ಸಾರಾಂಶ
ವ್ಯವಸ್ಥೆಯಲ್ಲಿನ ಭ್ರಷ್ಠಾಚಾರ ನಿಯಂತ್ರಣಕ್ಕೆ ದಾಖಲೆಗಳ ಡಿಜಟಲೀಕರಣ ಯೋಜನೆ ಅತ್ಯಂತ ಸಹಕಾರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ. ಪಾಟೀಲ ಹೇಳಿದರು.
ಗದಗ: ವ್ಯವಸ್ಥೆಯಲ್ಲಿನ ಭ್ರಷ್ಠಾಚಾರ ನಿಯಂತ್ರಣಕ್ಕೆ ದಾಖಲೆಗಳ ಡಿಜಟಲೀಕರಣ ಯೋಜನೆ ಅತ್ಯಂತ ಸಹಕಾರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ. ಪಾಟೀಲ ಹೇಳಿದರು.
ನಗರದ ತಹಸೀಲ್ದಾರ್ ಕಚೇರಿಯಲ್ಲಿ ಭಾನುವಾರ ಭೂ ದಾಖಲೆಗಳ ಡಿಜಟಲಿಕರಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಡಿಜಟಲೀಕರಣಕ್ಕೆ ಅತ್ಯಂತ ವೇಗ ನೀಡಿದ್ದು, ಮೂರು ತಿಂಗಳ ಒಳಗಾಗಿ ಡಿಜಿಟಲಿಕರಣ ವ್ಯವಸ್ಥೆ ಪೂರ್ಣಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಗದಗ ತಾಲೂಕಿನ ಭೂ ದಾಖಲೆಗಳ ಡಿಜಟಲೀಕರಣ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ತಹಸೀಲ್ದಾರರುಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಭೂ ದಾಖಲೆಗಳನ್ನು ಎಬಿಸಿಡಿಇ ಎಂದು ವಿಂಗಡಿಸಿ, ದಾಖಲೀಕರಣ ಮಾಡಲಾಗುತ್ತಿದೆ.ತಾಲೂಕಿನಲ್ಲಿ ಎ ಮತ್ತು ಬಿ ರಜಿಷ್ಟರ್ 27095 ಗಳಿದ್ದು, ಅವುಗಳು ಒಟ್ಟು 51.74 ಲಕ್ಷ ಪುಟಗಳಿವೆ.ಎಲ್ಲ ಹಂತಗಳ ದಾಖಲೆಗಳ ಒಟ್ಟಾರೆ 68.50 ಲಕ್ಷ ಪುಟಗಳಿವೆ, ಅವುಗಳನ್ನು ಸ್ಕ್ಯಾನ್ ಮಾಡಿ ಸಂರಕ್ಷಣೆ ಮಾಡುವ ಮೂಲಕ ಸುಲಭವಾಗಿ ಸಿಗುವಂತೆ ಕ್ರಮ ವಹಿಸಲಾಗುತ್ತಿದೆ. ಇದೊಂದು ಸರ್ಕಾರದ ಕ್ರಾಂತಿಕಾರಿ ಆಡಳಿತಾತ್ಮಕ ಹೆಜ್ಜೆ ಎಂದರು.
ಸರ್ಕಾರಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ಜಾರಿಗೊಳಿಸಲು ಹಾಗೂ ವ್ಯವಸ್ಥೆ ಚುರುಕುಗೊಳಿಸಿ ಕ್ರಿಯಾಶೀಲವಾಗಿಸಲು,ಅಲ್ಲದೆ ದಾಖಲೆಗಳನ್ನು ಶೀಘ್ರ ಸಾರ್ವಜನಿಕರಿಗೆ ತಲುಪಿಸಲು ಈ ದಾಖಲೀಕರಣ ಯೋಜನೆ ಅತ್ಯಂತ ಸಹಕಾರಿಯಾಗಿದೆ ಎಂದರು.
ಭೂ ಸುರಕ್ಷಾ ಯೋಜನೆಯಿಂದ ದಾಖಲೆಗಳು ಸುಭದ್ರ, ಶಾಶ್ವತವಾಗಿಸುವದು. ನೇರ ಸುಲಭವಾಗಿ ಸಾರ್ವಜನಿಕರಿಗೆ ತಲುಪಿಸಲು, ತಂತ್ರಜ್ಞಾನದಿಂದ ಸಾರ್ವಜನಿಕ ಕೈಗೆ ಶಕ್ತಿ, ದಾಖಲೆಗಳ ತಿದ್ದಲು ಕಳೆಯಲು ಅಸಾಧ್ಯ ಹಾಗೂ ತ್ವರಿತ ಆಡಳಿತ ನೀಡಲು ಇದರಿಂದ ಸಾಧ್ಯ ಎಂದು ತಿಳಿಸಿದರು.
ಹಳೆಯ ದುಸ್ಥಿತಿಯಲ್ಲಿರುವ ಭೂ ದಾಖಲೆಗಳನ್ನು ಶಾಶ್ವತ ಡಿಜಿಟಲ್ ದಾಖಲೆಗಳಾಗಿ ಪರಿವರ್ತನೆಯಾಗುತ್ತದೆ. ರೆಕಾರ್ಡ್ ರೂಮ್ ಗಳಿಂದ ಪಡೆದುಕೊಳ್ಳಲು ಇರುವ ತೊಂದರೆಗಳ ನಿವಾರಣೆಯಾಗುತ್ತದೆ. ಹಳೆಯ ದಾಖಲೆಗಳ ಸಂರಕ್ಷಣೆ ಹಾಗೂ ಕಳವಾಗಲು, ತಿದ್ದಲು ಅಸಾಧ್ಯವಾಗಿದೆ. ಸಾರ್ವಜನಿಕರು ನೇರವಾಗಿ ಪಡೆದುಕೊಳ್ಳುವ ಸೌಲಭ್ಯ ಸಿಗಲಿದೆ. ನಿಮ್ಮ ದಾಖಲೆ ನಿಮ್ಮ ಕೈಗೆ ತಲುಪಿಸುವ ಯೋಜನೆಯಾಗಿದೆ. ವಿನಾಕಾರಣ ವಿಳಂಬ, ಅಡೆತಡೆ ಆಲಿಸಿ, ತ್ವರಿತ ಆಡಳಿತ ಸೇವೆ ಒದಗಿಸುವ ಪ್ರಯತ್ನ ಸರ್ಕಾರದಿಂದ ನಡೆದಿದೆ. ಡಿಜಿಟಲ್ ಸ್ಪರ್ಶದಿಂದ ಉತ್ತಮ ಜನಪರ ಆಡಳಿತ ನಿಮ್ಮ ಭೂ ಒಡೆತನಕೊಂದು ಗ್ಯಾರಂಟಿ ನೀಡಿದಂತಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಪ ಸದಸ್ಯ ಎಸ್.ವಿ. ಸಂಕನೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಾಬರ್ಜಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ.ಎಂ., ಉಪ ವಿಭಾಗಾಧಿಕಾರಿ ಗಂಗಪ್ಪ.ಎಂ., ತಹಸೀಲ್ದಾರ್ ಶ್ರೀನಿವಾಸ್ ಮೂರ್ತಿ ಕುಲಕರ್ಣಿ ಸೇರಿದಂತೆ ಇನ್ನಿತರರು ಹಾಜರಿದ್ದರು.