ಮನುಷ್ಯನ ಅಂತರಾಳ ಶುದ್ಧವಾಗಿದ್ದರೆ, ಆತ ಎಂದಿಗೂ ಜೀವನದಲ್ಲಿ ಖುಷಿ ಆಗಿರುತ್ತಾನೆ

ಕುಕನೂರು: ಧರ್ಮ ರಕ್ಷಣೆ ಪ್ರತಿಯೊಬ್ಬರ ಹೊಣೆ ಎಂದು ಕರ್ನಾಟಕ ಹಾಲು ಒಕ್ಕೂಟ ಮಹಾಮಂಡಲದ ನಿರ್ದೇಶಕ ಹಂಪಯ್ಯ ಹಿರೇಮಠ ಹೇಳಿದರು.

ತಾಲೂಕಿನ ಮಂಡಲಗಿರಿ ಗ್ರಾಮದಲ್ಲಿ ತಾಲೂಕು ಶ್ರೀವೀರಶೈವ ಜಂಗಮ ಸಂಘ ಹಾಗೂ ಮಂಡಲಗಿರಿ ಶ್ರೀವೀರಭದ್ರೇಶ್ವರ ಬೇಡ ಜಂಗಮ ಕ್ಷೆಮಾಭಿವೃದ್ಧಿ ಸಂಘದಿಂದ ಜರುಗಿದ ಶ್ರೀಜಗದ್ಗುರು ರೇಣುಕಾಚಾರ್ಯರ ಮೂರ್ತಿ ಪ್ರತಿಷ್ಠಾಪನೆ, ಜಯಂತ್ಯುತ್ಸವ ಹಾಗೂ ತಾಲೂಕು ಜಂಗಮ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಜಯಂತಿಗಳು ಮನುಷ್ಯನಲ್ಲಿ ಸಾತ್ವಿಕ ಗುಣ ತುಂಬುತ್ತವೆ. ಮನುಷ್ಯನ ಅಂತರಾಳ ಶುದ್ಧವಾಗಿದ್ದರೆ, ಆತ ಎಂದಿಗೂ ಜೀವನದಲ್ಲಿ ಖುಷಿ ಆಗಿರುತ್ತಾನೆ.ರೇಣುಕಾಚಾರ್ಯರು ಮನುಷ್ಯ ಮಹಾದೇವ ಆಗಲು ಮಾನವೀಯ ಧರ್ಮ ಸ್ಥಾಪಿಸಿದರು. ಅಂತಹ ಧರ್ಮದ ಸಾರ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದಾಗಿದೆ. ಶಾಂತಿಯಿಂದ ಬದುಕಬೇಕಾದರೆ ಧರ್ಮದ ಹಾದಿ ಅವಶ್ಯ ಎಂದು ರೇಣುಕಾಚಾರ್ಯರು ಸಾರಿದರು ಎಂದರು.

ಯಲಬುರ್ಗಾ ಹಿರೇಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯರು ಮಾತನಾಡಿ, ರೇಣುಕಾಚಾರ್ಯರು ವೀರ ಸಂಸ್ಕೃತಿಯ ಚೇತನವಾಗಿದ್ದು, ಬಸವಣ್ಣನವರ ಕಾಲದ ಪೂರ್ವದಲ್ಲಿಯೂ ಸಹ ವೀರಶೈವ ಧರ್ಮ ಇತ್ತು ಎಂಬುದನ್ನು ಎಲ್ಲರೂ ಮನಗಾಣಬೇಕು. ವೀರಶೈವ ಮತ್ತು ಲಿಂಗಾಯತ ಬೇರೆಬೇರೆ ಎಂದು ಕೆಲವರು ಸುಳ್ಳು ಹೇಳುತ್ತಿದ್ದು. ಜನತೆ ಅದನ್ನೆಲ್ಲ ನಂಬಬಾರದು, ವೀರಶೈವ ಲಿಂಗಾಯತ ಎರಡು ಹಿಂದೂ ಧರ್ಮದ ಅವಿಭಾಜ್ಯ ಅಂಗವಾಗಿವೆ ಎಂದರು.

