ಸಾರಾಂಶ
ಬಿಹಾರದ ಮಾಜಿ ಮುಖ್ಯಮಂತ್ರಿ ದಿವಂಗತ ಕರ್ಪೂರಿ ಠಾಕೂರ್ ಅವರ ಸೇವೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ಘೋಷಣೆ ಮಾಡಿರುವುದು ಸವಿತ ಸಮಾಜ ಹೆಮ್ಮೆ ಪಡುವ ವಿಷಯ ಎಂದು ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಎ. ಲೋಕೇಶ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ಬಿಹಾರದ ಮಾಜಿ ಮುಖ್ಯಮಂತ್ರಿ ದಿವಂಗತ ಕರ್ಪೂರಿ ಠಾಕೂರ್ ಅವರ ಸೇವೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ಘೋಷಣೆ ಮಾಡಿರುವುದು ಸವಿತ ಸಮಾಜ ಹೆಮ್ಮೆ ಪಡುವ ವಿಷಯ ಎಂದು ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಎ. ಲೋಕೇಶ್ ತಿಳಿಸಿದರು.ನಗರದ ಕೆ.ಆರ್. ಬಡಾವಣೆಯ ಕರ್ಪೂರಿ ಠಾಕೂರ್ಗೆ ಭಾರತ ರತ್ನ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ತಾಲೂಕು ಸವಿತಾ ಸಮಾಜದ ವತಿಯಿಂದ ಯಶಸ್ವಿನಿ ವೃದ್ಧಾಶ್ರಮ ಹಾಗೂ ಕೋಟೆಯಲ್ಲಿರುವ ಶಾರದಾ ವೃದ್ಧಾಶ್ರಮಗಳಲ್ಲಿರುವ ಹಿರಿಯರಿಗೆ ಕ್ಷೌರ ಸೇವೆ ಮಾಡಿ ಹಾಲು, ಬ್ರೆಡ್, ಹಣ್ಣುಗಳನ್ನು ವಿತರಿಸಿ ಮಾತನಾಡಿದರು.
ಬಿಹಾರ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಗಳಾಗಿ ಹೃದಯ ಸ್ಪರ್ಶಿ ಜನಸೇವೆಕರೆನಿಸಿಕೊಂಡಿದ್ದ ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿಯನ್ನು ಕೊಟ್ಟಿರುವುದು ನಮ್ಮ ಸಮಾಜ ಖುಷಿ ಪಡುವ ವಿಷಯ. ಸರಳ ಸಜ್ಜನ ರಾಜಕಾರಣಿ, ಸ್ವಾತಂತ್ರ್ಯ ಹೋರಾಟಗಾರ, ಹಿಂದುಳಿದ ವರ್ಗಗಳ ಮುಂಚೂಣಿ ನಾಯಕರಾದ ಠಾಕೂರ್ ದೇಶಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದರು ಎಂದರು.ಸಮಾಜದ ಮುಖಂಡ ಟಿ.ಸಿ. ಗೋವಿಂದರಾಜು ಮಾತನಾಡಿ, ಠಾಕೂರ್ ಅವರು ಮುಖ್ಯಮಂತ್ರಿಗಳಾಗಿದ್ದಾಗ ಭೂಸುಧಾರಣೆ, ಮೀಸಲಾತಿ, ಅಂತರ್ ಜಾತಿ ವಿವಾಹಕ್ಕೆ ಪ್ರೋತ್ಸಾಹ, ಮದ್ಯಪಾನ ನಿಷೇಧ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಸದಸ್ಯ ಟಿ.ಸಿ. ಗಂಗಾಧರ್, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್, ಮುಖಂಡರಾದ ಶ್ರೀಧರಬಾಬು, ಟಿ.ಸಿ. ಚಂದ್ರಶೇಖರ್, ಟಿ.ಜಿ. ರಾಮಚಂದ್ರ, ಟಿ.ಜೆ. ವರದರಾಜು, ರಾಮು, ರಮೇಶ್, ಆನಂದ್, ನೊಣವಿನಕೆರೆ ಕಿರಣ್ ಮತ್ತಿತರರಿದ್ದರು.