ಬ್ಯಾಡಗಿ ತಹಸೀಲ್ದಾರ್ ಕಾರ್ಯಾಲಯದಲ್ಲಿ ರೈತರ ಸಭೆಯಲ್ಲಿ ಕೇಂದ್ರ ಸರ್ಕಾರದ ಖೇತ್ ಬಚಾವೋ ಆಂದೋಲನದ ಅಂಗವಾಗಿ ಆಯೋಜಿಸಲಾದ “ಸಮತೋಲಿತ ರಸಗೊಬ್ಬರ ಬಳಕೆ ಕುರಿತು ಶಾಸಕ ಬಸವರಾಜ ಶಿವಣ್ಣನವರ ಭಿತ್ತಿಪತ್ರ ಬಿಡುಗಡೆ ಮಾಡಿದರು.

ಬ್ಯಾಡಗಿ: ಅಗತ್ಯ ಗೊಬ್ಬರ-ಬೀಜ ದಾಸ್ತಾನು ಮಾಡಿಕೊಂಡು ರೈತರಿಗೆ ನಿಗದಿತ ಬೆಲೆಯಲ್ಲಿ ವಿತರಿಸುವಂತೆ ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.

ತಹಸೀಲ್ದಾರ್ ಕಾರ್ಯಾಲಯದಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಅಧಿಕಾರಿಗಳ ಹಾಗೂ ರೈತ ಮುಖಂಡರ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಮುಂಗಾರು ಮಳೆ ಶುರುವಾಗಿದ್ದು, ಅಗತ್ಯ ಗೊಬ್ಬರ ಬೀಜಗಳ ದಾಸ್ತಾನು ಮಾಡಿಕೊಂಡು ನಿಗದಿತ ಬೆಲೆಯಲ್ಲಿ ಮಾರಾಟ ಮಾಡಬೇಕು. ಕೃಷಿ ಇಲಾಖೆ ಅಧಿಕಾರಿಗಳು ಬಿತ್ತನೆ ಕಾರ್ಯ ಮುಗಿಯುವರೆಗೂ ಪ್ರತಿದಿನ ತಾಲೂಕಿನ ವಿವಿಧ ಬೀಜ ಗೊಬ್ಬರ ಮಾರಾಟ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಕೆಲವರು ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಯಲ್ಲಿ ಗೊಬ್ಬರ ಮಾರಲು ಯತ್ನಿಸಿದಲ್ಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಗೋವಿನ ಜೋಳಕ್ಕೆ ಏಕದರ ಪದ್ಧತಿ ಜಾರಿಗೊಳಿಸುವುದು, ಸಹಾಯಧನ ಬದಲಾಗಿ ಗುಣಮಟ್ಟದ ಬೀಜ ವಿತರಿಸುವ ಕುರಿತು ಮುಂದಿನ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸುವೆ, ಬಫರ್‌ಜೋನ್‌ನಲ್ಲಿರುವ ಗೊಬ್ಬರ ಆಯಾ ತಾಲೂಕಿಗೆ ನಿಗದಿಪಡಿಸಿದಷ್ಟು ಕೃಷಿ ಸಹಾಯಕ ಅಧಿಕಾರಿಗಳು ಪಡೆದು ಕೊಂಡು ತಾಲೂಕಿನಾದ್ಯಂತ ವಿತರಿಸಲು ಸೂಚಿಸಿದರು.

