ಧ್ರುವನಾರಾಯಣ ಜನಪರ ರಾಜಕಾರಣಕ್ಕೆ ಮಾದರಿ

| Published : Mar 13 2024, 02:03 AM IST

ಸಾರಾಂಶ

ಧ್ರುವನಾರಾಯಣ ಅವರು ೨ ಬಾರಿ ಶಾಸಕರಾಗಿ ೨ ಬಾರಿ ಸಂಸದರಾಗಿ ಚಾಮರಾಜನಗರ ಅಭಿವೃದ್ಧಿಗಾಗಿ ಸದಾ ಚಿಂತಿಸುತ್ತಿದ್ದರು, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಗಳಿಂದ ಅನುದಾನ ತಂದು ಯೋಜನೆಗಳನ್ನು ಜಾರಿಗೊಳಿಸಿ ಅಭಿವೃದ್ಧಿಗೆ ನಿರಂತರ ಪ್ರಯತ್ನ ನಡೆಸಿದ್ದರು.

ಕನ್ನಡಪ್ರಭ ವಾರ್ತೆ ನಂಜನಗೂಡು

ಮಾಜಿ ಸಂಸದ ದಿ.ಆರ್.ಧ್ರುವನಾರಾಯಣ ರವರು ಎಲ್ಲಾ ಜಾತಿ, ಧರ್ಮದ ಜನರನ್ನು ಪ್ರೀತಿಸುವ, ಗೌರವಿಸುವ ಪ್ರವೃತ್ತಿ ಬೆಳೆಸಿಕೊಂಡಿದ್ದ ಆದರ್ಶ, ಜನಾನುರಾಗಿ ರಾಜಕಾರಣಿಯಾಗಿದ್ದರು. ಅವರ ಅಗಲಿಕೆ ಕಾಂಗ್ರೆಸ್‌ ಪಕ್ಷಕ್ಕೆ ಮತ್ತು ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಚಾಮರಾಜನಗರ ತಾಲೂಕಿನ ಹೆಗ್ಗನವಾಡಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ದಿ.ಆರ್.ಧ್ರುವನಾರಾಯಣ ಅವರ ಮೊದಲನೆ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಮಾನ್ಯವಾಗಿ ರಾಜಕಾರಣಿಗಳು ಬದುಕಿದ್ದಾಗ ಜನಪ್ರಿಯರಾಗಿರುವುದು ಸಹಜ, ಆರ್.ಧ್ರುವನಾರಾಯಣ ಅವರು ಕಾಲವಾದ ನಂತರವೂ ಅವರ ಜನಪ್ರಿಯತೆ ಬೆಳೆಯುತ್ತಿದೆ, ಯಾವುದೇ ಜನಪ್ರತಿನಿಧಿಯಾದವರು ಜನಪರ ಅಭಿವೃದ್ಧಿಪರವಾಗಿ ಇರಬೇಕು ಜೊತೆಗೆ ಜನರನ್ನು ಪ್ರೀತಿಸುವ ಗುಣವಿರಬೇಕು ಈ ಎಲ್ಲಾ ಗುಣಗಳೂ ಸಹ ಧ್ರುವನಾರಾಯಣ ಅವರಲ್ಲಿತ್ತು. ಆದ್ದರಿಂದಲೇ ಅವರನ್ನು ಜನರು ಎಂದಿಗೂ ಬಿಟ್ಟು ಇರುತ್ತಿರಲಿಲ್ಲ, ಅವರ ಸರಳ, ಸಜ್ಜನ, ಸಭ್ಯತೆಯಿಂದ ಕೂಡಿದ ನಾಯಕತ್ವ ಗುಣಗಳನ್ನು ಹೊಂದಿದ್ದ ಅವರು, ಜನಪರ ರಾಜಕಾರಣಕ್ಕೆ ಧ್ರುವನಾರಾಯಣ ಮಾದರಿ ವ್ಯಕ್ತಿತ್ವ ಎಂದರು.

ಕಾಂಗ್ರೆಸ್‌ ಪಕ್ಷದ ಆಸ್ತಿಯಾಗಿದ್ದ ಧ್ರುವನಾರಾಯಣ ಅವರು ವಿದ್ಯಾರ್ಥಿಯಾಗಿದ್ದಾಗಲೇ ಕಾಂಗ್ರೆಸ್‌ನಿಂದ ಬೆಳೆದು ಕೆಪಿಸಿಸಿ ಕಾರ್ಯಧ್ಯಕ್ಷರಾಗಿ ಇಡೀ ರಾಜ್ಯ ಸ್ಮರಿಸುವಂತೆ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದರು. ಹೀಗಾಗಿ ಅವರ ಅಗಲಿಕೆ ಕಾಂಗ್ರೆಸ್‌ ಪಕ್ಷಕ್ಕೆ ಮಾತ್ರವಲ್ಲ ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟ ಎಂದರು.

