ಧೂಮಪಾನ ಹಾಗೂ ತಂಬಾಕು ಮಾನವ ಕುಲಕ್ಕೆ ಮಾರಕವಾಗುತ್ತಿದೆ. ಮರಗಳನ್ನು ಕಡಿಯಲಾಗುತ್ತಿದೆ. ಇದರಿಂದ ಆಮ್ಲಜನಕದ ಕೊರತೆ, ಅಂತರ್ಜಲ ಕುಸಿತ, ಮಳೆ ಕೊರತೆ, ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಂಬಾಕು ತ್ಯಜಿಸಿ ಹಸಿರು ಬೆಳೆಸುವಂತೆ ಆರೋಗ್ಯ ಇಲಾಖೆ ಪರಿವೀಕ್ಷಕ ಶೀಳನೆರೆ ಸತೀಶ್ ಕರೆ ನೀಡಿದರು. ತಾಲೂಕಿನ ವಿಠಲಾಪುರದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಕಿಕ್ಕೇರಿ ವಲಯದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸೇವಾ ಟ್ರಸ್ಟ್‌ನಿಂದ ಆಯೋಜಿಸಿದ್ದ ವಿಶ್ವ ತಂಬಾಕು ವಿರೋಧಿ ಹಾಗೂ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದರು.

ತಂಬಾಕು, ಸಿಗರೇಟ್, ಗುಟ್ಕಾ, ಪಾನ್ ಮಸಾಲ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅಂಕಿ ಅಂಶಗಳ ಮೂಲಕ ವೈಜ್ಞಾನಿಕ ಮಾಹಿತಿ ನೀಡಿ, ಬಾಯಿ ಕ್ಯಾನ್ಸರ್, ಶ್ವಾಸಕೋಶದ ಕಾಯಿಲೆ, ಹೃದಯಾಘಾತ ಎಲ್ಲದಕ್ಕೂ ತಂಬಾಕುವೇ ಮೂಲ. ಒಂದು ಬಾರಿ ಚಟಕ್ಕೆ ಬಿದ್ದರೆ ಜೀವನವೇ ಹಾಳು ಎಂದು ಎಚ್ಚರಿಕೆ ನೀಡಿದರು.

ಯುವಕರು ದುಶ್ಚಟಗಳಿಂದ ದೂರವಿರಬೇಕು. ಯೋಗ, ಧ್ಯಾನ, ಪ್ರಾರ್ಥನೆ, ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಚಿಕ್ಕ ವಯಸ್ಸಿನಿಂದಲೇ ಅಳವಡಿಸಿಕೊಂಡು ಯುವಕರು ಸಾಮಾಜಿಕ ಆಸ್ತಿಯಾಗಿ ಹೊರಹೊಮ್ಮುವಂತೆ ಕರೆ ನೀಡಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕಿ ಲೀಲಾವತಿ ಮಾತನಾಡಿ, ಸಮುದಾಯದ ಅಭಿವೃದ್ಧಿಗೆ ಧರ್ಮಸ್ಥಳ ಸಂಸ್ಥೆ ರೂಪಿಸಿ ಜಾರಿಗೊಳಿಸಿರುವ ಸಮುದಾಯ ಕಾರ್ಯಕ್ರಮ ವಿವರಿಸಿದರು. ಸಂಸ್ಥೆ ಗ್ರಾಮೀಣ ಪ್ರದೇಶದ ಆರೋಗ್ಯ ಹಾಗೂ ಪರಿಸರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ತಂಬಾಕು ಮುಕ್ತ ಯುವ ಪೀಳಿಗೆ ಮತ್ತು ಹಸಿರು ಭಾರತ ನಿರ್ಮಾಣವೇ ನಮ್ಮ ಗುರಿ ಎಂದರು.

ಮಲ್ಲಿಕಾರ್ಜುನ ಚಾರಿಟಬಲ್ ಟ್ರಸ್ಟಿನ ನಿರ್ದೇಶಕ ಗಂಜಿಗೆರೆ ಮಹೇಶ್ ಮಾತನಾಡಿ, ಧೂಮಪಾನ ಹಾಗೂ ತಂಬಾಕು ಮಾನವ ಕುಲಕ್ಕೆ ಮಾರಕವಾಗುತ್ತಿದೆ. ಮರಗಳನ್ನು ಕಡಿಯಲಾಗುತ್ತಿದೆ. ಇದರಿಂದ ಆಮ್ಲಜನಕದ ಕೊರತೆ, ಅಂತರ್ಜಲ ಕುಸಿತ, ಮಳೆ ಕೊರತೆ, ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ.ಎಚ್ಚೆತ್ತುಕೊಂಡು ವಿದ್ಯಾರ್ಥಿಗಳು ಒಂದು ಸಸಿ ನೆಟ್ಟು ಅದನ್ನು ಮಗುವಿನಂತೆ ಬೆಳೆಬೇಕೆಂದು ಕರೆ ನೀಡಿದರು.

ಇದೇ ವೇಳೆ ದುಶ್ಚಟಗಳಿಗೆ ಬಲಿಯಾಗುವುದಿಲ್ಲ ಎಂದು ಶಾಲಾ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಕಿಕ್ಕೇರಿ ವಲಯ ಶ್ರೀಧರ್ಮಸ್ಥಳ ತಾಲೂಕು ಯೋಜನಾಧಿಕಾರಿ ಶ್ರೀನಿವಾಸ್, ಕಸಬಾ ಮೇಲ್ವಿಚಾರಕ ಎ.ಎಸ್.ಪವಿತ್ರ, ಕಾಲೇಜಿನ ಪ್ರಾಂಶುಪಾಲ ಮಲ್ಲಿಕಾರ್ಜುನ್, ಮುಖ್ಯ ಶಿಕ್ಷಕ ಶಂಕರ್, ಗ್ರಾಮ ಮುಖಂಡರಾದ ರೋಹಿತ್, ಗೋವಿಂದರಾಜು, ಧರ್ಮಸ್ಥಳ ಸಂಸ್ಥೆಯ ಸೇವಾ ಪ್ರತಿನಿಧಿಗಳು, ಶಾಲೆ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.