ಸಾರಾಂಶ
ಮನುಷ್ಯನ ದುರಾಸೆಯಿಂದ ಪ್ರಕೃತಿ ನಾಶವಾಗಿ ಎಷ್ಟೋ ಜೀವಸಂಕುಲ ಅಳಿವಿನಂಚಿಗೆ ಬಂದು ನಿಂತಿವೆ ಎಂದು ಸಾಲುಮರದ ಪೊಲೀಸ್ ಹಾಗೂ ಕವಿ ವೈ. ಬಿ. ಕಾಂತರಾಜ್ ಅಭಿಪ್ರಾಯಪಟ್ಟರು. ಅಂಬೇಡ್ಕರ್ ವಿಚಾರಧಾರೆಗಳು ಸಮಸಮಾಜವನ್ನು ನಿರ್ಮಾಣ ಮಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ವಿದ್ಯಾರ್ಥಿಗಳ ಬದುಕು ಹಸನಾಗಬೇಕಾದರೆ ಗುಣಾತ್ಮಕ ಶಿಕ್ಷಣದ ಅಗತ್ಯವಿದೆ. ಇಂತಹ ಗುಣಾತ್ಮಕ ಶಿಕ್ಷಣ ದೊರೆಯುವುದೇ ಸರ್ಕಾರಿ ಶಾಲೆಗಳಲ್ಲಿ ಎಂದರು.
ಕನ್ನಡಪ್ರಭವಾರ್ತೆ ಆಲೂರು
ಮನುಷ್ಯನ ದುರಾಸೆಯಿಂದ ಪ್ರಕೃತಿ ನಾಶವಾಗಿ ಎಷ್ಟೋ ಜೀವಸಂಕುಲ ಅಳಿವಿನಂಚಿಗೆ ಬಂದು ನಿಂತಿವೆ ಎಂದು ಸಾಲುಮರದ ಪೊಲೀಸ್ ಹಾಗೂ ಕವಿ ವೈ. ಬಿ. ಕಾಂತರಾಜ್ ಅಭಿಪ್ರಾಯಪಟ್ಟರು.ಅವರು ಆಲೂರು ತಾಲೂಕು ತಾಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಿರಿ ಸಮೃದ್ಧಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಮಕ್ಕಳಿಗೆ ಉಚಿತ ಕಲಿಕಾ ಸಲಕರಣೆಗಳ ವಿತರಣಾ ಕಾರ್ಯಕ್ರಮದಲ್ಲಿ ನೋಟ್ಬುಕ್ಸ್, ಪೆನ್, ಸ್ಕೇಲ್ ಹಾಗೂ ಮಾಸ್ಕ್ಗಳನ್ನು ವಿತರಿಸಿ ಮಾತನಾಡಿ, ಪ್ರಕೃತಿ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ನಾನು ಪ್ರಕೃತಿಗಾಗಿ ಏನು ಕೊಡುಗೆ ಕೊಟ್ಟಿದ್ದೇನೆ ಎಂದು ಪ್ರಶ್ನಿಸಿಕೊಳ್ಳಬೇಕು. ಕೇವಲ ಬೂಟಾಟಿಕೆಯ ಪರಿಸರ ದಿನಾಚರಣೆಗಿಂತ ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಅದನ್ನು ಪೋಷಿಸಿದಾಗ ಮಾತ್ರ ಪ್ರಕೃತಿಯ ಸೊಬಗು ಪ್ರಗತಿಕಾಣಲು ಸಾಧ್ಯ. ಬಸವಣ್ಣನವರ ತತ್ವ, ಸಿದ್ಧಾಂತಗಳು, ಸಿದ್ಧರಾಮೇಶ್ವರರ ಕಾಯಕನಿಯಮಗಳು, ಅಂಬೇಡ್ಕರ್ ವಿಚಾರಧಾರೆಗಳು ಸಮಸಮಾಜವನ್ನು ನಿರ್ಮಾಣ ಮಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ವಿದ್ಯಾರ್ಥಿಗಳ ಬದುಕು ಹಸನಾಗಬೇಕಾದರೆ ಗುಣಾತ್ಮಕ ಶಿಕ್ಷಣದ ಅಗತ್ಯವಿದೆ. ಇಂತಹ ಗುಣಾತ್ಮಕ ಶಿಕ್ಷಣ ದೊರೆಯುವುದೇ ಸರ್ಕಾರಿ ಶಾಲೆಗಳಲ್ಲಿ ಎಂದರು.ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಟಿ.ಕೆ.ದಿನೇಶ್ ಮಾತನಾಡಿ, ನಾವು ಓದುವಾಗ ನಮಗೆ ಯಾರೂ ಈ ರೀತಿ ಉಚಿತ ಕಲಿಕಾ ಸಾಮಗ್ರಿಗಳನ್ನು ಒದಗಿಸುತ್ತಿರಲಿಲ್ಲ. ಒಂದು ಪೆನ್ಸಿಲ್ ಖಾಲಿಯಾದಾಗಲೂ ತಂದೆತಾಯಿಂದ ಹೊಸದೊಂದು ಕೊಡಿಸಿಕೊಳ್ಳಲು ಹರಸಾಹಸಪಡುತ್ತಿದ್ದೆವು. ಇಷ್ಟೊಂದು ಉಚಿತ ಸೌಕರ್ಯಗಳು ನಮಗೆ ದೊರೆತತ್ತಿದ್ದರೆ ನಾವೂ ಇನ್ನೂ ಉತ್ತಮ ಜೀವನ ನಡೆಸಬಹುದಿತ್ತು. ಆದ್ದರಿಂದ ಇವತ್ತು ದಾನಿಗಳು ಕೊಟ್ಟ ಕೊಡುಗೆ ಸಾರ್ಥಕತೆ ಕಾಣಬೇಕಾದರೆ ನೀವೆಲ್ಲಾ ಚೆನ್ನಾಗಿ ಓದಿ ಉತ್ತಮ ವಿದ್ಯಾರ್ಥಿಗಳಾದಾಗ ಮಾತ್ರ ಎಂದರು.ಶಾಲಾ ಮುಖ್ಯ ಶಿಕ್ಷಕ ಕೊಟ್ರೇಶ್ ಎಸ್. ಉಪ್ಪಾರ್, ಸಹ ಶಿಕ್ಷಕಿ ವಿ. ರವಿತ, ಅತಿಥಿ ಶಿಕ್ಷಕಿ ರೇಖಾ ಆರ್.ಎಸ್, ಸಿರಿಸಮೃದ್ಧಿ ಚಾರಿಟಬಲ್ ಟ್ರಸ್ಟಿಗಳಾದ ಮಿಥುನ್, ಅರುಣ್ ಕುಮಾರ್ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.