ಬಿಪಿಎಲ್ ಕಾರ್ಡ್‌ ಗಳನ್ನು ರದ್ದು ಮಾಡದಂತೆ ಆಗ್ರಹಿಸಿ ಪ್ರತಿಭಟನೆ

| Published : Nov 23 2024, 01:18 AM IST

ಸಾರಾಂಶ

ಒಂದು ಕಡೆ ಸರ್ಕಾರ ಗ್ಯಾರಂಟಿಗಳನ್ನು ಕೊಟ್ಟು, ಮತ್ತೊಂದು ಕಡೆ ಬಿಪಿಎಲ್ ಕಾರ್ಡ್‌ ಗಳನ್ನು ಕಿತ್ತುಕೊಂಡು ಹೊಟ್ಟೆಯ ಮೇಲೆ ಹೊಡೆಯುತ್ತಿದೆ

----

ಕನ್ನಡಪ್ರಭ ವಾರ್ತೆ ಮೈಸೂರು

ಅವೈಜ್ಞಾನಿಕವಾಗಿ ಲಕ್ಷಾಂತರ ಬಡವರ ಬಿಪಿಎಲ್ ಕಾರ್ಡ್‌ ಗಳನ್ನು ರದ್ದು ಮಾಡುತ್ತಿರುವ ರಾಜ್ಯ ಸರ್ಕಾರ ಕ್ರಮ ಖಂಡಿಸಿ, ಬಿಪಿಎಲ್ ಕಾರ್ಡ್‌ ಗಳನ್ನು ರದ್ದು ಮಾಡದಂತೆ ಆಗ್ರಹಿಸಿ ಕರ್ನಾಟಕ ಸೇನಾ ಪಡೆಯವರು ಮೈಸೂರಿನ ಹಳೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟಿಸಿದರು.

ರಾಜ್ಯ ಸರ್ಕಾರ ಬಡವರಿಗೆ ನೀಡಿರುವ ಬಿಪಿಎಲ್ ಕಾರ್ಡ್‌ ಗಳನ್ನು ಕಿತ್ತುಕೊಂಡು ಅವರ ಜೀವನವನ್ನೇ ನಾಶ ಮಾಡುತ್ತಿದೆ. ಜನತೆಗೆ 5 ಬಿಟ್ಟಿ ಭಾಗ್ಯಗಳನ್ನು ನೀಡಿ, ಈಗ ಆ ಭಾಗ್ಯಗಳಿಗೆ ಹಣ ಹೊಂದಿಸಲಾಗದೆ ಕಾರ್ಡ್‌ ಗಳನ್ನು ರದ್ದು ಮಾಡಿರುವುದು ಅತ್ಯಂತ ಕೆಟ್ಟ ನಡವಳಿಕೆ ಎಂದು ಅವರು ಆರೋಪಿಸಿದರು.

ಒಂದು ಕಡೆ ಸರ್ಕಾರ ಗ್ಯಾರಂಟಿಗಳನ್ನು ಕೊಟ್ಟು, ಮತ್ತೊಂದು ಕಡೆ ಬಿಪಿಎಲ್ ಕಾರ್ಡ್‌ ಗಳನ್ನು ಕಿತ್ತುಕೊಂಡು ಹೊಟ್ಟೆಯ ಮೇಲೆ ಹೊಡೆಯುತ್ತಿದೆ. ರಾಜ್ಯದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಬಿಪಿಎಲ್ ಕಾರ್ಡ್ ರದ್ದು ಮಾಡಿರುವುದು ಇತಿಹಾಸದಲ್ಲೇ ಇದೇ ಮೊದಲು. ಅದರಲ್ಲೂ ವಿಶೇಷವಾಗಿ ಅನ್ಯಧರ್ಮೀಯರ ಒಂದೇ ಒಂದು ಕಾರ್ಡ್‌ ಗಳನ್ನು ರದ್ದು ಮಾಡದೆ, ಕೇವಲ ಹಿಂದೂಗಳ ಕಾರ್ಡುಗಳನ್ನೇ ರದ್ದು ಮಾಡಿರುವುದು ಈ ಸರ್ಕಾರ ಹಿಂದೂ ವಿರೋಧಿ ಎಂದು ತೋರಿಸುತ್ತದೆ ಎಂದು ಅವರು ದೂರಿದರು.

ಬಿಪಿಎಲ್ ಕಾರ್ಡ್ ಕೇವಲ ಅಕ್ಕಿಗೆ ಮಾತ್ರ ಅಲ್ಲ. ಈ ಕಾರ್ಡ್‌ ನಿಂದ ಜನರು ಆಸ್ಪತ್ರೆಗೆ ತೆರಳಿ, ಅವರ ಆರೋಗ್ಯ ತಪಾಸಣೆ ಮಾಡಿಸಿಕೊಂಡು, ಅವರಿಗೆ ಜ್ವಲಂತ ಸಮಸ್ಯೆಗಳಾದ ಕ್ಯಾನ್ಸರ್, ಕಿಡ್ನಿ, ಹೃದಯ ಸಂಬಂಧಿತ ಕಾಯಿಲೆಗಳು ಬಂದರೆ, ಬಿಪಿಎಲ್ ಕಾರ್ಡ್ ನೀಡಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಈಗ ರಾಜ್ಯ ಸರ್ಕಾರ ನಿಜವಾಗಿಯೂ ನೈತಿಕತೆ ಇದ್ದರೆ, ಅವೈಜ್ಞಾನಿಕವಾಗಿ ರದ್ದು ಮಾಡಿರುವ 11 ಲಕ್ಷ ಬಿಪಿಎಲ್ ಕಾರ್ಡ್‌ ಗಳನ್ನು ಸರಿಪಡಿಸಬೇಕು ಎಂದು ಅವರು ಒತ್ತಾಯಿಸಿದರು.

ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಮುಖಂಡರಾದ ಕೃಷ್ಣಪ್ಪ, ಪ್ರಭುಶಂಕರ್, ಪ್ರಜೀಶ್, ಶಿವಕುಮಾರ್, ನಿತ್ಯಾನಂದ, ನರಸಿಂಹೇಗೌಡ, ಕುಮಾರ್, ಕೆ.ಸಿ. ಗುರುಮಲ್ಲಪ್ಪ, ವಿಜಯೇಂದ್ರ, ಸ್ವಾಮಿಗೌಡ, ನೇಹಾ, ಮಂಜುಳಾ, ಭಾಗ್ಯಮ್ಮ, ಎಚ್. ಗಿರೀಶ್, ರಘು ಅರಸ್, ರಾಧಾಕೃಷ್ಣ ಮೊದಲಾದವರು ಇದ್ದರು.