ಚಾಮರಾಜನಗರ ಅಭಿವೃದ್ದಿಗೆ ನಿರಂತರ ಪ್ರಯತ್ನ:

ಧ್ರುವನಾರಾಯಣ ಅವರು ೨ ಬಾರಿ ಶಾಸಕರಾಗಿ ೨ ಬಾರಿ ಸಂಸದರಾಗಿ ಚಾಮರಾಜನಗರ ಅಭಿವೃದ್ಧಿಗಾಗಿ ಸದಾ ಚಿಂತಿಸುತ್ತಿದ್ದರು, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಗಳಿಂದ ಅನುದಾನ ತಂದು ಯೋಜನೆಗಳನ್ನು ಜಾರಿಗೊಳಿಸಿ ಅಭಿವೃದ್ಧಿಗೆ ನಿರಂತರ ಪ್ರಯತ್ನ ನಡೆಸಿದ್ದರು. ಮತ್ತು ಸಂಸತ್ತಿನಲ್ಲಿ ಅತಿ ಹೆಚ್ಚು ಪ್ರಶ್ನೆಗಳನ್ನು ಕೇಳಿದ ಮೊದಲನೆ ಸಂಸದ ಅಭಿವೃದ್ದಿಯಲ್ಲಿ ಇಡೀ ದೇಶದಲ್ಲೇ ಮೊದಲ ಸಂಸದ ಎಂಬ ಬಿರುದು ಪಡೆದಿದ್ದ ಆದರ್ಶ ರಾಜಕಾರಣಿ ನನ್ನ ಕ್ಷೇತ್ರವೂ ಅವರ ಲೋಕಸಭಾ ವ್ಯಾಪ್ತಿಗೆ ಒಳಪಟ್ಟ ಕ್ಷೇತ್ರವಾದ್ದರಿಂದ ಅವರನ್ನು ನಾನು ಹತ್ತಿರದಿಂದ ನೋಡಿದವನು ಜೊತಗೆ ನನ್ನ ಜೊತೆ ಸದಾ ನಿಕಟ ಸಂಪರ್ಕವನ್ನು ಇಟ್ಟುಕೊಂಡಿದ್ದರು ಎಲ್ಲಾ ವಿಚಾರಗಳನ್ನೂ ಸಹ ಚೆರ್ಚೆ ನಡೆಸುತ್ತಿದ್ದರು ಅವರು ಬದುಕಿದ್ದರೆ ವಿಧಾನಸಭೆಗೆ ಅಥವಾ ಲೋಕಸಭೆಗೆ ಆಯ್ಕೆಯಾಗಿರುತ್ತಿದ್ದರು ಎಂದು ಸ್ಮರಿಸಿದರು. ಸಂವಿಧಾನ ಉಳಿದರೆ ನಾವು-ನೀವು ಉಳಿಯುತ್ತೇವೆ:

ಯಾವುದೇ ರಾಜಕಾರಣಿಗೆ ಸೈದ್ದಾಂತಿಕ ಸ್ಪಷ್ಟತೆ ಮತ್ತು ಬದ್ಧತೆ ಅಗತ್ಯ ಧ್ರುವನಾರಾಯಣ ರವರಿಗೆ ಇವೆರಡೂ ಇತ್ತು. ಅಸಮಾನತೆ ತುಂಬಿರುವ ಸಮಾಜದಲ್ಲಿ ದುರ್ಬಲರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬುವ ಕೆಲಸವನ್ನು ಅವರು ಮಾಡುತ್ತಿದ್ದರು. ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಬಗ್ಗೆ ಅಪಾರ ನಂಬಿಕೆ ಗೌರವವನ್ನು ಹೊಂದಿದ್ದ ರಾಜಕಾರಣಿ. ಈಗ ಕೆಲವರು ಸಂವಿಧಾನ ಬದಲಾವಣೆಯ ಬಗ್ಗೆ ಮಾತನಾಡುತ್ತಾರೆ. ಸಂವಿಧಾನ ಉಳಿದರೆ ನಾವು-ನೀವು ಉಳಿಯಲು ಸಾಧ್ಯ. ಯಾರೇ ರಾಜಕಾರಣಿಗಳು ಸಂವಿಧಾನದ ಬಗ್ಗೆ ಬದ್ಧತೆಯನ್ನು ಬೆಳೆಸಿಕೊಳ್ಳಬೇಕು ಎಂದರು.

ತಂದೆಯ ಸ್ಥಾನವನ್ನು ಅವರ ಮಗ ತುಂಬುತ್ತಾರೆ:

ಅಜಾತ ಶತ್ರುವಾಗಿದ್ದ ಧ್ರುವನಾರಾಯಣ ರವರ ವ್ಯಕ್ತಿತ್ವನ್ನೇ ಅವರ ಪುತ್ರ ಶಾಸಕ ದರ್ಶನ್ ಧ್ರುವನಾರಾಯಣ ಅವರೂ ಕೂಡ ಹೊಂದಿದ್ದು ಎಲ್ಲಾ ಜನರೊಂದಿಗೆ ಬೆರತು ಪ್ರೀತಿಸುವ ಮೂಲಕ ತಂದೆ ಸ್ಥಾನವನ್ನು ತುಂಬುವ ಕೆಲಸವನ್ನು ಅವರ ಮಗ ದರ್ಶನ್‌ ಧ್ರುವನಾರಾಯಣ ಮಾಡುತ್ತಿದ್ದಾರೆ. ಅವರಿಗೆ ನಾನು ಸಂಪೂರ್ಣ ಬೆಂಬಲ ಸಹಕಾರ ನೀಡುತ್ತೇನೆ ಎಂದರು.

ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿ, ಧ್ರುವನಾರಾಯಣ ಅವರು ಜನರ ಜೊತೆ ನಿರಂತರ ಸಂಪರ್ಕವಿಟ್ಟುಕೊಂಡು ಹಗಲು-ರಾತ್ರಿ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಧಣಿವರಿಯದೆ ದುಡಿದವರು ಅಲ್ಲದೆ ರಾಜಶೇಖರ ಮೂರ್ತಿ ಅವರ ಅನುಯಾಯಿಯಾಗಿ ಎಲ್ಲರ ಜೊತೆ ಸ್ನೇಹಮಯ ಸಂಬಂಧವಿಟ್ಟುಕೊಂಡ ಅಜಾತಶತ್ರು ಎನಿಸಿಕೊಂಡ ನಿಷ್ಕಕಳಂಕ ರಾಜಕಾರಣಿ. ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೆ ಎಲ್ಲಾ ಸಚಿವರೊಂದಿಗೆ ನಿರಂತರ ಸಂಪರ್ಕವಿಟ್ಟುಕೊಂಡು ಜಿಲ್ಲೆಯ ಅಭಿವೃದ್ಧಿಗೆ ಶ್ರೇಷ್ಠ ಕೊಡುಗೆ ನೀಡಿದ ನಿಷ್ಠಾವಂತ ರಾಜಕಾರಣಿ. ಅವರ ಸರಳ ಜೀವನ ಎಲ್ಲರಿಗೂ ಮಾದರಿ. ಅವರು ನಡೆ ಸದಾ ನೆನಪಿನಲ್ಲಿಟ್ಟುಕೊಳ್ಳಂತೆ ಬದುಕಿ ಹೋಗಿದ್ದಾರೆ. ಅವರ ನಡೆ ಅವರ ಮಕ್ಕಳಿಗೆ ದಾರಿ ದೀಪವಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

ನಿಮ್ಮ ಜೊತೆ ನಾನು ನಿಲ್ಲುತ್ತೇನೆ:

ಶಾಸಕ ದರ್ಶನ್‌ಧ್ರುವನಾರಾಯಣ ಮಾತನಾಡಿ, ನನ್ನ ತಂದೆಯ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಯಾರೂ ಕೂಡ ಭಯಪಡುವ ಅಗತ್ಯವಿಲ್ಲ, ನನ್ನ ಕೊನೆಯ ಉಸಿರಿರುವವರೆವಿಗೂ ನಿಮ್ಮೆಲ್ಲರ ಸೇವೆ ಮಾಡುತ್ತೇನೆ, ನನ್ನ ತಂದೆಯಂತೆಯೇ ನಿಮ್ಮರ ಸಂಕಷ್ಟಕ್ಕೆ ನಿಮ್ಮೆಲ್ಲರ ಜೊತೆ ನಾನು ನಿಲ್ಲುತ್ತೇನೆ ಎಂದರು. ಕಾರ್ಯಕ್ರಮದಲ್ಲಿ ಶಾಸಕ ಗಣೇಶ್‌ಪ್ರಸಾದ್ ಮಾತನಾಡಿದರು.ಸಮಾರಂಭದಲ್ಲಿ ಶಾಸಕರಾದ ಪುಟ್ಟರಂಗಶೆಟ್ಟಿ, ಅನಿಲ್‌ ಚಿಕ್ಕಮಾದು, ಎ.ಆರ್.ಕೃಷ್ಣಮೂರ್ತಿ, ಡಾ.ತಿಮ್ಮಯ್ಯ, ಮರಿತಿಬ್ಬೇಗೌಡ, ಮಾಜಿ ಶಾಸಕ ಯತೀಂದ್ರಸಿದ್ದರಾಮಯ್ಯ, ಕಳಲೆಕೇಶವಮೂರ್ತಿ, ಎಂ.ಕೆ.ಸೋಮಶೇಖರ್, ಜಯಣ್ಣ, ನಂಜುಂಡಸ್ವಾಮಿ, ಮಾಜಿ ಸಚಿವ ಬಿ.ಸೋಮಶೇಖರ್, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಎ. ಸಿದ್ದರಾಜು, ಮೈಸೂರು ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ಚಾಮರಾಜನಗರ ಜಿಲ್ಲಾಧ್ಯಕ್ಷ ಮರಿಸ್ವಾಮಿ, ವಾಲ್ಮೀಕಿ ನಿಗಮ ಮಾಜಿ ಅಧ್ಯಕ್ಷ ಎಚ್.ಸಿ.ಬಸವರಾಜು, ಸೇರಿದಂತೆ ಹಲವಾರು ಪ್ರಮುಖರು ಇದ್ದರು.