ಪರೀಕ್ಷೆ ಎದುರಿಸಿ ಆರೋಪಗಳಿಂದ ಮುಕ್ತವಾದ ಧರ್ಮಸ್ಥಳ ಕ್ಷೇತ್ರ-ಶಾಸಕ ಮಾನೆ

| Published : Oct 21 2025, 01:00 AM IST

ಪರೀಕ್ಷೆ ಎದುರಿಸಿ ಆರೋಪಗಳಿಂದ ಮುಕ್ತವಾದ ಧರ್ಮಸ್ಥಳ ಕ್ಷೇತ್ರ-ಶಾಸಕ ಮಾನೆ
Share this Article
  • FB
  • TW
  • Linkdin
  • Email

ಸಾರಾಂಶ

ಸೀತಾ ಮಾತೆಗೂ ಪರೀಕ್ಷೆ ಎನ್ನುವುದು ತಪ್ಪಲಿಲ್ಲ. ಅದೇ ರೀತಿ ಧರ್ಮಸ್ಥಳ ಕ್ಷೇತ್ರ ಪರೀಕ್ಷೆ ಎದುರಿಸಿ, ಎಲ್ಲ ಆರೋಪಗಳಿಂದ ಮುಕ್ತವಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಹಾನಗಲ್ಲ: ಸೀತಾ ಮಾತೆಗೂ ಪರೀಕ್ಷೆ ಎನ್ನುವುದು ತಪ್ಪಲಿಲ್ಲ. ಅದೇ ರೀತಿ ಧರ್ಮಸ್ಥಳ ಕ್ಷೇತ್ರ ಪರೀಕ್ಷೆ ಎದುರಿಸಿ, ಎಲ್ಲ ಆರೋಪಗಳಿಂದ ಮುಕ್ತವಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ತಾಲೂಕಿನ ಮುಳಥಳ್ಳಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸಾಮೂಹಿಕ ಸತ್ಯನಾರಾಯಣ ಪೂಜಾ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಿತ್ಯವೂ ನಮ್ಮ ಸುತ್ತಲೂ ಹತ್ತು, ಹಲವು ಘಟನೆಗಳು ನಡೆಯುತ್ತವೆ. ಅಂಥವುಗಳಲ್ಲಿ ಯಾವುದು ನಮಗೆ ಬೇಕು, ಬೇಡ ಎನ್ನುವುದನ್ನು ನಿರ್ಧರಿಸಿ ಮುನ್ನಡೆಯಬೇಕು. ನಮ್ಮ ಬದುಕಿಗೆ ಬೇಕಿರುವ ವಿಚಾರಗಳಲ್ಲಿ ನಮ್ಮನ್ನು ನಾವು ಕೇಂದ್ರೀಕರಿಸಿಕೊಳ್ಳುವುದನ್ನು ಕಲಿಯಬೇಕು. ಆಗ ಮಾತ್ರ ನಾವು ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಮನುಷ್ಯ ಯಾವ ಕಾರಣಕ್ಕೂ ಹಗೆತನ ಮಾಡಬಾರದು. ನಮ್ಮಲ್ಲಿರುವ ಹಗೆತನ ನಮ್ಮ ವ್ಯಕ್ತಿತ್ವವನ್ನು ನಾಶ ಮಾಡುತ್ತದೆ. ನಮ್ಮಲ್ಲಿ ಮಾನವೀಯ ಮೌಲ್ಯಗಳನ್ನು ಕೊಂದು ನಮ್ಮನ್ನು ದುಸ್ಥಿತಿಗೆ ದೂಡುತ್ತದೆ ಎಂದರು.

ಯೋಜನೆಯ ನಿರ್ದೇಶಕಿ ದಯಾಶೀಲಾ ಮಾತನಾಡಿ, ಯೋಜನೆ ಗ್ರಾಮೀಣ ಭಾಗದ ಮಹಿಳೆಯರ ಜೀವನಾಡಿಯಾಗಿ ಕೆಲಸ ಮಾಡುತ್ತಿದೆ. ಮಹಿಳೆಯರು ಸ್ವಾವಲಂಬಿಯಾಗಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪ್ರೇರಣೆ ನೀಡುತ್ತಿದೆ ಎಂದರು.

ಕೂಡಲದ ಗುರುನಂಜೇಶ್ವರ ಮಠದ ಗುರುಮಹೇಶ್ವರ ಮಹಾಸ್ವಾಮೀಜಿ, ಹೇರೂರಿನ ಗುಬ್ಬಿ ನಂಜುಂಡೇಶ್ವರ ಮಠದ ನಂಜುಂಡ ಪಂಡಿತಾರಾಧ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಉಪ್ಪುಣಸಿ ಗ್ರಾಪಂ ಅಧ್ಯಕ್ಷ ಬಾಬಾಜಾನ ಬಂಕಾಪುರ, ವೀರಭದ್ರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಗುಡ್ಡಪ್ಪ ಹಂಚಿನಮನಿ, ಪೂಜಾ ಮಹೋತ್ಸವ ಸಮಿತಿ ಅಧ್ಯಕ್ಷ ಸುರೇಶಗೌಡ ಪಾಟೀಲ, ರುದ್ರವ್ವ ಬಾಳಂಬೀಡ, ಮಂಜು ಗೊರಣ್ಣನವರ, ಭರಮಣ್ಣ ಶಿವೂರ, ನಾರಾಯಣರಾವ್ ಚಿಕ್ಕೋರ್ಡೆ ಇದ್ದರು. ಇದೇ ಸಂದರ್ಭದಲ್ಲಿ ಹಲವು ಸಂಘಗಳಿಗೆ ಲಾಭಾಂಶ ವಿತರಿಸಲಾಯಿತು.