ಸಾರಾಂಶ
ಕನಕಾಚಲಪತಿ ದೇವಸ್ಥಾನದ ಸಹಯೋಗದಲ್ಲಿ ದಸರಾ ನಿಮಿತ್ತ "ದೇವಿ ಪುರಾಣ " ಕಾರ್ಯಕ್ರಮ । ಪ್ರವಚನಕಾರ ಸಂಗನಬಸಯ್ಯಸ್ವಾಮಿ
ಕನ್ನಡಪ್ರಭ ವಾರ್ತೆ ಕನಕಗಿರಿ
ದೇವಿ ಪುರಾಣದ ಕರ್ತೃ ಆಗಿರುವ ಸಚ್ಚಿದಾನಂದ ಅವಧೂತರ ಸನ್ನಿಧಾನದಲ್ಲಿ ಕಳೆದ ೩೫ ವರ್ಷಗಳಿಂದಲೂ ದೇವಿ ಪುರಾಣ ಕಾರ್ಯಕ್ರಮ ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ಪ್ರವಚನಕಾರ ಸಂಗನಬಸಯ್ಯಸ್ವಾಮಿ ಹೇಳಿದರು.ಪಟ್ಟಣದ ಸಂತೆ ಬಯಲು ಪರಿಸರದಲ್ಲಿನ ಸಚ್ಚಿದಾನಂದ ಅವಧೂತರ ಮಠದಲ್ಲಿ ಶ್ರೀ ಕನಕಾಚಲಪತಿ ದೇವಸ್ಥಾನದ ಸಹಯೋಗದಲ್ಲಿ ದಸರಾ ನಿಮಿತ್ತ "ದೇವಿ ಪುರಾಣ " ಕಾರ್ಯಕ್ರಮದಲ್ಲಿ ಅವರು ಸೋಮವಾರ ಮಾತನಾಡಿದರು. ಸಚ್ಚಿದಾನಂದ ಪ್ರಭುಗಳು ನಿದ್ರೆಯನ್ನು ದೂರ ಮಾಡಿ ದೇವಿಯನ್ನು ಒಲಿಸಿಕೊಂಡವರಾಗಿದ್ದಾರೆ. ನಮ್ಮೆಲ್ಲರಿಗೆ ಬೆಳಕು ನೀಡಿರುವ ಅವಧೂತರ ಮಠಕ್ಕೆ ಬಾಬಾ ರಾಮದೇವ್ ಅವರು ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಕನಕಾಚಲಪತಿ ದೇವಸ್ಥಾನದ ವತಿಯಿಂದ ದಸರಾ ಸಂದರ್ಭದಲ್ಲಿ ಅಚ್ಚುಕಟ್ಟಾಗಿ ದೇವಿ ಪುರಾಣ ಕಾರ್ಯಕ್ರಮ ನಡೆಯುತ್ತಿದೆ ಎಂದರು.
ನವರಾತ್ರಿಯಲ್ಲಿ ನಡೆಯುವ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ಪ್ರತಿ ತಿಂಗಳು ನಡೆಯುವಂತಾದರೆ ಚಿದಾನಂದ ಮಠ ಹೆಚ್ಚು ಪ್ರಚಲಿತವಾಗಲಿದೆ. ಇದರಿಂದ ಶ್ರೀಮಠ ಬೆಳೆವಣಿಗೆಯಾಗಲಿದೆ. ಭಕ್ತರ ಸಂಖ್ಯೆ ಹೆಚ್ಚಲಿದೆ. ದೇವಿ ಪುರಾಣದ ಪುಸ್ತಕವನ್ನು ರಚಿಸಿದ ಸಚ್ಚಿದಾನಂದರ ಮಠವು ಕನಕಗಿರಿ ಪಟ್ಟಣದಲ್ಲಿದ್ದು, ಇದರ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು ಎಂದು ತಿಳಿಸಿದರು.ಸುಳೇಕಲ್ನ ರಾಜರಾಜೇಶ್ವರಿ ಬ್ರಹನ್ಮಠದ ಶಿವನಂದಯ್ಯತಾತನವರಿಂದ ದೇವಿ ಪುರಾಣ ಪಠಿಸಿದರು.
ದೇವಸ್ಥಾನ ವ್ಯವಸ್ಥಾಪಕ ಸಿದ್ದಲಿಂಗಯ್ಯಸ್ವಾಮಿ, ಪ್ರಮುಖರಾದ ವಿಶ್ವರಾಧ್ಯಯ್ಯಸ್ವಾಮಿ ಚಿಂತಗುಂಟಿಮಠ, ಕಾಶಿಪತಿ ಕಮ್ಮಾರ,ಕನಕರೆಡ್ಡಿ ಮಹಲಿನಮನಿ, ಮಲ್ಲಪ್ಪ ಬಡಿಗೇರ, ಶೇಖರಪ್ಪ ಕಮ್ಮಾರ, ಪರಂಧಾಮರೆಡ್ಡಿ ಭೀರಳ್ಳಿ, ಭೀಮರೆಡ್ಡಿ ಓಣಿಮನಿ, ಪುಟ್ಟರಾಜ ಅರಳಹಳ್ಳಿ, ಬಸವರಾಜ ತೆಗ್ಗಿನಮನಿ, ಕೃಷ್ಣ ನಾಯಕ, ಯಂಕರೆಡ್ಡಿ ಓಣಿಮನಿ ಸೇರಿದಂತೆ ಮಹಿಳೆಯರು ಇದ್ದರು.ಸಂಗಟಿ-ಸಾರು ಸವಿಯುವ ಭಕ್ತರು:
ನವರಾತ್ರಿ ಒಂಬತ್ತು ದಿನಗಳ ಕಾಲ ರಾತ್ರಿ ವೇಳೆ ನಡೆಯುವ ಪುರಾಣ ಕಾರ್ಯಕ್ರಮ ಸಂಪನ್ನಗೊಂಡ ನಂತರ ಸಂಗಟಿ, ಸಾರು ತಯಾರಿಸಿ ಸಾಮೂಹಿಕವಾಗಿ ಪ್ರಸಾದ ಸವಿಯುವುದು ಇಂದಿಗೂ ರೂಢಿಯಲ್ಲಿದೆ. 35 ವರ್ಷಗಳ ಹಿಂದೆ ದೇವಿ ಪುರಾಣ ಆರಂಭಿಸಿದ ಹಿರಿಯರು ಸಂಗಟಿ-ಸಾರು ತಯಾರಿಸಿ ಭಕ್ತರಿಗೆ ಉಣಬಡಿಸುತ್ತಿದ್ದರು. ಅಂದಿನಿಂದ ಇಂದಿನವರೆಗೂ ಇದೇ ಪ್ರಸಾದ ನೀಡಲಾಗುತ್ತಿದೆ.ಸಂಗಟಿ-ಸಾರು ಸವಿಯಲು ದಿನ ನಿತ್ಯ ನೂರಾರು ಭಕ್ತರು ಇಲ್ಲಿಗೆ ಬರುವುದು ವಿಶೇಷ.