ಕಸಾಪ ಕೆಲಸ ಕನ್ನಡ ಸಂಸ್ಕೃತಿ, ಸಾಹಿತ್ಯದಲ್ಲಿರುವ ಪರಂಪರೆಯನ್ನು ಜನತೆಗೆ ತಿಳಿಸುವುದಾಗಿದೆ ಹೊರತು ಸರ್ವಾಧಿಕಾರಿ ಧೋರಣೆ ಅನುಸರಿಸುವುದಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಕಸಾಪ ಕಾರ್ಯವೈಖರಿಯನ್ನು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಕಸಾಪ ಕೆಲಸ ಕನ್ನಡ ಸಂಸ್ಕೃತಿ, ಸಾಹಿತ್ಯದಲ್ಲಿರುವ ಪರಂಪರೆಯನ್ನು ಜನತೆಗೆ ತಿಳಿಸುವುದಾಗಿದೆ ಹೊರತು ಸರ್ವಾಧಿಕಾರಿ ಧೋರಣೆ ಅನುಸರಿಸುವುದಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಕಸಾಪ ಕಾರ್ಯವೈಖರಿಯನ್ನು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿನ ಕನ್ನಡಭವನದಲ್ಲಿ ತಾಲೂಕು ಸಾಹಿತ್ಯ ಪರಿಷತ್ ವತಿಯಿಂದ ನಡೆದ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಕಸಾಪ ಎಲ್ಲರ ಪರಿಷತ್‌ ಆಗಬೇಕು, ಅದು ಕೇವಲ ವ್ಯಕ್ತಿಗತವಾಗಬಾರದು. ನಾಡು ನುಡಿ ಜನರ ಹಿತವನ್ನು ಬಯಸುವ ಪರಿಷತ್‌ ಆಗಬೇಕು. ಸಾಹಿತ್ಯ ಸಮ್ಮೇಳನಗಳ ಉದ್ದೇಶ ಕನ್ನಡ ಪ್ರಜ್ಞೆಯ ವಿಸ್ತರಣೆಯಾಗಿದೆ ಎಂದು ತಿಳಿಸಿದರು.

ಕನ್ನಡದ ಶಕ್ತಿ ಸಾಮಾನ್ಯವಾದುದಲ್ಲ, ಕನ್ನಡದ ಘೋಷಣೆಯಲ್ಲಿಯೇ ಕಾವ್ಯದ ಶಕ್ತಿ ಅಡಗಿದೆ. ಕನ್ನಡ ಬಳಕೆ ಬಾಹ್ಯ ಪ್ರದರ್ಶನದ ಜೊತಗೆ ಅಂತರಿಕ ಪ್ರಜ್ಞೆ ಹೊಂದಿರಬೇಕು. ಶೈಕ್ಷಣಿಕ ಮೌಲ್ಯ ಸಾಮಾಜಿಕ ಪ್ರಜ್ಞೆ, ಇನ್ನಿತರ ಮೌಲ್ಯಗಳನ್ನು ಒಳಗೊಂಡಿರುವ ರಸಾನುಭವದ ಸುಂದರ ಅಭಿವ್ಯಕ್ತಿಯೇ ಕನ್ನಡ ಸಾಹಿತ್ಯವೆಂದರು.

