ಸಾರಾಂಶ
38ನೇ ವರ್ಷದ ಉತ್ಸವ । ವಿಶೇಷ ಜ್ಞಾನೇಶ್ವರಿ ಗ್ರಂಥ ಪುರಾಣ ಸಪ್ತಾಹ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಬೇಲೂರುಪಟ್ಟಣದ ಹಳೆ ಪೋಸ್ಟ್ ಆಫೀಸ್ ರಸ್ತೆಯ ಬಳಿ ಇರುವ ಶ್ರೀ ರುಕ್ಮಿಣಿ ಪಾಂಡುರಂಗ ಸ್ವಾಮಿಯ ದೇವಾಲಯದಲ್ಲಿ ಮಂಗಳವಾರ 38ನೇ ವರ್ಷದ ದಿಂಡಿ ಪೂಜಾ ಮಹೋತ್ಸವ ಹಾಗೂ ವಿಶೇಷ ಜ್ಞಾನೇಶ್ವರಿ ಗ್ರಂಥ ಪುರಾಣ ಸಪ್ತಾಹ ಕಾರ್ಯಕ್ರಮವು ಸಂಭ್ರಮದಿಂದ ಜರುಗಿತು.
ಪಟ್ಟಣದ ಪಾಂಡುರಂಗ ದೇವಾಲಯದಲ್ಲಿ ಮುಂಜಾನೆಯಿಂದಲೇ ಕಾಕಡ ಅರತಿ. ಭಜನೆ ಸೇರಿದಂತೆ ಶ್ರೀ ರುಕ್ಮಿಣಿ ಪಾಂಡುರಂಗ ಸ್ವಾಮಿಯ ಅದ್ಧೂರಿ ದಿಂಡಿ ಪೂಜಾ ಉತ್ಸವ ಪಟ್ಟಣದ ಮುಖ್ಯರಸ್ತೆಯ ಮೂಲಕ ತೆರಳಿ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದ ಬಳಿಗೆ ಬಂದು ಪರಸ್ಪಳದ ಸಂತರು. ಸಮಾಜ ಬಾಂಧವರು ಸೇರಿದಂತೆ ಭಕ್ತಾದಿಗಳು ಸಡಗರ ಸಂಭ್ರಮದಿಂದ ಶ್ರೀ ಚನ್ನಕೇಶವ ಸ್ವಾಮಿಗೆ ಪೂಜೆ ಸಲ್ಲಿಸಿ ದಿಂಡಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.ಈ ಸಂದರ್ಭ ಮಹಿಳೆಯರು ಪಾಂಡುರಂಗ ಭಜನೆಯಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಬದ್ರಿನಾಥ್ ಉತ್ತರ್ಕರ್ ಭದ್ರಾವತಿ ಅವರಿಂದ ಕಲಾ ಕೀರ್ತನೆ ನೆರವೇರಿಸಲಾಯಿತು. ನಂತರ ಶ್ರೀ ಪಾಂಡುರಂಗ ಸ್ವಾಮಿಗೆ ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನೆರವೇರಿಸಲಾಯಿತು.
ತಾಲೂಕು ಭಾವಸಾರ ಕ್ಷತ್ರಿಯ ಸಮಾಜದ ತಾಲೂಕು ಅಧ್ಯಕ್ಷ ಭಗವಂತ ರಾವ್ ಗುಜ್ಜರ್ ಮಾತನಾಡಿ, ಕಳೆದ ಎಂಟು ದಿನಗಳಿಂದ ಪಾಂಡುರಂಗ ಸ್ವಾಮಿ ದಿಂಡಿ ಪೂಜಾ ಮಹೋತ್ಸವ ಮತ್ತು ವಿಶೇಷ ಜ್ಞಾನೇಶ್ವರಿ ಗ್ರಂಥ ಪಾರಾಯಣ ಸಪ್ತಾಹ ಕಾರ್ಯಕ್ರಮಕ್ಕೆ ಸಮಾಜ ಬಾಂಧವರು ಮತ್ತು ಭಕ್ತರು ಪರಸ್ಪರದ ಸಂತರು ಭಾಗವಹಿಸಿ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನೆರವೇರಿಸಿದ್ದು ಕಳೆದ ಎಂಟು ದಿನಗಳಿಂದ ಭಜನೆ ಕೀರ್ತನೆ ವಿಶೇಷ ಪೂಜೆ ಮತ್ತು ದಾಸೋಹ ಪ್ರಸಾದ ವ್ಯವಸ್ಥೆ ಏರ್ಪಡಿಸಿದ್ದು ಭಕ್ತರು ಪಾಲ್ಗೊಂಡು ಶ್ರೀ ಪಾಂಡುರಂಗನ ಕೃಪೆಗೆ ಪಾತ್ರರಾದರು ಎಂದು ಹೇಳಿದರು.ಕ್ಷತ್ರಿಯ ಸಮಾಜದ ಮುಖಂಡ ಜಯಣ್ಣ ಮಾತನಾಡಿ, ಬೇಲೂರು ಭಾವಸಾರ ಕ್ಷತ್ರಿಯ ಸಮಾಜ ಬಾಂಧವರ ಮತ್ತು ಪಾಂಡುರಂಗ ಸ್ವಾಮಿಯ ಭಕ್ತರ ಸಹಕಾರದಲ್ಲಿ 38ನೇ ದಿಂಡಿ ಮಹೋತ್ಸವ ವಿಜೃಂಭಣೆಯಿಂದ ನೆರವೇರಿದ್ದು ಸಮಾಜದ ಅಧ್ಯಕ್ಷರಾದ ಭಗವಂತ ರಾವ್ ಅವರ ಸಮ್ಮುಖದಲ್ಲಿ ಕಾರ್ಯಕ್ರಮ ಯಶಸ್ವಿಗೊಂಡಿದ್ದು ಮುಂದಿನ ದಿನಗಳಲ್ಲಿಯೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಂಡುರಂಗನ ಸೇವೆಗೆ ಮುಂದಾಗಬೇಕು ಎಂದರು.
ಭಾವಸಾರ ಕ್ಷತ್ರಿಯ ಸಮಾಜದ ಗೌರವಾಧ್ಯಕ್ಷ ಆನಂದ್ ಚಿಂಬಳ್ಕರ್, ಉಪಾಧ್ಯಕ್ಷ ಬೇಕರಿ ಮಂಜುನಾಥ್, ಕಾರ್ಯದರ್ಶಿ ಗಣೇಶ್ ರಾವ್ ಪೂಕಾಳೆ. ಖಜಾಂಚಿ ಗಣೇಶ್ ಚಿಂಬಳ್ಕರ್, ಸಹ ಕಾರ್ಯದರ್ಶಿ ವಿಶ್ವನಾಥ್ ಗುಜ್ಜರ್, ಸಮಾಜದ ಮಾಜಿ ಅಧ್ಯಕ್ಷ ಬಾಬುರಾವ್ ರಾವ್, ಸಮಾಜದ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಬೇಕರಿ ಗಣೇಶ್, ದೀಪು ಸ್ಟುಡಿಯೋ, ಗೋಪಿ, ಗಣೇಶ್, ಚೇತನ್, ಅರುಣ್. ಪುಟ್ಟರಾಜ್, ಆನಂದ್, ಗಿರೀಶ್ ಸೇರಿ ಕಾರ್ಯಕಾರಿ ಮಂಡಳಿ ಭಾವಸಾರ ಕ್ಷತ್ರಿಯ ದೈವ ಮಂಡಳಿ ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು.