ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಲಂಡನ್ನ ಎನ್ಕ್ಯೂಇ (ನ್ಯಾಷನಲ್ ಕ್ವಾಲಿಟಿ ಅಶ್ಶೂರೆನ್ಸ್) ಸಂಸ್ಥೆ ಈ ಹಿಂದೆ ೨೦೨೪ರಲ್ಲಿ ಕೊಡಮಾಡಿದ ಐಎಸ್ಒ ೨೭೦೦೧–೨೦೧೩ ಅನ್ನು ಮೇಲ್ದರ್ಜೆಗೇರಿಸಿದೆ.ಯೋಜನೆಯ ಕಾರ್ಯವೈಖರಿ, ಪಾರದರ್ಶಕತೆ, ತಂತ್ರಜ್ಞಾನ ಬಳಕೆ, ಸುರಕ್ಷತೆ, ಬದ್ಧತೆ, ಬ್ಯಾಂಕ್ ಮೂಲಕ ನಡೆಸುವ ವ್ಯವಹಾರಗಳ ದಾಖಲಾತಿ ನಿರ್ವಹಣೆ, ಕಾರ್ಯಕರ್ತರ ಕಾರ್ಯಕುಶಲತೆ, ವರದಿಗಳ ತಯಾರಿ ಮತ್ತು ಬಳಕೆ, ವ್ಯವಹಾರದಲ್ಲಿ ನೈಪುಣ್ಯತೆ ಮೊದಲಾದ ೧೧೪ ಅಂಶಗಳಲ್ಲಿ ೧೦೯ ಪ್ರಮುಖ ಅಂಶಗಳನ್ನು ಗಮನಿಸಿ ಈ ಪ್ರಮಾಣಪತ್ರ ನೀಡಲಾಗಿತ್ತು.
ಐಎಸ್ಒ ಸಂಸ್ಥೆಯಲ್ಲಿ ಸುಮಾರು ೧೭೦ ದೇಶಗಳು ತಮ್ಮ ಸದಸ್ಯತ್ವ ಹೊಂದಿವೆ. ಎನ್ಕ್ಯುಇ ಸಂಸ್ಥೆ ೯೦ ದೇಶಗಳ ಪ್ರತಿಷ್ಠಿತ ಸಂಸ್ಥೆಗಳನ್ನು ಐಎಸ್ಒಗಾಗಿ ಆಡಿಟ್ ಮಾಡುತ್ತಿದೆ. ಗ್ರಾಮಾಭಿವೃದ್ಧಿ ಯೋಜನೆಯನ್ನು ೩೮ ನಿಯಮಗಳು ಮತ್ತು ೯೩ರಲ್ಲಿ ೯೦ ಅಂಶಗಳ ಕುರಿತು ಸೂಕ್ಷ್ಮವಾಗಿ ಗಮನಿಸಿ ಈ ಹಿಂದೆ ನೀಡಲಾದ ಐಎಸ್ಒ ಅನ್ನು ಇದೀಗ ೨೭೦೦೧–೨೦೨೨ ಆಗಿ ಮೇಲ್ದರ್ಜೆಗೇರಿಸಿದೆ.ಸಂಸ್ಥೆಯ ಜಿ. ಎಸ್. ಭಾರ್ಗವ್ ಅವರು ಶ್ರೀ ಕ್ಷೇತ್ರದ ಅಮೃತವರ್ಷಿಣಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರಿಗೆ ಪ್ರಮಾಣಪತ್ರ ಹಸ್ತಾಂತರಿಸಿದರು. ಭಾರತ ದೇಶದಲ್ಲಿಯೇ ಐಎಸ್ಒ ೨೭೦೦೧–೨೦೨೨ ಪ್ರಮಾಣಪತ್ರ ಪಡೆದ ಚಾರಿಟೇಬಲ್ ಟ್ರಸ್ಟ್ಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೊದಲಿಗ ಸಂಸ್ಥೆ. ಗ್ರಾಮಾಭಿವೃದ್ಧಿ ಯೋಜನೆಯು ಸ್ವಸಹಾಯ ಸಂಘಗಳ ನಿರ್ವಹಣೆಯ ಅತ್ಯುತ್ತಮ ಗುಣಮಟ್ಟದ ತಂತ್ರಜ್ಞಾನ, ಪಾರದರ್ಶಕತೆ, ಲೆಕ್ಕಾಚಾರಗಳು, ನಿಯಮಪಾಲನೆ ಮುಂತಾದ ಅನೇಕ ಪ್ರಮುಖ ವಿಷಯಗಳಲ್ಲಿ ವಿಶ್ವದರ್ಜೆಯ ಗುಣಮಟ್ಟ ಹೊಂದಿರುವುದಕ್ಕೆ ಈ ಪ್ರಮಾಣಪತ್ರ ಸಾಕ್ಷಿಯಾಗಿದೆ.
ಬ್ಯಾಂಕ್ಗಳ ವ್ಯವಹಾರಗಳ ಪಾರದರ್ಶಕತೆ, ನಿಖರತೆಯ ಉದ್ದೇಶದಿಂದ ‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ’ ಎಲ್ಲಾ ಬ್ಯಾಂಕ್ಗಳಿಗೆ ಐಎಸ್ಒ ೨೭೦೦೧ ಮಾನ್ಯತೆ ಪಡೆಯಲೇಬೇಕೆಂದು ನಿರ್ದೇಶಿಸಿದೆ. ಬ್ಯಾಂಕಿನ ಸೇವೆಗಳನ್ನು ಬ್ಯಾಂಕಿನ ಬ್ಯುಸಿನೆಸ್ ಕರೆಸ್ಪಾಂಡೆಂಟ್ ಮೂಲಕ ಸ್ವಸಹಾಯ ಸಂಘ ವ್ಯವಸ್ಥೆಯಲ್ಲಿ ಗ್ರಾಮ ಗ್ರಾಮಗಳಲ್ಲಿ ತರುತ್ತಿರುವ ಗ್ರಾಮಾಭಿವೃದ್ಧಿ ಯೋಜನೆಯು ಸ್ವಯಂಪ್ರೇರಿತವಾಗಿ ತನ್ನ ಸಂಸ್ಥೆಯನ್ನು ಈ ಉತ್ಕೃಷ್ಟ ಆಡಿಟ್ಗೆ ಒಳಪಡಿಸಿ ಈ ಪ್ರಮಾಣಪತ್ರ ಪಡೆದುಕೊಂಡಿದೆ.