ಶಿಕ್ಷಣ ಕ್ಷೇತ್ರದಲ್ಲಿ ಕನ್ನಡಕ್ಕೆ ಹೆಚ್ಚು ಆದ್ಯತೆ ಇರಬೇಕು. ಡಾ.ಕೆ.ಪಿ.ನಟರಾಜರವರ ಕನ್ನಡ ಭಾಷೆ ಬದ್ಧತೆ ಇರುವ ಕವಿ, ಚಿಂತಕರು,ಸಮ್ಮೇಳನಧ್ಯಕ್ಷರಾಗಿ ಆಯ್ಕೆಗೆ ಅಭಿನಂದನಾರ್ಹರು. ಸಮ್ಮೇಳದಲ್ಲಿ ಸಾಹಿತ್ಯಾಸಕ್ತರು ಒಂದು ಕಡೆ ಸೇರುವುದೇ ಸಂಭ್ರಮ, ಕನ್ನಡದ ಬದ್ಧತೆ ಮತ್ತು ಎಲ್ಲರನ್ನೂ ಒಗ್ಗೂಡಿಸುವ ಸಾಂಸ್ಕೃಿತಿಕೆ ನೆಲೆ ಹೊಂದಿದ್ದು. ಶೈಕ್ಷಣಿಕ ಮೌಲ್ಯ ಸದೃಢವಾಗಬೇಕು. ಆ ನಿಟ್ಟಿನಲ್ಲಿ ಕನ್ನಡ ಇಲ್ಲದೆ ಹೋದರೆ ಪತ್ರಿಕೆ, ಸಿನಿಮಾ,ನಾಟಕ ನೋಡುವವರಿಲ್ಲ. ವಿಚಾರಗೋಷ್ಠಿಗಳಿಗೆ ಹೆಚ್ಚು ಮಹತ್ವ ಕೊಡಬೇಕು. ಕಡಿಮೆ ಜನರ ನಡುವೆ ನಡೆಯುವ ಸಂವಾದ, ಚರ್ಚೆ,ವಿಚಾರಗಳು ಬಹಳ ಪ್ರಮುಖ ಎಂದರು.

ಕಡ್ಡಾಯ ಶಿಕ್ಷಣ ಕಾಯ್ದೆಯ ಪ್ರಕಾರ ಚರ್ಚೆಯೇ ಇಲ್ಲದೆ ಶಾಲೆ ಮುಚ್ಚುವುದು ಸರಿಯಲ್ಲ. ರಾಜ್ಯದಲ್ಲಿ 65 ಸಾವಿರಕ್ಕೂ ಹೆಚ್ಚು ಅಂಗನವಾಡಿಗಳಿದ್ದು, ಸಾಮಾಜಿಕ ಆರ್ಥಿಕ ,ಶೈಕ್ಷಣಿಕ ಅಸಮಾನತೆ ಇದೆ. ಈ ನಾಡಿನಲ್ಲಿ ಓದುವ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ಕೊಡಬೇಕು. 57 ಸಾವಿರಕ್ಕೂ ಅಧಿಕ ಅಧ್ಯಾಪಕರ ಹುದ್ದೆಗಳು ಖಾಲಿ ಇವೆ. ಅತಿಥಿ ಶಿಕ್ಷಕರನ್ನು ನೇಮಿಸಿದೆ ಹೊರತು ಕಾಯಂ ಮಾಡಿಲ್ಲ ಸಮತೋಲನದ ಶೈಕ್ಷಣಿಕ ಪ್ರಗತಿ ಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ, ಕನ್ನಡದ ನೆಲದಲ್ಲಿಯೇ ಕನ್ನಡಕ್ಕಾಗಿ ಹೋರಾಟ ಮಾಡಬೇಕಾದ ಸನ್ನಿವೇಶ ಬಂದಿದೆ. ಇಂದು ಕನ್ನಡ ನೆಲದಲ್ಲಿ ಕಾನೂನು ತಂದು ಕನ್ನಡ ಉಳಿಸಲು ಹೋರಾಟ ಮಾಡುತ್ತಿರುವುದು ನಮ್ಮ ದುರ್ದೈವ. ನಮ್ಮ ಮಕ್ಕಳಿಗೆ ಶಿಕ್ಷಣ ಕಲಿಯುವ ವೇಳೆ ಪ್ರೀತಿ, ಗೌರವ, ಸಂಯಮ ನಮ್ಮ ಮಾತೃಭಾಷೆ ಕನ್ನಡದಲ್ಲಿ ಹೇಳಿ ಕೊಡಬೇಕು. ಬಹಳ ಜನ ಕನ್ನಡ ಮಾತನಾಡುತ್ತಾರೆ. ಆದರೆ ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಸೇರಿಸುವುದನ್ನು ನೋಡಿದ್ದೇವೆ. ಬೇರೆ ಭಾಷೆ ಕಲಿಯಲು ಯಾವುದೇ ಅಭ್ಯಂತರವಿಲ್ಲ ,ಆದರೆ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು ಎಂದರು.

