ಪ್ರತಿಯೊಬ್ಬರು ಧರ್ಮಚರಣೆ ತಮ್ಮ ತಮ್ಮ ಮನಗಳಲ್ಲಿ ಮಾಡಿಕೊಂಡು ಮಕ್ಕಳಿಗೆ ಶೈಕ್ಷಣಿಕ ವ್ಯವಸ್ಥೆ ಕಲ್ಪಿಸುವ ಮೂಲಕ ಮುಖ್ಯವಾಹಿನಿಗೆ ಬರಬೇಕು.

ಗಂಗಾವತಿ: ತ್ತಮ ಮಾರ್ಗದಲ್ಲಿ ನಡೆಯುವುದೇ ಧರ್ಮ, ಪ್ರತಿಯೊಬ್ಬರೂ ಧರ್ಮ ಮಾರ್ಗದಲ್ಲಿ ನಡೆಯುವ ಮೂಲಕ ಸುಂದರ ಬದುಕು ಕಟ್ಟಿಕೊಳ್ಳಬೇಕು. ಸಾಮೂಹಿಕ ವಿವಾಹಗಳಿಂದ ಆರ್ಥಿಕ ಹೊರೆ ಕಮ್ಮಿಯಾಗುತ್ತದೆ ಎಂದು ವಿಧಾನ ಪರಿಷತ್ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಹಾಲುಮತ ಸಮಾಜದಿಂದ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಶಿವಸಿದ್ಧ ಬೀರಲಿಂಗೇಶ್ವರ ದೇವಸ್ಥಾನದ ನೂತನ ರಥೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಹೊಸಳ್ಳಿ ಗ್ರಾಮಸ್ಥರು ಧರ್ಮ ಜಾಗೃತಿಯಿಂದ ರಥೋತ್ಸವ, ಸಾಮೂಹಿಕ ವಿವಾಹ ಹೀಗೆ ಜನಕ್ಕೆ ಉಪಯೋಗವಾಗುವ ಕಾರ್ಯಕ್ರಮ ಆಯೋಜಿಸುತ್ತಿರುವುದು ಉತ್ತಮ ಮಾರ್ಗವಾಗಿದೆ. ಈ ಹಿಂದೆ ನಮ್ಮ ತಂದೆಯವರು ಈ ದೇವಸ್ಥಾನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು. ಈಗ ನೂತನ ರಥ ಸಿದ್ಧಗೊಂಡಿದ್ದು, ಅದರ ಲೋಕಾರ್ಪಣೆಗೆ ನಾನು ಆಗಮಿಸಿದ್ದೇನೆ. ಈ ಗ್ರಾಮಕ್ಕೆ ಒಳ್ಳೆಯದಾಗಲಿ, ಜತೆಗೆ ಸಚಿವ ಶಿವರಾಜ್ ತಂಗಡಿಗೆ ತಮ್ಮ ಇಲಾಖೆಯಿಂದ ದೇವಸ್ಥಾನದ ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ₹50 ಲಕ್ಷ ಹಣ ಮಂಜೂರು ಮಾಡಿದ್ದು, ನಾನು ಸಹ ನನ್ನ ವಿವೇಚನಾ ನಿಧಿಯಿಂದ ₹10 ಮಂಜೂರು ಮಾಡುತ್ತಿದ್ದೇನೆ, ಪ್ರತಿಯೊಬ್ಬರು ಧರ್ಮಚರಣೆ ತಮ್ಮ ತಮ್ಮ ಮನಗಳಲ್ಲಿ ಮಾಡಿಕೊಂಡು ಮಕ್ಕಳಿಗೆ ಶೈಕ್ಷಣಿಕ ವ್ಯವಸ್ಥೆ ಕಲ್ಪಿಸುವ ಮೂಲಕ ಮುಖ್ಯವಾಹಿನಿಗೆ ಬರಬೇಕು. ದುಶ್ಚಟಗಳಿಂದ ದೂರವಿದ್ದರೆ ಅದೇ ಉತ್ತಮ ಜೀವನವಾಗಿದೆ. ರಾಜ್ಯ ಸರ್ಕಾರ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದು, ಜನ ಉಪಯೋಗಿ ಯೋಜನೆ, ಗ್ಯಾರಂಟಿ ಯೋಜನೆಗಳ ಮೂಲಕ ಅನುಷ್ಠಾನ ಮಾಡಲಾಗುತ್ತಿದೆ. ಸರ್ಕಾರ ಮುಖ್ಯ ಉದ್ದೇಶ ಜನಸಾಮಾನ್ಯರನ್ನು ಆರ್ಥಿಕವಾಗಿ ಅಭಿವೃದ್ಧಿ ಮಾಡುವುದಾಗಿದೆ. ಆ ಮೂಲಕ ಅತ್ಯುತ್ತಮ ಜೀವನ ಕಲ್ಪಿಸುವ ಯೋಜನೆ ಗ್ಯಾರಂಟಿ ಮೂಲಕ ಜಾರಿಗೊಳಿಸಲಾಗಿದೆ ಎಂದರು.

