ಸಾರಾಂಶ
ಅತಿ ಶೀಘ್ರದಲ್ಲೇ 150 ಮಂದಿಗೆ ಸಾಗುವಳಿ ಚೀಟಿ ಮತ್ತು ಈಗಾಗಲೇ ಸಾಗುವಳಿ ಚೀಟಿ ನೀಡಿರುವ 120 ರೈತರಿಗೆ ಪಹಣಿ ಮತ್ತು ಖಾತೆ ನೀಡಲಾಗುವುದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಕನ್ನಡಪ್ರಭವಾರ್ತೆ ಮಧುಗಿರಿ
ಅತಿ ಶೀಘ್ರದಲ್ಲೇ 150 ಮಂದಿಗೆ ಸಾಗುವಳಿ ಚೀಟಿ ಮತ್ತು ಈಗಾಗಲೇ ಸಾಗುವಳಿ ಚೀಟಿ ನೀಡಿರುವ 120 ರೈತರಿಗೆ ಪಹಣಿ ಮತ್ತು ಖಾತೆ ನೀಡಲಾಗುವುದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಬಗರ್ ಹುಕುಂ ಸಕ್ರಮಿಕರಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹತ್ತಾರು ವರ್ಷಗಳಿಂದ ಸಾಗುವಳಿ ಚೀಟಿ ನೀಡಿರುವ ರೈತರಿಗೆ ಖಾತೆ, ಪಹಣಿ ಮಾಡಿಕೊಡಬೇಕೆಂದು ತಹಸೀಲ್ದಾರ್ ಶಿರಿನ್ತಾಜ್ ಅವರಿದಗೆ ಸೂಚಿಸಿದರು.
ಮಧುಗಿರಿಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡನ್ನು ಕರೆಸಿ ಅವರ ಕೈಯಿಂದಲೇ ಸಾಗುವಳಿ ಚೀಟಿ ,ಈಗಾಗಲೇ ಸಾಗುವಳಿ ಚೀಟಿ ನೀಡಿರುವವರಿಗೆ ಖಾತೆ ,ಪಹಣಿ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದರು.ಪ್ರಸ್ತುತ 14 ಜನರಿಗೆ ಸಾಗುವಳಿ ಚೀಟಿ ನೀಡಲು ಸಭೆಯಲ್ಲಿ ಅನುಮೋದಿಸಲಾಗಿದೆ.ಕಂದಾಯ ನಿರೀಕ್ಷಕರು , ಗ್ರಾಮ ಲೆಕ್ಕಿಗರು ಕೇಂದ್ರ ಸ್ಥಾನದಲ್ಲಿದ್ದು ಸಾರ್ವಜನಿಕರಿಗೆ ಸ್ಪಂದಿಸಬೇಕು. ದೂರುಗಳು ಬಾರದಂತೆ ಎಲ್ಲರೂ ಮುತುವರ್ಜಿ ವಹಿಸಿ ಸಾರ್ವಜನಿಕರ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.
ತಾಲೂಕಿನಲ್ಲಿ ಅವಶ್ಯವಿರುವ ಕಡೆ ನಾಡ ಕಚೇರಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಕೊಡಿಸಲಾಗುವುದು ಎಂದು ತಿಸಿದರು. ನೂತನ ತಾಲೂಕು ಕಚೇರಿ ಕಟ್ಟಡ ನಿರ್ಮಾಣಕ್ಕೆ ಜಾಗ ಗುರುತಿಸಿದರೆ ಉತ್ತಮ ಕಟ್ಟಡ ನಿರ್ಮಾಣಕ್ಕೂ ಸರ್ಕಾರದಿಂದ ಹಣ ಮಂಜೂರು ಮಾಡಿಸಲಾಗುವುದು ಎಂದರು.ಸಭೆಯಲ್ಲಿ ಎಸಿ ಗೋಟೂರು ಶಿವಪ್ಪ, ತಹಸೀಲ್ದಾರ್ ಶಿರಿನ್ತಾಜ್, ಬಗರ್ ಹುಕುಂ ಸಮಿತಿ ಸದಸ್ಯ ಎಂ.ಎಸ್.ಮಲ್ಲಿಕಾರ್ಜುನಯ್ಯ, ಸೊಸೈಟಿ ರಾಮಣ್ಣ, ತಾಪಂ ಇಒ ಲಕ್ಷ್ಮಣ್, ಮಧುಸೂದನ್, ವಲಯ ಅರಣ್ಯಾಧಿಕಾರಿ ಸುರೇಶ್, ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರು ಇದ್ದರು.