ಸಾರಾಂಶ
ನರಗುಂದ ಪಟ್ಟಣದ ಕಸಬಾ ಓಣಿಯ ಶ್ರೀ ಸಾಲಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಭಾರತೀಯ ಕಿಸಾನ್ ಸಂಘದ ಉತ್ತರ ಕರ್ನಾಟಕ ಪ್ರಾಂತ ಜಿಲ್ಲಾ ಘಟಕದಿಂದ 46ನೇ ಸ್ಥಾಪನಾ ದಿನಾಚರಣೆ ನಡೆಯಿತು.
ನರಗುಂದ: ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕ ಔಷಧವನ್ನು ಹೆಚ್ಚಾಗಿ ಬಳಸಿ ನಮ್ಮ ಕೃಷಿಯನ್ನು ನಾವೇ ಹಾಳು ಮಾಡುತ್ತಿದ್ದೇವೆ. ಆರೋಗ್ಯಕರ ಶರೀರ ಹಾಗೂ ಜೀವನ ಹೊಂದುವಲ್ಲಿ ವಿಫಲರಾಗುತ್ತಿದ್ದೇವೆ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಎಸ್.ಎಸ್. ಪಾಟೀಲ ಹೇಳಿದರು.
ಪಟ್ಟಣದ ಕಸಬಾ ಓಣಿಯ ಶ್ರೀ ಸಾಲಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಭಾರತೀಯ ಕಿಸಾನ್ ಸಂಘದ ಉತ್ತರ ಕರ್ನಾಟಕ ಪ್ರಾಂತ ಜಿಲ್ಲಾ ಘಟಕದಿಂದ ಆಚರಿಸಲಾದ 46ನೇ ಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಸಾಯನಿಕ ಕೃಷಿಯಿಂದ ನಾವು ಬಿಪಿ, ಶುಗರ್, ಕ್ಯಾನ್ಸರ್, ಹೃದಯಾಘಾತ, ಅಂಗವಿಕಲತೆಗಳಿಗೆ ಸಿಲುಕಿ ರೋಗಪೀಡಿತರಾಗುತ್ತಿದ್ದೇವೆ. ದೇಶಿಯ ಹಸುಗಳ ಸಾಕಾಣಿಕೆ ಮತ್ತು ಸಾವಯುವ ಕೃಷಿಯಿಂದ ವಿಷಮುಕ್ತ ಆಹಾರವನ್ನು ಬೆಳೆಯಬೇಕಾಗಿದೆ. ಇದರಿಂದ ದೇಶದ ಮಾನವ ಸಂಪನ್ಮೂಲದ ಜತೆಗೆ ಮಾತೃಭೂಮಿ ರಕ್ಷಣೆ ಮಾಡಿದಂತಾಗುತ್ತದೆ ಎಂದರು.ನಾಗೇಶ ಅಪ್ಪೋಜಿ ಮಾತನಾಡಿ, ಸಂಘದ ಪ್ರಚಾರಕ ದತ್ತೋಪಂಥ ಠೇಂಗಡಿ ಅವರಿಂದ ಭಾರತೀಯ ಕಿಸಾನ್ ಸಂಘ ಪ್ರಾರಂಭಗೊಂಡಿದೆ. ರೈತರು ಕೇವಲ ಹೋರಾಟ, ಮುಷ್ಕರ ಮಾಡಿದರಷ್ಟೇ ಸಾಲದು, ಕೃಷಿಯಲ್ಲಿ ಆರೋಗ್ಯಕರ ಉತ್ಪನ್ನಗಳನ್ನು ಪಡೆದು, ಭಾರತೀಯ ಕೃಷಿ ಪದ್ಧತಿ ಉಳಿಸಬೇಕಾಗಿದೆ. ನಮ್ಮೆಲ್ಲರ ಆರೋಗ್ಯ ಉತ್ತಮ ಕೃಷಿಯಲ್ಲಿದೆ ಎಂದು ತಿಳಿಸಲು ರೈತ ಸಮೂಹವನ್ನು ಒಗ್ಗೂಡಿಸಬೇಕಾಗಿದೆ ಎಂದು ಕರೆ ನೀಡಿದರು.
ವಿಠ್ಠಲ ಮುಧೋಳೆ, ಸತೀಶಗೌಡ ಪಾಟೀಲ, ರುದ್ರಗೌಡ ಕೊಪ್ಪನಗೌಡ್ರ, ಮಹಾಂತೇಶಗೌಡ ಪ್ರಭುಗೌಡ್ರ, ಸಂದೀಪಗೌಡ ಪಾಟೀಲ, ಮುದಕಪ್ಪ ಬಾಬಣ್ಣವರ, ಮಲ್ಲೇಶಪ್ಪ ಕುರಹಟ್ಟಿ, ಕಾಶಲಿಂಗ ತಹಶೀಲ್ದಾರ, ಹನುಮಂತಗೌಡ ಕೊಪ್ಪನಗೌಡ್ರ, ಸಂಗಪ್ಪ ಹಂಪಣ್ಣವರ, ಬಸಪ್ಪ ಬಳಕಪ್ಪ, ಬಸಪ್ಪ ದಾಡಿಬಾಯಿ, ಶಿವಲಿಂಗ ಬಾಬಣ್ಣವರ, ಮಲ್ಲನಗೌಡ ಕರಿಗೌಡ್ರ, ವಿರೂಪಾಕ್ಷಪ್ಪ ಬ್ಯಾಡಗಿ, ಬಸಪ್ಪ ಹೊಂಬಳ, ಮುತ್ತಪ್ಪ ಯಲಿಗಾರ ಇದ್ದರು.