ಶಾಸಕ ರಾಘವೇಂದ್ರ ಹಿಟ್ನಾಳ್ ಮಾತನಾಡಿ, ಗ್ರಾಮದಲ್ಲಿ ನೂತನವಾಗಿ ದೇವಸ್ಥಾನ ಮತ್ತು ಬೀರಲಿಂಗೇಶ್ವರ ರಥೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಸರ್ವ ಸಮಾಜದವರು ಇದರಲ್ಲಿ ಪಾಲ್ಗೊಂಡಿರುವುದು ಸಂತೋಷ. ನಮ್ಮ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಮುಖಾಂತರ ಜನರು ಆರ್ಥಿಕವಾಗಿ ಸದೃಢರಾಗುವಂತೆ ಮಾಡುತ್ತಿದೆ. ಹಾವೇರಿಯಲ್ಲಿ ಜರುಗಿದ ಸಾವಿರ ದಿನಗಳ ಕಾರ್ಯಕ್ರಮಕ್ಕೆ 2.20 ಲಕ್ಷ ಫಲಾನುಭವಿಗಳಿಗೆ ಭೂಮಿ ಹಕ್ಕು ಪತ್ರವಿತರಿಸಲಾಗಿದೆ. ಗ್ಯಾರಂಟಿ ಯೋಜನೆಗಳಿಗೆ ₹60 ಸಾವಿರ ಕೋಟಿ ಖರ್ಚು ಮಾಡುವ ಜತೆಗೆ ಅಭಿವೃದ್ಧಿ ಕಾರ್ಯಕ್ಕೆ ಸಾವಿರಾರು ಕೋಟಿ ಸರ್ಕಾರ ಖರ್ಚು ಮಾಡುತ್ತಿದೆ. ವಿಪಕ್ಷದವರು ಹೊಟ್ಟೆ ಕಿಚ್ಚಿನಿಂದ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. 2028ಕ್ಕೂ ಕಾಂಗ್ರೆಸ್ ಸರ್ಕಾರ ಬಂದು ಇನ್ನಷ್ಟು ಜನಪರ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತದೆ ಎಂದರು. ದೇವಸ್ಥಾನದಲ್ಲಿ 12 ಸಾಮೂಹಿಕ ವಿವಾಹಗಳು ಜರುಗಿದವು.

ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಸಂಸದ ರಾಜಶೇಖರ ಹಿಟ್ನಾಳ್, ಡಾ. ಕೊಟ್ಟೂರು ಮಹಾಸ್ವಾಮೀಜಿ, ಹೆಬ್ಬಾಳ ಮಠದ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮೀಜಿ, ತುರ್ವಿಹಾಳ ಮಹಾದೇವ ಗುರುವಿನ ಸ್ವಾಮೀಜಿ, ಕೊಳಗೇರಿ ಅಭಿವೃದ್ಧಿ ಮಂಡಳಿ ನಿರ್ದೇಶಕ ರಾಮಕೃಷ್ಣ ರೊಳ್ಳಿ, ಲಲಿತಾರಾಣಿ ಶ್ರೀರಂಗದೇವರಾಯಲು, ನೆಕ್ಕಂಟಿ ಸೂರಿಬಾಬು, ಜಿಲ್ಲಾ ಗ್ಯಾರಂಟಿ ಕಮಿಟಿ ಅಧ್ಯಕ್ಷ ರೆಡ್ಡಿ ಶ್ರೀನಿವಾಸ್, ದೇವಪ್ಪ ಕಟ್ಟಿಮನಿ, ವೆಂಕಟ ಕೃಷ್ಣ ನಾನಿ, ನಾಗವೇಣಿ, ತಿಪ್ಪೇರುದ್ರಸ್ವಾಮಿ, ಫಕೀರಯ್ಯ, ಎಮ್ಮಿ ಫಕೀರಪ್ಪ, ಡ್ಯಾಗಿ ರುದ್ರೇಶ, ಅಯ್ಯಣ್ಣ ರಾಯಚೂರು, ವಿಠಲಾಪುರ ಯಮನಪ್ಪ, ಪಿ. ನಾಗೇಶಪ್ಪ, ಬೆಟ್ಟಪ್ಪ ಬೆಣಕಲ್, ಗುರುಪಾದಯ್ಯಸ್ವಾಮಿ, ಎಸ್ಟಿ ಈರಣ್ಣ, ದಾದೆಸಾಬ್‌, ಶಾಮೀದ್ ಸಾಬ್‌, ಮೋರಿ ದುರುಗಪ್ಪ, ವಿರೂಪಾಕ್ಷಪ್ಪ ರೇಷ್ಮಿ, ಲಿಂಗಪ್ಪ ದೊಡ್ಮನಿ, ಮರಿಯಪ್ಪ ಕಲ್ಗುಡಿ, ಸೋಮನಾಥ ಪಟ್ಟಣಶೆಟ್ಟಿ, ಗೀತಾ ವಿಕ್ರಮ್ ಹಾಗೂ ಇತರರಿದ್ದರು.