ಮಾಜಿ ಮುಖ್ಯಮಂತ್ರಿ, ಅಜಾತಶತ್ರು ದಿವಂಗತ ಡಾ। ಎನ್‌.ಧರ್ಮಸಿಂಗ್ ಅವರು ರಾಜ್ಯ ಕಂಡ ಧೀಮಂತ ರಾಜಕಾರಣಿ. ಅವರ ಜನಪರ ಧೋರಣೆಗೆ ಸರಿಸಾಟಿ ಬೇರೊಬ್ಬರಿಲ್ಲ ಎಂದು ಸೊನ್ನದ ಶಿವಾನಂದ ಶ್ರೀಗಳು ಬಣ್ಣಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಜೇವರ್ಗಿ

ಮಾಜಿ ಮುಖ್ಯಮಂತ್ರಿ, ಅಜಾತಶತ್ರು ದಿವಂಗತ ಡಾ। ಎನ್‌.ಧರ್ಮಸಿಂಗ್ ಅವರು ರಾಜ್ಯ ಕಂಡ ಧೀಮಂತ ರಾಜಕಾರಣಿ. ಅವರ ಜನಪರ ಧೋರಣೆಗೆ ಸರಿಸಾಟಿ ಬೇರೊಬ್ಬರಿಲ್ಲ ಎಂದು ಸೊನ್ನದ ಶಿವಾನಂದ ಶ್ರೀಗಳು ಬಣ್ಣಿಸಿದ್ದಾರೆ.

ಕಲಬುರಗಿ ಜಿಲ್ಲೆ ಜೇವರ್ಗಿ ಪಟ್ಟಣದ ಧರ್ಮಸಿಂಗ್ ಕಲ್ಯಾಣಮಂಟಪದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ದಿ.ಧರ್ಮಸಿಂಗ್ ಅವರ 89ನೇ ವರ್ಷದ ಜನ್ಮದಿನದ ನಿಮಿತ್ತ ಧರ್ಮಸಿಂಗ್ ಅವರ ಪುತ್ಥಳಿ ಹಾಗೂ ಮ್ಯೂಸಿಯಂ ಅಡಿಗಲ್ಲು ಕಾರ್ಯಕ್ರಮ ನೇರವೇರಿಸಿ ಅವರು ಮಾತನಾಡಿದರು.

ಯುವ ರಾಜಕಾರಣಿಗಳಿಗೆ ಧರ್ಮಸಿಂಗ್ ಆದರ್ಶವಾಗಿದ್ದರು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದ ಧರ್ಮಸಿಂಗ್‌ ಅವರು ಜೀವನದುದ್ದಕ್ಕೂ ರಾಜ್ಯ ಹಾಗೂ ಜೇವರ್ಗಿ ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ್ದಾರೆ. ಕಲಂ 371 (ಜೆ) ಜಾರಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸುಮಾರು 40 ವರ್ಷ ರಾಜಕಾರಣ ನಡೆಸಿ, ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವಲ್ಲಿ ಅವರ ಕೊಡುಗೆ ಅಪಾರವೆಂದು ಸ್ಮರಿಸಿದರು.

ಇದೇ ವೇಳೆ, ನೆಲೋಗಿಯಲ್ಲಿ ಧರ್ಮಸಿಂಗ್‌ ಅವರ ಪುತ್ಥಳಿಗೆ ನೆಲೋಗಿ ಹನುಮಾನ್‌ ದೇವಸ್ಥಾನದ ಅರ್ಚಕ ಉಮೇಶ ಭಟ್ಟ ಜೋಶಿ ಪೂಜೆ ಸಲ್ಲಿಸಿದರು. ನಂತರ ನೆಲೋಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಧರ್ಮಸಿಂಗ್ ಅವರ ಧರ್ಮಪತ್ನಿ ಪ್ರಭಾವತಿ ಧರ್ಮಸಿಂಗ್ ಅವರು ಧರ್ಮಸಿಂಗ್ ಅವರ ಪುತ್ಥಳಿ ಹಾಗೂ ಮ್ಯೂಸಿಯಂ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಧರ್ಮಸಿಂಗ್‌ ಅವರ 5 ದಶಕಗಳ ರಾಜಕೀಯ ಬದುಕಿನ ಸಂದೇಶ ಸಾರುವಂತಹ ವಿಶೇಷ ಮ್ಯೂಸಿಯಂ ನಿರ್ಮಾಣಕ್ಕೆ ಕುಟುಂಬದವರು ಯೋಜನೆ ರೂಪಿಸಿದ್ದು, ಇದರಿಂದಾಗಿ ಧರ್ಮಸಿಂಗ್‌ ಜೇವರ್ಗಿ ಜನತೆಗೆ ಹತ್ತಿರವಾಗಲಿದ್ದಾರೆ.

ಕಲಬುರಗಿ- ಜೇವರ್ಗಿ ರಸ್ತೆಯಲ್ಲಿರುವ ಧರ್ಮಸಿಂಗ್‌ ಕಲ್ಯಾಣ ಮಂಟಪದ ಅಂಗಳದಲ್ಲಿ ಮ್ಯೂಸಿಯಂ ತಲೆ ಎತ್ತಲಿದ್ದು, ಇಲ್ಲಿ ಧರ್ಮಸಿಂಗ್‌ ಬದುಕಿನ ಫೋಟೋಗಳು, ಸಂದೇಶಗಳು, ಅವರ ಆಳೆತ್ತರದ ಪುತ್ಥಳಿಗಳು ಇರಲಿವೆ. ಇದೇ ವೇಳೆ, ಧರ್ಮಸಿಂಗ್‌ ಹುಟ್ಟುಹಬ್ಬದ ನಿಮಿತ್ತ ರಕ್ತದಾನ, ತ್ರಿಚಕ್ರ ವಾಹನ ವಿತರಣೆ ಕಾರ್ಯಕ್ರಮಗಳು ನಡೆದವು. ಇದಲ್ಲದೆ ಅನೇಕ ಕಡೆಗಳಲ್ಲಿ ಪ್ರಸಾದ ಸೇವೆ, ಹಣ್ಣು ವಿತರಣೆಯನ್ನು ಅಭಿಮಾನಿಗಳು ನೆರವೇರಿಸಿದರು.