ಕನ್ನಡಪ್ರಭ ವಾರ್ತೆ ನವದೆಹಲಿ
ದೆಹಲಿಯಲ್ಲಿ ಬೀಡುಬಿಟ್ಟಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಸಹೋದರ, ಮಾಜಿ ಸಂಸದ ಡಿ.ಕೆ.ಸುರೇಶ್ ಅವರೊಂದಿಗೆ ಬುಧವಾರ ಕಾಂಗ್ರೆಸ್ ಹೈಕಮಾಂಡ್ನ ಮುಖಂಡರೊಂದಿಗೆ ಹಲವು ವಿಚಾರಗಳ ಚರ್ಚೆ ನಡೆಸಿದ್ದು, ‘ಕೊಟ್ಟ ಮಾತು ಉಳಿಸಿಕೊಳ್ಳಿ’ ಎಂದು ಮುಖ್ಯಮಂತ್ರಿ ಕುರ್ಚಿಯ ವಿಚಾರವನ್ನು ಪ್ರಸ್ತಾಪಿಸಿದ್ದಾರೆ ಎಂದು ತಿಳಿದುಬಂದಿದೆ.ಅಸ್ಸಾಂ ಚುನಾವಣೆಯ ವಿಚಾರವಾಗಿ ದೆಹಲಿಯಲ್ಲಿರುವ ಡಿಕೆಶಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಏಕಾಂಗಿಯಾಗಿ ಭೇಟಿ ಮಾಡಿದರೆ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರ ಭೇಟಿಗೆ ತಮ್ಮ ಸಹೋದರರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿದ್ದರು. ಇಬ್ಬರ ಭೇಟಿ ವೇಳೆಯೂ ರಾಜ್ಯದ ರಾಜಕೀಯ ಬೆಳವಣಿಗೆ, ಮುಖ್ಯಮಂತ್ರಿ ಕುರ್ಚಿ ಬಗ್ಗೆ ಚರ್ಚೆ ನಡೆಯಿತು ಎನ್ನಲಾಗಿದೆ.
ಇಬ್ಬರೊಂದಿಗೂ ಡಿಕೆಶಿ ಸುಮಾರು ಒಂದು ತಾಸು ಮಾತುಕತೆ ನಡೆಸಿದ್ದು, ಈ ವೇಳೆ ಮುಖ್ಯಮಂತ್ರಿ ಗಾದಿ ವಿಚಾರ ಸೇರಿದಂತೆ ಹಲವು ಸಂಗತಿಗಳು, ರಾಜಕೀಯ ವಿದ್ಯಮಾನಗಳನ್ನು ಪ್ರಸ್ತಾಪಿಸಿದ್ದಾರೆ. ಇನ್ನು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರ ‘ನನ್ನ ತಂದೆಯೇ 5 ವರ್ಷ ಸಿಎಂ. ಹೈಕಮಾಂಡ್ ಓಕೆ ಎಂದಿದೆ’ ಎಂಬ ಹೇಳಿಕೆ, ಸಿದ್ದರಾಮಯ್ಯ ಅವರ ಪರ ಇರುವ ಶಾಸಕರು, ಪರಿಷತ್ ಸದಸ್ಯರ ವಿದೇಶಿ ಪ್ರವಾಸದ ಬಗ್ಗೆ ಪ್ರಸ್ತಾಪವಾಗಿದೆ ಎಂದು ಹೇಳಲಾಗಿದೆ. ಶಾಸಕರು ಗುಂಪು ಗುಂಪಾಗಿ ವಿದೇಶಿ ಪ್ರವಾಸಕ್ಕೆ ಹೋಗುವುದಕ್ಕೆ ಕಡಿವಾಣ ಹಾಕುವಂತೆ ಡಿಕೆ ಸಹೋದರರು ಮನವಿ ಮಾಡಿದ್ದಾರೆ ಎನ್ನಲಾಗಿದೆ.ವಾಗ್ದಾನ ನೆನಪಿಸಿದ ಬ್ರದರ್ಸ್:
ವೇಣುಗೋಪಾಲ್ ಭೇಟಿಯ ವೇಳೆ ವಾಗ್ದಾನ ಮಾಡಿದ್ದನ್ನು ನೆನಪಿಸಿದ ಡಿ.ಕೆ.ಸಹೋದರರು. ಹೈಕಮಾಂಡ್ ಹೇಳಿದಂತೆ ಈ ತನಕ ನಡೆದುಕೊಂಡಿದ್ದೇವೆ. ಎಷ್ಟೇ ಒತ್ತಡ ಬಂದರೂ ತಾಳ್ಮೆ ಕಳೆದುಕೊಂಡಿಲ್ಲ. ಈಗಲಾದರೂ ಕೊಟ್ಟ ವಾಗ್ದಾನ ಉಳಿಸಿಕೊಳ್ಳಿ ಎಂದು ಬಿಡಿಸಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.