ವೀರಶೈವ ಧರ್ಮದಲ್ಲಿ ಸಾತ್ವಿಕ, ತಾತ್ವಿಕ ಮತ್ತು ಸಾಮಾಜಿಕ ಚಿಂತನೆಗಳನ್ನು ಬೋಧಿಸುವ ಮೂಲಕ ಜ. ಪಂಚಾಚಾರ್ಯರು ಭಾವೈಕ್ಯತೆಯ ಸೇತುವೆ ನಿರ್ಮಿಸಿದ್ದನ್ನು ಯಾರೂ ಮರೆಯಲಾಗದು.

ಹುಬ್ಬಳ್ಳಿ:

ಭಾವೈಕ್ಯತೆ ಮತ್ತು ಅಧ್ಯಾತ್ಮ ಜ್ಞಾನ ಭಾರತದ ಉಸಿರು. ಭಾರತೀಯ ಸಂಸ್ಕೃತಿ ಎಲ್ಲರನ್ನು ಒಗ್ಗೂಡಿಸುವುದೇ ಆಗಿದೆ ಹೊರತು ವಿಘಟಿಸುವುದಲ್ಲ. ದೇಶ ಮತ್ತು ಧರ್ಮ ಉಳಿದರೆ ಮಾತ್ರ ಸುಖ, ಶಾಂತಿ ಪ್ರಾಪ್ತಿ. ಧರ್ಮ ಮತ್ತು ದೇಶ ಮನುಷ್ಯನ ಎರಡು ಕಣ್ಣು ಇದ್ದಂತೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಶ್ರೀ ಅಭಿಪ್ರಾಯಪಟ್ಟರು.

ತಾಲೂಕಿನ ಸುಳ್ಳ ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡ ಶ್ರೀಕಲ್ಮೇಶ್ವರ ದೇವಸ್ಥಾನದ ಉದ್ಘಾಟನೆ, ಕಳಸಾರೋಹಣ ಹಾಗೂ ಶ್ರೀಗುರು ಸಿದ್ಧರಾಮೇಶ್ವರ ಮಂಗಲ ಭವನ ಉದ್ಘಾಟನೆ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸಾನ್ನಿಧ್ಯ ವಹಿಸಿದ ಉಜ್ಜಯಿನಿ ಸಿದ್ಧಲಿಂಗ ಶ್ರೀ, ವೀರಶೈವ ಧರ್ಮದಲ್ಲಿ ಸಾತ್ವಿಕ, ತಾತ್ವಿಕ ಮತ್ತು ಸಾಮಾಜಿಕ ಚಿಂತನೆಗಳನ್ನು ಬೋಧಿಸುವ ಮೂಲಕ ಜ. ಪಂಚಾಚಾರ್ಯರು ಭಾವೈಕ್ಯತೆಯ ಸೇತುವೆ ನಿರ್ಮಿಸಿದ್ದನ್ನು ಯಾರೂ ಮರೆಯಲಾಗದು ಎಂದರು.

ಸಾನ್ನಿಧ್ಯ ವಹಿಸಿದ ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಮಾತನಾಡಿ, ಮನುಷ್ಯನಲ್ಲಿ ಹೆಚ್ಚುತ್ತಿರುವ ಅಸುರೀ ಗುಣಗಳು ನಾಶವಾಗಿ ದೈವೀ ಗುಣಗಳು ಬೆಳೆದುಕೊಂಡು ಬರುವ ಅವಶ್ಯಕತೆಯಿದೆ. ವೀರಶೈವ ಧರ್ಮದಲ್ಲಿ ಪ್ರತಿಪಾದಿಸಿದ ಜೀವಾತ್ಮ ಪರಮಾತ್ಮನ ಚಿಂತನೆ ಮತ್ತು ಕಾಯಕ ದಾಸೋಹದ ಹಿರಿಮೆ ಅರಿತು ಬಾಳಬೇಕು ಎಂದು ಹೇಳಿದರು.

ಅತಿಥಿಗಳಾಗಿದ್ದ ಆಗಮಿಸಿದ್ದ ಶಾಸಕ ಎನ್.ಎಚ್. ಕೋನರೆಡ್ಡಿ ಮಾತನಾಡಿದರು. ಸಮಾರಂಭಕ್ಕೂ ಮುನ್ನ ಗ್ರಾಮದಲ್ಲಿ ರಂಭಾಪುರಿ ಶ್ರೀ, ಉಜ್ಜಯಿನಿ ಶ್ರೀ ಹಾಗೂ ಕಾಶೀ ಉಭಯ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಜರುಗಿತು. ಈ ಅಪೂರ್ವ ಸಮಾರಂಭದಲ್ಲಿ ಮುಕ್ತಿಮಂದಿರ, ಎಂ. ಚಂದರಗಿ, ಕೆಳದಿ, ಬಂಕಾಪುರ, ಕಲಘಟಗಿ, ಹೂಲಿ, ಶಿರಕೋಳ, ಹುಬ್ಬಳ್ಳಿ, ಮಳಲಿಮಠ, ಬನ್ನೂರು, ನರಸಾಪುರ, ಸುತಗಟ್ಟಿ, ಕನ್ನೂರು, ಉಗರಗೋಳ, ಅಮ್ಮಿನಬಾವಿ, ಮೊರಬ, ಬ್ಯಾಹಟ್ಟಿ ಮಠಾಧೀಶ್ವರರು ಹಾಗೂ ಗಣ್ಯರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಸಂಜೆ ಕಲ್ಮೇಶ್ವರ ಪಲ್ಲಕ್ಕಿ ಮಹೋತ್ಸವ ಹಾಗೂ ರಥೋತ್ಸವ ಸಕಲ ಸದ್ಭಕ್ತರ ಸಂಗಮದಲ್ಲಿ ಅದ್ಧೂರಿಯಾಗಿ ಜರುಗಿತು.

ಸಮಾಜ ತಿದ್ದುವಲ್ಲಿ ಪಂಚಪೀಠಾಧಿಪತಿಗಳ ಪಾತ್ರ ಹಿರಿದು

ವೀರಶೈವ ಧರ್ಮದ ಮೌಲ್ಯಗಳನ್ನು ಸಮಾಜದ ಪ್ರತಿಯೊಬ್ಬರಿಗೂ ತಲುಪಿಸಿ, ವ್ಯಕ್ತಿತ್ವವನ್ನು ತಿದ್ದಿ ತೀಡುವಲ್ಲಿ ಪಂಚಪೀಠಾಧಿಪತಿಗಳ ಕೊಡುಗೆ ಅಪಾರ’ ಎಂದು ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅಭಿಪ್ರಾಯಪಟ್ಟರು. ಸುಳ್ಳ ಗ್ರಾಮದಲ್ಲಿ ನಡೆದ ಶ್ರೀಕಲ್ಮೇಶ್ವರ ದೇವಸ್ಥಾನದ ಉದ್ಘಾಟನೆ ಹಾಗೂ ಕಳಸಾರೋಹಣ ಮಹೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇದೇ ವೇಳೆ ಮುನೇನಕೊಪ್ಪ ಅವರನ್ನು ರಂಭಾಪುರಿ ಶ್ರೀಗಳು ಸನ್ಮಾನಿಸಿದರು.