ಸಮ್ಮೇಳನಾಧ್ಯ ಕೆ.ಪಿ.ನಟರಾಜ ಮಾತನಾಡಿ, ನಾಡಿನ ಹಿರಿಯ ಕವಿ ದೊಡ್ಡರಂಗೇಗೌಡರು ಈ ತಾಲೂಕಿನವರು. ಲೇಖಕ, ಎಂ.ಡಿ.ಶ್ರೀನಿವಾಸ್ ಮಧುಗಿರಿ ಇತಿಹಾಸ ಕೃತಿಗೆ ಬರೆದ ಮುನ್ನಡಿಯಲ್ಲಿ ಕನ್ನಡದ ಶ್ರೇಷ್ಠ ಕಥೆಗಾರ ಮಾಸ್ತಿ ಅವರು ಮಧುಗಿರಿಯಲ್ಲಿ ಎಸಿ ಆಗಿದ್ದಾಗ ಮದ್ದಗಿರಿ ಎಂಬ ಊರನ್ನು ಮಧುಗಿರಿ ಎಂದು ಬದಲಿಸಿದ ಇತಿಹಾಸವನ್ನು ನೆನಪಿಸಿದರು.

ಸಾಹಿತ್ಯ ಸಮ್ಮೇಳನದ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶಾಲಾ -ಕಾಲೇಜು ಮಕ್ಕಳು ,ಸಾಹಿತಿಗಳು,ಕನ್ನಡಭಿಮಾನಿಗಳು ಕುಣಿದು ಕುಪ್ಪಳಿಸಿದರು. ಸರ್ವದ್ಯಕ್ಷರಾದ ಡಾ.ಕೆ.ಪಿ.ನಟರಾಜ ಹಾಗೂ ನಾಡದೇವಿ ಭುವನೇಶ್ವರಿ ಭಾವ ಚಿತ್ರದ ಭವ್ಯ ಮೆರವಣಿಗೆ ನಡೆಯಿತು.

ಸಮಾರಂಭದಲ್ಲಿ ಜಿಲ್ಲಾಧ್ಯಕ್ಷ ಕೆ.ಎಸ್‌.ಸಿದ್ದಲಿಂಗಪ್ಪ, ತಾ.ಅಧ್ಯಕ್ಷೆ ಸಹನಾ ನಾಗೇಶ್‌, ನಿರ್ಮಾಪಕ ರವಿ ಆರ್‌.ಗರಣಿ, ನಿಖಿತ್ ರಾಜ್ ಮೌರ್ಯ,ಪುರಸಭೆ ಮಾಜಿ ಅಧ್ಯಕ್ಷರಾದ ಎನ್‌.ಗಂಗಣ್ಣ, ಕೆ.ಪ್ರಕಾಶ್, ಎಂ.ಕೆ.ನಂಜುಂಡರಾಜು, ಬಾಲಗುರುಮೂರ್ತಿ,ಎಂ.ಎಸ್‌.ಶಂಕರನಾರಾಯಣ್‌,ಟಿ.ಲಕ್ಷ್ಮೀನರಸಯ್ಯ , .ಜಗದೀಶ್, ಬಿ.ನಾಗೇಶ್‌ ಬಾಬು, ಜಿಲ್ಲಾಧ್ಯಕ್ಷ ರಂಗಪ್ಪ, ಗೋಪಾಲಯ್ಯ, ಪ್ರೊ.ಸಿ.ಕೃಷ್ಣಪ್ಪ, ಮಲನಮೂರ್ತಿ, ಮಹಾಲಿಂಗೇಶ್‌, ರಂಗಶ್ಯಾಮಣ್ಣ, ಎ.ರಾಮಚಂದ್ರಪ್ಪ, ಸಾಹಿತ್ಯ ಪರಿಷತ್‌ ಪದಾಧಿಕಾರಿಗಳು ಕನ್ನಡಾಭಿಮಾನಿಗಳು ಇದ್ದರು.