ಸಾರಾಂಶ
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಬಂಟ್ವಾಳ ತಾಲೂಕಿನ ಗಂಜಿಮಠ ತೆಂಕಎಡಪದವು ಗ್ರಾಮದಲ್ಲಿ ನೂರಾರು ಕಾರ್ಯಕರ್ತರ ಜೊತೆ ಸಾಗಿ ಮನೆಮನೆಗೆ ಮಂತ್ರಾಕ್ಷತೆ ವಿತರಿಸಿದರು. ಜ.22ರಂದು ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ ನಡೆಯುತ್ತಿದ್ದರೆ ಇಲ್ಲಿ ಪ್ರತಿ ಮನೆಯಲ್ಲಿ ದೀಪ ಹಚ್ಚುವ ಪುಣ್ಯ ಕಾರ್ಯ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಕನ್ನಡಪ್ರಭ ವಾರ್ತೆ ಬಂಟ್ವಾಳ
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಗಂಜಿಮಠ ತೆಂಕಎಡಪದವು ಗ್ರಾಮದಲ್ಲಿ ನೂರಾರು ಕಾರ್ಯಕರ್ತರ ಜೊತೆ ಸಾಗಿ ಮನೆಮನೆಗೆ ಮಂತ್ರಾಕ್ಷತೆ ಪ್ರಸಾದ ವಿತರಿಸಿದರು.ಈ ಸಂದರ್ಭ ಮಾತನಾಡಿದ ಅವರು, ಅನೇಕ ವರ್ಷಗಳ ಕನಸು ನನಸಾಗುತ್ತಿದೆ. ಹಿರಿಯರ ಹೋರಾಟಗಳಿಗೆ ಗೌರವ ಸಿಕ್ಕ ಕ್ಷಣವಾಗಿದ್ದು, ಪ್ರತಿ ಮನೆಯಲ್ಲಿ ಮಂತ್ರಾಕ್ಷತೆ ಸ್ವೀಕರಿಸಿ ಸಂಭ್ರಮಪಡುತ್ತಿದ್ದಾರೆ. ಇಡೀ ದೇಶವೇ ಸಂಭ್ರಮವನ್ನು ಆಚರಿಸಲು ಎದುರು ನೋಡುತ್ತಿದ್ದು, ನಮ್ಮ ಕಾಲದಲ್ಲಿ ರಾಮನ ಸೇವೆ ಮಾಡಲು ಅವಕಾಶ ಸಿಕ್ಕಿರುವುದು ನಮ್ಮ ಭಾಗ್ಯವಾಗಿದೆ ಎಂದರು.
ಜ.22ರಂದು ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ ನಡೆಯುತ್ತಿದ್ದರೆ ಇಲ್ಲಿ ಪ್ರತಿ ಮನೆಯಲ್ಲಿ ದೀಪ ಹಚ್ಚುವ ಪುಣ್ಯ ಕಾರ್ಯ ನಡೆಯಲಿದೆ. 500 ವರ್ಷಗಳ ಇತಿಹಾಸದ ಹಿನ್ನೆಲೆಯಲ್ಲಿ ಪ್ರತಿ ಮನೆಯಲ್ಲಿ ಕನಿಷ್ಟ 5 ದೀಪವನ್ನು ಉರಿಸಲು ನಿರ್ಧಾರ ಮಾಡಲಾಗಿದೆ ಎಂದರು.ಅಯೋಧ್ಯೆಯಲ್ಲಿ ಜ.22 ರಂದು 12.59ಕ್ಕೆ ಶುಭಮುಹೂರ್ತದಲ್ಲಿ ಪ್ರತಿಷ್ಟಾಪನೆ ನಡೆಯುತ್ತಿದ್ದರೆ ತಾಲೂಕಿನ ಪ್ರತಿ ಗ್ರಾಮದ ಕೇಂದ್ರಗಳಲ್ಲಿ ಸಂತಸದ ಕ್ಷಣಗಳನ್ನು ಕಣ್ತುಂಬಿಕೊಳ್ಳುವ ಉದ್ದೇಶದಿಂದ ಎಲ್.ಇ.ಡಿ. ಅಳವಡಿಸಿ ನೇರ ವೀಕ್ಷಣೆಗೆ ಅವಕಾಶ ಮಾಡಲಾಗುತ್ತದೆ ಎಂದು ಅಯೋಧ್ಯೆ ಪ್ರತಿಷ್ಟಾಪನೆ ಸಂಬಂಧಿಸಿದ ಸಮಿತಿಯ ಗ್ರಾಮಾಂತರ ಜಿಲ್ಲಾ ಸಹಸಂಚಾಲಕ ಪ್ರಸಾದ್ ಕುಮಾರ್ ತಿಳಿಸಿದ್ದಾರೆ.ಆ ದಿನ ಬೆಳಗ್ಗೆ ಗ್ರಾಮದ ದೇವಸ್ಥಾನಗಳಲ್ಲಿ ಸೇರುವುದು ಮತ್ತು ರಾಮತಾರಕ ಜಪಯಜ್ಞದಲ್ಲಿ ಪಾಲ್ಗೊಳ್ಳುವುದು. ಆ ಬಳಿಕ ಐದು ನಿಮಿಷ ಪ್ರಮುಖರೋರ್ವರು ವಿಚಾರ ಮಂಡನೆ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.