ಸಾರಾಂಶ
ದೊಡ್ಡಬಳ್ಳಾಪುರ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ವಿಭಾಗದಿಂದ ಪುಸ್ತಕ ಪ್ರದರ್ಶನ ಮತ್ತು ಓದುಗರ ವೇದಿಕೆ ಉದ್ಘಾಟನೆ ಹಾಗೂ ಈ ಸಂಪನ್ಮೂಲಗಳ ಕುರಿತು ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕಾಲೇಜು ಶಿಕ್ಷಣ ಇಲಾಖೆಯ ನೋಡಲ್ ಅಧಿಕಾರಿ ಡಾ.ನಾಗೇಶ್ ಮಾತನಾಡಿ, ಸಾಕಷ್ಟು ಈ ಸಂಪನ್ಮೂಲಗಳು ಆನ್ಲೈನ್ ನಲ್ಲಿ ಲಭ್ಯವಿದ್ದು, ಎನ್-ಲಿಸ್ಟ್ ನಲ್ಲಿ ಲಕ್ಷಗಟ್ಟಲೆ ಉಚಿತ ಇ-ಪುಸ್ತಕಗಳು ಲಭ್ಯವಿದೆ. ಇದನ್ನು ಉಪಯೋಗಿಸಿಕೊಳ್ಳುವುದು ಹೇಗೆ, ಪಾಸ್ವರ್ಡ್ ಗಳನ್ನ ಬಳಸುವುದು ಹೇಗೆ ಎಂಬುದರ ಬಗ್ಗೆ ಅರಿವು ಹೊಂದುವುದು ಅಗತ್ಯ ಎಂದು ತಿಳಿಸಿದರು.
ಸಾರ್ವಜನಿಕ ಗ್ರಂಥಾಲಯ ಅಭಿವೃದ್ಧಿಪಡಿಸಿರುವ ಆನ್ಲೈನ್ ಸೇವೆಯಿಂದ ವಿದ್ಯಾರ್ಥಿಗಳು ಎಲ್ಲ ವಿಷಯಗಳ ಬಗ್ಗೆ ಅರಿತರೆ ಕಲೆ, ವಿಜ್ಞಾನ,ಸಾಹಿತ್ಯ, ವಾಣಿಜ್ಯ, ಕಾದಂಬರಿ, ಕೌಶಲ್ಯ ಹಾಗೂ ಸ್ಪರ್ಧಾತ್ಮಕ ಜಗತ್ತಿಗೆ ಬೇಕಾಗುವ ಉಪಯುಕ್ತವಾದ ಪುಸ್ತಕಗಳು ವಿಷಯವಾರು ಲಭ್ಯವಿದ್ದು, ಅವುಗಳನ್ನ ಡೌನ್ಲೋಡ್ ಮಾಡಿಕೊಂಡು ಮನೆಯಲ್ಲಿ ಕುಳಿತು ಅದನ್ನು ಬಳಸಿಕೊಳ್ಳುವುದು ಹೇಗೆ ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದಲ್ಲದೇ, ಹಲವಾರು ಇಲಾಖೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳು ಗ್ರಂಥಾಲಯದಲ್ಲಿ ಲಭ್ಯವಿದ್ದು, ಇದರ ಸದುಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆಯಬೇಕು ಎಂದರು.ಕಾಲೇಜಿನ ಗ್ರಂಥಾಲಯದ ಮತ್ತು ಮಾಹಿತಿ ಕೇಂದ್ರದ ಮುಖ್ಯಸ್ಥ ಎಂ.ಸಿ.ವಿನೋದ್ ಕುಮಾರ್ ಮಾತನಾಡಿ, ಇಂದಿನ ಇಂಟರ್ನೆಟ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳನ್ನ ಹೆಚ್ಚು ಉಪಯುಕ್ತವಾಗುವ ರೀತಿ ಬಳಸಿಕೊಂಡು, ಆನ್ಲೈನಲ್ಲಿ ಸಿಗುವ ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಳ್ಳಬೇಕು ಎಂದರು.
ಕಾಲೇಜಿನ ಐಕ್ಯೂಎಸಿ ಸಂಚಾಲಕ ಡಾ.ಬಿ.ಆರ್ ಗಂಗಾಧರಯ್ಯ ಮಾತನಾಡಿ, ನಮ್ಮ ಕಾಲೇಜಿನ ಗ್ರಂಥಾಲಯ ಮತ್ತು ಗ್ರಂಥಪಾಲಕರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ಇದು ಎಲ್ಲಾ ಓದುಗರ ಬೌದ್ಧಿಕ ಮಟ್ಟವನ್ನ ವೃದ್ಧಿಸಿಕೊಳ್ಳಲು ಸಹಾಯಕವಾಗಿದೆ ಎಂದರು.ಪ್ರಾಂಶುಪಾಲ ಡಾ.ಸದಾಶಿವ ರಾಮಚಂದ್ರಗೌಡ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಹೆಚ್ಚು ಮೊಬೈಲ್ ನಲ್ಲಿ ತೊಡಗದೆ, ಕಾಲೇಜಿನಲ್ಲಿ ಸಿಗುತ್ತಿರುವಂತಹ ಉಪಯುಕ್ತ ಮಾಹಿತಿಗಳನ್ನು ಬಳಸಿಕೊಂಡು, ಕಾಲೇಜಿನ ಗ್ರಂಥಾಲಯವನ್ನು ಉಪಯೋಗಿಸಿ ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲವಾಗಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಇದೇ ವೇಳೆ ವರ್ಷದ ಅತ್ಯುತ್ತಮ ಗ್ರಂಥಾಲಯ ಬಳಕೆದಾರ ಪ್ರಶಸ್ತಿಯನ್ನು ಪದವಿ ಅಂತಿಮ ವರ್ಷದ ವಿದ್ಯಾರ್ಥಿನಿ ಶೋಭಿತಾ ಪಡೆದರು. ಪ್ರಾಧ್ಯಾಪಕರಾದ ಉಮೇಶ್, ಡಾ.ಪ್ರಕಾಶ್ ಮಂಟೇದ, ಡಾ.ಸತ್ಯನಾರಾಯಣ ಗೌಡ, ಡಾ.ರಂಗಸ್ವಾಮಿ, ಡಾ.ಕೆಂಪರಾಜು, ಡಾ.ಸಿದ್ದರಾಮರಾಜು, ನೀರಜಾದೇವಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.30ಕೆಡಿಬಿಪಿ2- ದೊಡ್ಡಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪುಸ್ತಕ ಪ್ರದರ್ಶನ ಮತ್ತು ಓದುಗರ ವೇದಿಕೆ ಉದ್ಘಾಟನೆ ಕಾರ್ಯಕ್ರಮ ನಡೆಯಿತು.