ಸಾರಾಂಶ
ಕೃಷ್ಣಾಪುರ ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಮಾಡುತ್ತಿರುವ ಅಪಪ್ರಚಾರ ಖಂಡಿಸಿ ಜನಾಗ್ರಹ ಸಭೆ ನಡೆಯಿತು.
ಕನ್ನಡ ಪ್ರಭ ವಾರ್ತೆ ಮೂಲ್ಕಿಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲಿನ ಆರೋಪ ಸಮಗ್ರ ಹಿಂದೂ ಸಮಾಜವನ್ನು ವ್ಯವಸ್ಥಿತವಾಗಿ ವಿಭಜನೆ ಮಾಡುವ ಹುನ್ನಾರ ಎಂದು ಕೃಷ್ಣಾಪುರ ಶ್ರೀ ವಿಶ್ವನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಜ್ಯೋತಿಷಿ ನಾಗೇಂದ್ರ ಭಾರಧ್ವಾಜ್ ಹೇಳಿದರು.
ಕೃಷ್ಣಪುರದಲ್ಲಿ ನಡೆದ ಜನಾಗ್ರಹ ಸಭೆಯಲ್ಲಿ ಮುಖ್ಯ ಭಾಷಣ ಮಾಡಿದ ಅವರು ಅಖಂಡ ಹಿಂದೂ ಸಮಾಜ ವಿಭಜನಾವಾದಿಗಳ ಕುತಂತ್ರದಿಂದ ಸಾಕಷ್ಟು ಹೊಡೆತ ಬಿದ್ದಿದೆ, ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲೆ ಹಾಗೂ ಪೂಜ್ಯ ಹೆಗ್ಗಡೆ ಕುಟುಂಬದ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ತೇಜೋವಧೆ ಮಾಡುತ್ತಿರುವುದು ಖಂಡನೀಯ, ಗ್ರಾಮದಲ್ಲಿ ನಿಧನ ಹೊಂದಿದ ವ್ಯಕ್ತಿಗಳನ್ನು ಕೆಲವೊಂದು ಸಂದರ್ಭದಲ್ಲಿ ಹೂಳುವ ಪದ್ಧತಿ ಇದೆ. ಅದನ್ನೇ ಬಂಡವಾಳ ಮಾಡಿಕೊಂಡು ಸುಳ್ಳು ಆರೋಪ ಮಾಡುತ್ತಿರುವುದು ದುರದೃಷ್ಟಕರ, ಮುಂದಿನ ದಿನಗಳಲ್ಲಿ ಸಮಸ್ತ ಸಂಘ ಸಂಸ್ಥೆಗಳ ಸಹಕಾರದಿಂದ ಜನಾಕ್ರೋಶ ಸಭೆಯನ್ನು ಆಯೋಜಿಸಲಾಗುವುದು ಎಂದು ಹೇಳಿದರು.ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮನಪಾ ಮಾಜಿ ಸದಸ್ಯ ತಿಲಕ್ ರಾಜ್ ಕೃಷ್ಣಾಪುರ ರವರು ರಾಜ್ಯದ ಕಾಂಗ್ರೆಸ್ ಸರ್ಕಾರವು ಜಾತಿಗಣತಿ ಹೆಸರಿನಲ್ಲಿ ಹಿಂದೂ ಸಮಾಜವನ್ನು ಒಡೆಯುವ ಮತ್ತು ಮತಾಂತರವನ್ನು ಪ್ರೋತ್ಸಾಹಿಸುವ ವ್ಯವಸ್ಥಿತ ಸಂಚನ್ನು ರೂಪಿಸಿದೆ, ಅನ್ಯಕೋಮಿನ ಜೊತೆ ಹಿಂದೂ ಜಾತಿಗಳನ್ನು ಸೇರಿಸಿ ಅವರಿಗೆ ರಾಜಕೀಯ ಮತ್ತು ಆರ್ಥಿಕವಾಗಿ ಬೆಂಬಲ ನೀಡುತ್ತಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.
ಈ ಸಂದರ್ಭ ಮ.ನ.ಪಾ ಮಾಜಿ ಸದಸ್ಯೆ ಲಕ್ಷ್ಮೀ ಶೇಖರ ದೇವಾಡಿಗ, ಎನ್ ಎಮ್ ಪಿ ಟಿ ಮಾಜಿ ಟ್ರಸ್ಟಿ ಪಿ. ಸುಧಾಕರ ಕಾಮತ್, ಅಶೋಕ್ ಶೆಟ್ಟಿ ತಡಂಬೈಲು, ಮೀರಾ ವಾಣಿ, ದೇವೇಂದ್ರ ಕೋಟ್ಯಾನ್, ಜಯಪ್ರಕಾಶ್ ಸೂರಿಂಜೆ, ಮನೋಹರ್ ಸೂರಿಂಜೆ, ಲೋಕೇಶ್ ಗುರಿಕಾರ, ಕರುಣಾಕರ ಶೆಟ್ಟಿ, ಜಯಂತಿ ಟಿ ರೈ, ಮೀರಾ ವಾಣಿ ಮುಂತಾದವರು ಉಪಸ್ಥಿತರಿದ್ದರು. ಪ್ರಶಾಂತ್ ಆಚಾರ್ಯ ನಿರೂಪಿಸಿದರು, ರಾಕೇಶ್ ಕೋಟ್ಯಾನ್ ವಂದಿಸಿದರು.