ಮಂಗಳೂರು ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜು, ಕೊಡಿಯಲ್‌ಬೈಲ್‌ನ ೪೦ನೇ ಎಕ್ಸ್‌ಪರ್ಟ್ ಡೇ ಉದ್ಘಾಟನಾ ಸಮಾರಂಭ ಇತ್ತೀಚೆಗೆ ನೆರವೇರಿತು.

ಮಂಗಳೂರು: ಯಶಸ್ಸು ಒಂದು ದಿನದಲ್ಲಿ ಸಿಗುವುದಿಲ್ಲ, ನಿರಂತರ ಪರಿಶ್ರಮ, ಶಿಸ್ತುಬದ್ಧ ಅಧ್ಯಯನ ಮತ್ತು ಆತ್ಮವಿಶ್ವಾಸ ಇದ್ದರೆ ಗುರಿಯನ್ನು ಸಾಧಿಸಬಹುದು. ವಿದ್ಯಾರ್ಥಿ ಜೀವನದಲ್ಲಿ ಸಮಯದ ಮೌಲ್ಯವನ್ನು ಅರಿತುಕೊಳ್ಳುವುದು ಅತ್ಯಂತ ಮುಖ್ಯ ಎಂದು ಎಕ್ಸ್‌ಪರ್ಟ್ ಕಾಲೇಜಿನ ಹಳೆ ವಿದ್ಯಾರ್ಥಿ, ಖ್ಯಾತ ಮಕ್ಕಳ ತಜ್ಞೆ ಡಾ. ಅರ್ಪಿತಾ ಎ. ರಂಜನ್ ಸಲಹೆ ನೀಡಿದರು.

ಅವರು ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜು, ಕೊಡಿಯಲ್‌ಬೈಲ್‌ನ ೪೦ನೇ ಎಕ್ಸ್‌ಪರ್ಟ್ ಡೇ ಉದ್ಘಾಟನಾ ಸಮಾರಂಭದಲ್ಲಿ ಮತನಾಡಿದರು. ಎಕ್ಸ್‌ಪರ್ಟ್ ಕಾಲೇಜು ನನಗೆ ನೀಡಿದ ಶಿಸ್ತು , ಆತ್ಮವಿಶ್ವಾಸ ಹಾಗೂ ಮೌಲ್ಯಾಧಾರಿತ ಶಿಕ್ಷಣವೇ ತಮ್ಮ ವೃತ್ತಿ ಜೀವನದ ಬಲವಾದ ಅಡಿಪಾಯವಾಗಿದೆ ಎಂದರು.

ಕಾಲೇಜು ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಅಧ್ಯಕ್ಷತೆ ವಹಿಸಿ ೪೦ನೇ ಎಕ್ಸ್‌ಪರ್ಟ್ ಡೇ ಕಾರ್ಯಕ್ರಮವನ್ನು ಅಧಿಕೃತವಾಗಿ ಉದ್ಘಾಟಿಸಿ ಮೂಲಕ ಸಾಂಸ್ಕೃತಿಕ ಹಾಗೂ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ. ಉಷಾಪ್ರಭಾ. ಎನ್.ನಾಯಕ್ ಅವರು ಸಂಸ್ಥೆಯ ೪೦ ವರ್ಷಗಳ ಶೈಕ್ಷಣಿಕ ಪಯಣವನ್ನು ಸ್ಮರಿಸುತ್ತಾ, ಮೌಲ್ಯಾಧಾರಿತ ಹಾಗೂ ಗುಣಮಟ್ಟದ ಶಿಕ್ಷಣವೇ ಸಮಾಜದ ಸ್ಥಿರ ಅಭಿವೃದ್ಧಿಗೆ ಮೂಲಸ್ತಂಭ. ಸಮಾಜಮುಖಿ ಚಿಂತನೆ , ಶಿಸ್ತಿನ ಜೀವನ ಸ್ಪಷ್ಟವಾದ ಗುರಿಯಿಂದ ಮಾತ್ರ ಸಮಗ್ರ ಯಶಸ್ಸು ಸಾಧ್ಯವೆಂದು ಹೇಳಿದರು. ಸಂಸ್ಥೆಯ ಬೆಳವಣಿಗೆಯಲ್ಲಿ ಶಿಕ್ಷಕರು , ವಿದ್ಯಾರ್ಥಿಗಳು ಹಾಗೂ ಪೋಷಕರು ಸಹಕಾರ ಮಹತ್ತ್ವದ ಪಾತ್ರವಹಿಸಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಮಚಂದ್ರಭಟ್‌ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಸ್ಮರಾಮಿ ಹಾಗೂ ಧನ್ವಿತ್ ನಿರೂಪಿಸಿದರು.