ಸಾರಾಂಶ
ಬೆಂಗಳೂರು : ನಿವೃತ್ತ ಡಿಜಿಪಿ ಓಂ ಪ್ರಕಾಶ್ ಭೀಕರ ಕೊಲೆ ಪ್ರಕರಣದ ತನಿಖೆ ಅಂತಿಮ ಹಂತ ತಲುಪಿದ್ದು, ಶೀಘ್ರದಲ್ಲೇ ಸಿಸಿಬಿ ಅಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವ ಸಾಧ್ಯತೆಯಿದೆ.
ಕೊಲೆ ಪ್ರಕರಣ ಸಂಬಂಧ ಓಂ ಪ್ರಕಾಶ್ ಅವರ ಪತ್ನಿ ಪಲ್ಲವಿ ಅವರನ್ನು ಬಂಧಿಸಿ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಲಾಗಿದೆ. ತಾನೇ ಕೊಲೆ ಮಾಡಿದ್ದಾಗಿ ವಿಚಾರಣೆ ವೇಳೆ ಅವರು ತಪ್ಪೊಪ್ಪಿಕೊಂಡಿದ್ದಾರೆ. ಕೊಲೆ ಘಟನೆ ವೇಳೆ ಪುತ್ರಿ ಕೃತಿ ಸಹ ಮನೆಯಲ್ಲೇ ಇದ್ದುದರಿಂದ ಆಕೆಯ ವಿರುದ್ಧವೂ ಪ್ರಕರಣ ದಾಖಲಿಸಲಾಗಿತ್ತು. ಆದರೆ, ತನಿಖೆ ವೇಳೆ ಆಕೆ ವಿರುದ್ಧ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ. ಹೀಗಾಗಿ ಸಿಸಿಬಿ ಪೊಲೀಸರು ಆರೋಪಿ ಪಲ್ಲವಿ ವಿರುದ್ಧ ಮಾತ್ರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಕೌಟುಂಬಿಕ ಕಾರಣಗಳಿಂದ ಹತ್ಯೆ:
ತನಿಖೆಯಲ್ಲಿ ಓಂ ಪ್ರಕಾಶ್ ಕೊಲೆಗೆ ಪ್ರಮುಖ ಎರಡು ಕಾರಣಗಳು ಪತ್ತೆಯಾಗಿವೆ. ಓಂ ಪ್ರಕಾಶ್ ಅವರು ಕುಟುಂಬದ ಬಗ್ಗೆ ತಳೆದ ನಿರ್ಲಕ್ಷ್ಯ ಹಾಗೂ ಕೌಟುಂಬಿಕ ಮನಸ್ತಾಪವೇ ಓಂ ಪ್ರಕಾಶ್ ಕೊಲೆಗೆ ಪ್ರಮುಖ ಕಾರಣ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಓಂ ಪ್ರಕಾಶ್ ಅವರು ಪತ್ನಿ ಮತ್ತು ಮಗಳ ಬಗ್ಗೆ ಹೆಚ್ಚಿನ ಗಮನ ಕೊಡುತ್ತಿರಲಿಲ್ಲ. ಮಗಳ ಮದುವೆ ಬಗ್ಗೆ ಆಸಕ್ತಿ ತೋರಲಿಲ್ಲ. ಆರ್ಥಿಕವಾಗಿ ಸದೃಢರಾಗಿದ್ದರೂ ಪತ್ನಿ ಮತ್ತು ಮಗಳಿಗೆ ಹೆಚ್ಚಿನ ಹಣ ಕೊಡುತ್ತಿರಲಿಲ್ಲ.
ಮನೆಯಲ್ಲಿ ಸಣ್ಣ ವಿಚಾರಕ್ಕೆ ಗಲಾಟೆಗಳು ಆದರೂ ಓಂ ಪ್ರಕಾಶ್ ಅವರು ತಮ್ಮ ತಂಗಿ ಮನೆಗೆ ಹೋಗುತ್ತಿದ್ದರು. ಈ ನಡುವೆ ಪಲ್ಲವಿ ಮತ್ತು ಆಕೆಯ ಪುತ್ರಿ ಮಾನಸಿಕ ಸಮಸ್ಯೆಗಳಿಗೆ ತುತ್ತಾಗಿದ್ದರು. ಪತಿ ತನ್ನನ್ನು ಕೊಲೆ ಮಾಡುತ್ತಾರೆ ಎಂದು ಪಲ್ಲವಿ ಆತಂಕಿತರಾಗಿದ್ದರು. ಹೀಗಾಗಿ ಪತಿ ಓಂ ಪ್ರಕಾಶ್ ಅವರನ್ನು ಪಲ್ಲವಿ ಬರ್ಬರವಾಗಿ ಕೊಲೆ ಮಾಡಿದ್ದಾರೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸದ್ಯ ಪ್ರಕರಣದ ತನಿಖೆ ಬಹುತೇಕ ಅಂತಿಮ ಹಂತ ತಲುಪಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವ ಸಾಧ್ಯತೆಯಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಏ.20ರಂದು ಬೆಂಗಳೂರಿನ ಎಚ್ಎಸ್ಆರ್ ಲೇಔಟ್ನಲ್ಲಿ ತಮ್ಮ ಮನೆಯಲ್ಲಿ ಊಟ ಮಾಡುವಾಗ 68 ವರ್ಷದ ಓಂಪ್ರಕಾಶ್ ಅವರನ್ನು ಪಲ್ಲವಿ ಚಾಕುವಿನಿಂದ 10ಕ್ಕೂ ಹೆಚ್ಚು ಬಾರಿ ಚುಚ್ಚಿ ಕೊಲೆಗೈದಿದ್ದರು. ಘಟನೆ ನಡೆದ ಒಂದು ದಿನ ಬಳಿಕ ಪೊಲೀಸರು ಪಲ್ಲವಿ ಅವರನ್ನು ಬಂಧಿಸಿದ್ದರು.