ತಾಲೂಕು ರೈತ ಸಂಘದ ಅಧ್ಯಕ್ಷ ಕಾಡನಗೌಡ್ರ ಮಾತನಾಡಿ, ಬೀಜಗೊಬ್ಬರ ಅಂಗಡಿಯವರು ಮಾರಾಟ ದರದ ನಾಮಫಲಕ ಹಾಕಬೇಕಿದೆ, ಆದರೆ ಕೆಲವರು ನೆಪಮಾತ್ರಕ್ಕೆ ಕಣ್ಣಿಗೆ ಕಾಣದಂತೆ ಸಣ್ಣ ಅಕ್ಷರಗಳಲ್ಲಿ ಬರೆಸುವುದು, ಇನ್ನು ಕೆಲವರು ನಾಮಫಲಕ ಹಾಕಿಲ್ಲ, ಹೀಗಾದ್ರೆ ರೈತರಿಗೆ ನ್ಯಾಯ ಹೇಗೆ ಸಿಗಲಿದೆ, ನಾಮ ಫಲಕದಲ್ಲಿ ಯೂರಿಯಾ 260 ರು. ರೈತರಿಗೆ ಕೊಡುವಾಗ 300 ರು. ಹಗಲು ಮೋಸವಲ್ಲವೆ ಎಂದು ಪ್ರಶ್ನಿಸಿದರು. ಬೀಜ ಗೊಬ್ಬರಗಳ ಮೇಲೆ ಏಕೆ ಕ್ಯೂ ಆರ್ ಕೋಡ್ ಅಳವಡಿಸುತ್ತಿಲ್ಲ. ಕೇಂದ್ರ, ರಾಜ್ಯ ಸರ್ಕಾರಗಳು ಇಂತಹ ವಿಷಯವನ್ನು ಗಂಭೀರವಾಗಿ ಚಿಂತನೆ ನಡೆಸಬೇಕಿದೆ ಎಂದು ಆಗ್ರಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಗೋವಿನ ಜೋಳ ಬೀಜ ಮಾರಾಟದ ಬೆಲೆಯಲ್ಲಿ ಭಾರಿ ಮೋಸವಾಗುತ್ತಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಡಿಕೆಸಿ ಗೋವಿನಜೋಳ ಬೀಜ ಪ್ಯಾಕೆಟ್ ಮೇಲೆ 2400 ಮುದ್ರಿಸಿದ್ದು, 1700 ರು.ಗೆ ರೈತರಿಗೆ ಮಾರುತ್ತಿದ್ದಾರೆ. ಆಗ್ರೋದವರಿಗೆ 1400 ರು.ಗೆ ಸಿಗುತ್ತಿದೆ. ಎನ್‌ಜಿ ಕಂಪನಿ ಬೀಜದ ಮೇಲೆ 2800 ರು. ಮುದ್ರಿಸಿದ್ದು, 1500 ರು.ಗೆ ಮಾರಾಟವಾಗುತ್ತಿದೆ, ಟನ್‌ಗಟ್ಟಲೇ ಮಾರಾಟ ಮಾಡಿದರೆ, ಅವರಿಗೆ ಹೆಚ್ಚು ಡಿಸ್ಕೌಂಟ್, ಫಾರಿನ್ ಟೂರ್, ಕಾರು ಇತ್ಯಾದಿಗಳ ಆಮಿಷ ನೀಡಲಾಗುತ್ತಿದೆ. ಸರ್ಕಾರ ಗೋವಿನ ಜೋಳಕ್ಕೆ ಕಿಲೋಗೆ 20-50 ರು. ಸಹಾಯಧನ ನೀಡುತ್ತಿದೆ. ಇದರ ಬದಲಾಗಿ ನಮಗೆ ಏಕರೂಪ ಬೆಲೆ, ಗುಣಮಟ್ಟದ ಬೀಜ ವಿತರಿಸಿ ಎಂದು ಆಗ್ರಹಿಸಿದರು.

ಈ ವೇಳೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಗಣೇಶ ಕಮ್ಮಾರ, ಸಹಾಯಕ ಅಧಿಕಾರಿ ನಾಗರಾಜ ಬನ್ನಿಹಟ್ಟಿ, ವಿಷಯ ತಜ್ಞ ಡಾ. ರಶ್ಮಿ, ಕೃಷಿ ಪರಿಕರ ಸಂಘದ ಜಿಲ್ಲಾಧ್ಯಕ್ಷ ಜಯಣ್ಣ ಮಲ್ಲಿಗಾರ, ರೈತ ಮುಖಂಡರಾದ ಗಂಗಾಧರ ಎಲಿ, ನಿಂಗಪ್ಪ ಮಾಸಣಗಿ, ಮಂಜು ತೋಟದ, ಬಿ. ಶಿವಪ್ಪ, ಮೌನೇಶ ಕಮ್ಮಾರ ಇತರರಿದ್ದರು.