ಕುದುರಿಮೋತಿ ಗ್ರಾಮದ ಮೈಸೂರು ಸಂಸ್ಥಾನ ಮಠದ ಶ್ರೀವಿಜಯಮಹಾಂತೇಶ್ವರ ಸ್ವಾಮಿಜಿ ಮಾತನಾಡಿ, ಜಗತ್ತಿನ ಉದಯದಿಂದ ಪ್ರಾರಂಭವಾದ ಪ್ರಾಚೀನ ಧರ್ಮ ಹಿಂದೂ ಧರ್ಮವಾಗಿದ್ದು, ಇದರಲ್ಲಿ ಬ್ರಹ್ಮಾಂಡ ಲಿಂಗವಾಗಿ ಪೂಜಿಸಲ್ಪಡುತ್ತಿದೆ.ಲಿಂಗಕ್ಕೆ ಯಾವುದೇ ಜಾತಿ ಭೇದ ಭಾವವಿಲ್ಲ.ಎಲ್ಲ ಸಮುದಾಯದವರೆಗೂ ಲಿಂಗಧಾರಣೆ ಅವಶ್ಯಕತೆವಾಗಿದ್ದು, ಜಂಗಮರು ಪರಿಶುದ್ಧ ಆತ್ಮದಿಂದ ಕೂಡಿರಬೇಕು. ಆ ಜಾತಿ ಈ ಜಾತಿ ಎಂದು ಬಡಿದಾಡುವ ಬದಲು ನಾನೊಬ್ಬ ಭಾರತೀಯ, ನಾನೊಬ್ಬ ಹಿಂದು ಎಂದು ಸಾರಿ ಹೇಳುವುದರೊಂದಿಗೆ ಸಾಮರಸ್ಯ, ಸೌಹಾರ್ದತೆ ನಿಮ್ಮದಾಗಿಸಿಕೊಳ್ಳಿ ಎಂದರು.

ಕುಕನೂರು ಅನ್ನದಾನೇಶ್ವರ ಶಾಖಾಮಠದ ಡಾ.ಮಹಾದೇವ ದೇವರು, ಮಂಗಳೂರು ಗ್ರಾಮದ ಅರಳಲೇ ಹಿರೇಮಠದ ಶ್ರೀಸಿದ್ದಲಿಂಗ ಶಿವಾಚಾರ್ಯರು ಹಾಗೂ ಹರಗುರುಚರಮೂರ್ತಿಗಳು ಸಾನ್ನಿಧ್ಯ ವಹಿಸಿದ್ದರು.ಈ ಸಂದರ್ಭದಲ್ಲಿ ಸವೀರಯ್ಯ ತೋಂಟದಾರ್ಯ ಮಠ, ಮಹೇಶ ಕಲ್ಮಠ ಜಂಗಮ ಸಮಾಜದ ತಾಲೂಕಾಧ್ಯಕ್ಷ ವಿಶ್ವನಾಥಯ್ಯ ಹಿರೇಮಠ, ಪ್ರವೀಣ ಕುಮಾರ ಹಿರೇಮಠ, ಹಂಪಯ್ಯ ಮೆತಗಲ್, ಶ್ರೀಧರ ಹೊಸಮನಿ, ವೀರಣ್ಣ ಅಣ್ಣಿಗೇರಿ, ಶಿವಕುಮಾರ ನಾಗಲಾಪುರ ಮಠ, ಮಹೇಶ ಮಳೆಮಠ, ಗಿರೀಶ ಹಿರೇಮಠ, ಹಂಚಾಳಪ್ಪ ತಳವಾರ, ಹನುಮಂತಪ್ಪ ಉಪ್ಪಾರ, ಶಿವಲೀಲಾ ದಳವಾಯಿ, ಹನುಮಂತಪ್ಪ ನಾಗನಗೌಡರು, ಹರೀಶ್ವರಯ್ಯ ಹಿರೇಮಠ ಇತರರಿದ್ದರು.

ಮೆರವಣಿಗೆಗೆ ಹಾಲಪ್ಪ ಆಚಾರ್ ಚಾಲನೆ:

ಯಲಬುರ್ಗಾ ಪಟ್ಟಣದ ಶ್ರೀಧರ ಮುರಡಿ ಮಠದ ಶ್ರೀಬಸವಲಿಂಗ ಶಿವಾಚಾರ್ಯರು ಜಗದ್ಗುರು ರೇಣುಕಾಚಾರ್ಯರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನೆರವೇರಿಸಿದರು. ಮಾಜಿ ಸಚಿವ ಹಾಲಪ್ಪ ಆಚಾರ್ ರೇಣುಕಾಚಾರ್ಯರ ಜಗದ್ಗುರುಗಳ ಭವ್ಯ ಮೆರವಣಿಗೆಗೆ ಹಾಗೂ ಕುಂಭಮೇಳಕ್ಕೆ ಚಾಲನೆ ನೀಡಿದರು. ರೇಣುಕಾಚಾರ್ಯರು ಧಮ್ ಸ್ಥಾಪಿಸಿ ಮಾನವೀಯ ಮೌಲ್ಯ ಜಗತ್ತಿಗೆ ನೀಡಿದ್ದಾರೆ. ಸದ್ಗುರುಗಳ ಹಾದಿಯಲ್ಲಿ ನಡೆದು ಜೀವನ ರೂಪು ಮಾಡಿಕೊಳ್ಳಬೇಕು ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು. ಕಾರ್ಯಕ್ರಮದ ನಂತರ ಪ್ರತಿಯೊಬ್ಬರಿಗೂ ಅನ್ನ ಸಂತರ್ಪಣೆ ಜರುಗಿತು.