ಪುಷ್ಟಿ ಯೋಜನೆ ಆಯ್ಕೆಯಲ್ಲಿ ತಾರತಮ್ಯ, ಪ್ರತಿಭಟನೆ

| Published : Apr 18 2025, 12:40 AM IST

ಸಾರಾಂಶ

ಗ್ರಾಮಸ್ಥರು, ಶಿಕ್ಷಣ ಪ್ರೇಮಿಗಳು ಶಾಲೆಗೆ ಅಗತ್ಯ ಮೂಲ ಸೌಕರ್ಯ ನೀಡಿದ್ದಾರೆ. ಕಲಿಕೆಗೆ ಉತ್ತಮ ವಾತಾವರಣ, ಗುಣಮಟ್ಟದ ಶಿಕ್ಷಣ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳಿವೆ. ಆದರೂ ಪ್ರಶಸ್ತಿ ಆಯ್ಕೆಯಲ್ಲಿ ಅನ್ಯಾಯವಾಗಿದೆ ಎಂದು ಮುಕ್ಕಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.

ಕೊಪ್ಪಳ(ಯಲಬುರ್ಗಾ):

ಅತ್ಯುತ್ತಮ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಪುಷ್ಟಿ ಯೋಜನೆ) ಪ್ರಶಸ್ತಿ ಆಯ್ಕೆಯಲ್ಲಿ ಮಕ್ಕಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಶಿಕ್ಷಣ ಇಲಾಖೆಯಿಂದ ತಾರತಮ್ಯವಾಗಿದೆ ಎಂದು ಗುರುವಾರ ಯಲಬುರ್ಗಾ ಬಿಇಒ ಕಚೇರಿ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಪ್ರಶಸ್ತಿಗೆ ನಮ್ಮ ಶಾಲೆ ಅರ್ಹತೆ ಹೊಂದಿದೆ. 15 ಅಂಕವನ್ನು ಶಾಲಾ ಎಸ್‌ಡಿಎಂಸಿ ಪಡೆದಿದ್ದು ಎಲ್ಲ ಸೌಲಭ್ಯ ಲಭ್ಯವಿದೆ. ಮಕ್ಕಳಿಗೆ ಪೂರಕವಾದ ಅಂಶ ಶಾಲೆಯಲ್ಲಿದ್ದರೂ ಕೇವಲ 5 ಅಂಕ ಪಡೆದ ಶಾಲೆಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ನಮಗೆ ಎಸ್‌ಡಿಎಂಸಿ ಸಮಿತಿಯು ಬೇಡ. ನ್ಯಾಯ ಕೊಡಿ ಎಂದು ಗ್ರಾಮಸ್ಥರು ಆಗ್ರಹಿಸಿದರು.

ಗ್ರಾಮಸ್ಥರು, ಶಿಕ್ಷಣ ಪ್ರೇಮಿಗಳು ಶಾಲೆಗೆ ಅಗತ್ಯ ಮೂಲ ಸೌಕರ್ಯ ನೀಡಿದ್ದಾರೆ. ಕಲಿಕೆಗೆ ಉತ್ತಮ ವಾತಾವರಣ, ಗುಣಮಟ್ಟದ ಶಿಕ್ಷಣ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳಿವೆ. ಆದರೂ ಪ್ರಶಸ್ತಿ ಆಯ್ಕೆಯಲ್ಲಿ ಅನ್ಯಾಯವಾಗಿದೆ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಧಿಕಾರಿಗಳು ಪ್ರೋತ್ಸಾಹಿಸುವ ಬದಲು ತಾರತಮ್ಯ ಮಾಡುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಆರ್‌ಸಿ ಸಮನ್ವಯಾಧಿಕಾರಿ ಅಶೋಕಗೌಡರ ಅವರಿಂದಲೇ ನಮಗೆ ಅನ್ಯಾಯವಾಗಿದೆ. 15 ದಿನದಲ್ಲಿ ನಿಮ್ಮ ಶಾಲೆಗೆ ಪ್ರಶಸ್ತಿ ಸಿಗುವಂತೆ ಮಾಡುತ್ತೇನೆ ಎಂದು ಹೇಳಿ ಇದೀಗ ಅನ್ಯ ಶಾಲೆಗೆ ಶಿಫಾರಸು ಮಾಡಿದ್ದೀರಿ. ಇದು ನ್ಯಾಯವೇ ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ಮೊದಲು ಜಿಲ್ಲಾ ಹಂತದಲ್ಲಿ ಆಯ್ಕೆ ಮಾಡಿ ರಾಜ್ಯ ಹಂತದಲ್ಲಿ ಕೈಬಿಟ್ಟಿರುವುದು ಏಕೆ. ಜಿಲ್ಲಾಮಟ್ಟದ ಅಧಿಕಾರಿಗಳನ್ನು ಕೇಳಿದರೆ ತಾಲೂಕಿನಿಂದ ಬಂದಿರುವ ಪಟ್ಟಿ ಎಂದು ಹೇಳುತ್ತಾರೆ. ನೀವು ನಮ್ಮ ಶಾಲೆಗೆ ಅನ್ಯಾಯ ಮಾಡಿದ್ದು ಮೇಲಾಧಿಕಾರಿಗೆ ದೂರು ಸಲ್ಲಿಸುತ್ತೇವೆ ಎಂದರು.

ಪ್ರತಿಭಟನೆಯಲ್ಲಿ ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ್ರ, ಎಸ್‌ಡಿಎಂಸಿ ಅಧ್ಯಕ್ಷ ಶೇಖರಗೌಡ, ಉಪಾಧ್ಯಕ್ಷೆ ರೇಣುಕಾ, ನೀಲನಗೌಡ ಹೊಸ್ಮನಿ, ಹನುಮಪ್ಪ ಕರೆಕುರಿ, ನಿಂಗರಾಜ ಹೊಸಮನಿ, ದುರಗಪ್ಪ ಮಕ್ಕಳ್ಳಿ, ಬಸಣ್ಣ ದಮ್ಮೂರ, ತಿರುಪತಿ ಹರಿಜನ, ಉಮೇಶಗೌಡ, ನಿಂಗನಗೌಡ ದಳಪತಿ, ಗಾಳೇಶ ಮಕ್ಕಳ್ಳಿ, ದೇವಪ್ಪ ಆರೇರ, ಯಂಕಪ್ಪ ಕೋರಿ, ನಿಂಗಪ್ಪ ಪೊಲೀಸ್‌ಪಾಟೀಲ್, ಶರಣಪ್ಪ ಮಂಗಳೂರ, ಶ್ರೀಧರ, ಶರಣಪ್ಪ ಕರೆಕುರಿ, ರಾಮಪ್ಪ, ನೀಲನಗೌಡ ಮಾಲಿಪಾಟೀಲ್, ಬಸವಂತಪ್ಪ ಆರೇರ, ಲಕ್ಷ್ಮಣ್ಣ ಕರೆಕುರಿ ಇತರರಿದ್ದರು.