ಕೋಟಿ ಅನುದಾನವನ್ನು ಮಂಜೂರು ಮಾಡಿದೆ ಎಂದು ದೇಶಪಾಂಡೆ ತಿಳಿಸಿದರು.

ಕಾಲೇಜು ಅಭಿವೃದ್ಧಿ:

ಹಳಿಯಾಳದಲ್ಲಿರುವ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಅವಶ್ಯಕವಾಗಿರುವ ಮೂಲಭೂತ ಸೌಲಭ್ಯಗಳ ನಿರ್ಮಾಣಕ್ಕೆ ₹2 ಕೋಟಿ ಮಂಜೂರಾಗಿದೆ. 6 ತರಗತಿ ಕೊಠಡಿಗಳು ಸೇರಿದಂತೆ ಪ್ರಯೋಗಾಲಯವನ್ನು ನಿರ್ಮಿಸಲಾಗುವುದೆಂದರು. ಸರ್ಕಾರಿ ಪಿಯು ಕಾಲೇಜಿನಲ್ಲಿ ಕಂಪ್ಯೂಟರ್ಸ್, ಡೆಸ್ಕ್ ಮತ್ತು ಸ್ಮಾರ್ಟ್ ಬೋರ್ಡ್‌ ಅಳವಡಿಸಲು ಇತ್ಯಾದಿ ಅಭಿವೃದ್ಧಿಗಳಿಗಾಗಿ ₹24 ಲಕ್ಷ ಮಂಜೂರಾಗಿದೆ ಎಂದರು.

ಹಳಿಯಾಳ ಮತ್ತು ಜೋಯಿಡಾ ತಾಲೂಕಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೊಸ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ನಿರ್ಮಾಣಕ್ಕಾಗಿ ₹4.55ಕೋಟಿ ಮಂಜೂರಾಗಿದೆ ಎಂದು ತಿಳಿಸಿದರು. ಹಳಿಯಾಳ ತಾಲೂಕಿನ ಕಾವಲವಾಡ, ಜೋಯಿಡಾ ತಾಲೂಕಿನ ಜೋಯಿಡಾ, ಬಜಾರಕುನಾಂಗ, ರಾಮನಗರಲ್ಲಿ ಎರಡು, ಉಳವಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಶಿವಪುರ ಮತ್ತು ಅಂಬೋಳಿ ಸೇರಿ ಒಟ್ಟು 7 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ನಿರ್ಮಾಣವಾಗಲಿವೆ. ತಲಾ ₹65 ಲಕ್ಷ ಖರ್ಚಾಗಲಿವೆ. ದಾಂಡೇಲಿಯಲ್ಲಿನ ಸಾರ್ವಜನಿಕ ಆಸ್ಪತ್ರೆಯ ವಿವಿಧ ಅಭಿವೃದ್ಧಿ ಕಾಮಗರಿಗಳಿಗಾಗಿ ₹5.75 ಕೋಟಿ ಮಂಜೂರಾಗಿದ್ದು, ಆಸ್ಪತ್ರೆಯ ಕಟ್ಟಡದ ನವೀಕರಣ ಆರಂಭಗೊಳ್ಳಲಿದೆ ಎಂದು ತಿಳಿಸಿದರು,

ತಾಲೂಕಿನಲ್ಲಿ ಇಂಡಿಯಾ ಇನ್ಫ್ರಾಸ್ಟ್ರಕ್ಚರ್‌ ಫೈನಾನ್ಸ್ ಕಂಪನಿ ಸಹಕಾರದಿಂದ ₹2.10 ಕೋಟಿ ಮಂಜೂರಾಗಿದೆ. ಈ ಅನುದಾನದಲ್ಲಿ ಜೋಯಿಡಾ ತಾಲೂಕಿನ ಆರೋಗ್ಯ ಮತ್ತು ಪೋಷಣಾ ಕ್ಷೇತ್ರವನ್ನು ಬಲಪಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು.

ಪ್ರಗತಿ ಪಥ ಯೋಜನೆಯಡಿ ಹಳಿಯಾಳ, ದಾಂಡೇಲಿ, ಜೋಯಿಡಾ ತಾಲೂಕಿನಲ್ಲಿ ₹30 ಕಿ.ಮೀ. ರಸ್ತೆ ಅಭಿವೃದ್ಧಿಗಾಗಿ ₹21.87 ಕೋಟಿ ಅನುದಾನ ಮಂಜೂರಾಗಿದೆ. ಈ ಅನುದಾನದಲ್ಲಿ ಹಳಿಯಾಳ ತಾಲೂಕಿನ ರಾಯಪಟ್ಟಣ-ಗರಡೊಳ್ಳಿ 3.16 ಕಿ.ಮೀ. ರಸ್ತೆ, ತತ್ವಣಗಿಯಿಂದ ಕುಮ್ಕಾನಟ್ಟಿ ಗೌಳಿವಾಡಾ (ವಾಯಾ ಹೊಸುರ) 4.07 ಕಿ.ಮೀ. ರಸ್ತೆ, ಅಮ್ಮನಕೊಪ್ಪದಿಂದ ಕುಮ್ಕಾನಟ್ಟಿ (ವಾಯಾ ಗಡಿಯಾಳ) 4.45ಕಿ.ಮೀ. ರಸ್ತೆ, ಡೋಣಶಿರಗೂರದಿಂದ ಬಡಾಶಿರಗೂರ (ವಾಯಾ ಬೊಮನಳ್ಳಿ) 4.07ಕಿ.ಮೀ. ರಸ್ತೆ, ಕೆರವಾಡದಿಂದ ಹಳಿಯಾಳ-ಧಾರವಾಡ ರಸ್ತೆ (ವಾಯಾ ಹವಗಿ) 3.65 ಕಿ.ಮೀ. ರಸ್ತೆ, ರಾಜ್ಯ ಹೆದ್ದಾರಿ 46ರಿಂದ 93 (ಕ್ಯಾದಗಿಕೆರೆ) (ವಾಯಾ ತಿಮ್ಮಾಪುರ) 2.17ಕಿ.ಮೀ. ರಸ್ತೆ, ಜೋಯಿಡಾ ತಾಲೂಕಿನ ಕೂಡಲಗಾಂವದಿಂದ ಅಮಶೇತವರೆಗೆ (ವಾಯಾ ಮಾಳಂಬಾ) 9.63 ಕಿ.ಮೀ., ಮಿಂಗೇಲಿದಿಂದ ಗುಂದವರೆಗೆ 2.17ಕಿಮಿ ರಸ್ತೆ ನಿರ್ಮಾಣ ಮಾಡಲಾಗುವುದು ಎಂದರು.

Read more Articles on