ಸಾರಾಂಶ
ಕುಕನೂರು: ತಾಲೂಕಿನ ಚಂಡೂರು ಗ್ರಾಮದಲ್ಲಿ ಆಶ್ರಯ ಯೋಜನೆಯ ಮನೆ ಹಂಚಿಕೆಯಲ್ಲಿ ಗ್ರಾಪಂ ಅಧ್ಯಕ್ಷರು, ಪಿಡಿಒ ಸೇರಿದಂತೆ ಕೆಲವು ಸದಸ್ಯರು ಸಾರ್ವಜನಿಕರಿಂದ ಹಣ ಪಡೆದು ಭ್ರಷ್ಟಾಚಾರ ಮಾಡಿದ್ದಾರೆ ಎಂದು ಗ್ರಾಪಂ ಸದಸ್ಯೆ ಲಕ್ಷ್ಮವ್ವ ಕುರಿ ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಂಡೂರು ಗ್ರಾಮದ ಸರ್ವೆ ನಂ. ೬/೬ ಹಾಗೂ ೬/೭ರ ಪೈಕಿ 3.16 ಎಕರೆ ಆಶ್ರಯ ನಿವೇಶನಕ್ಕೆ ಮಂಜೂರಾಗಿದೆ. ಸರ್ಕಾರದ ನಿಯಮನುಸಾರ ಈ ಹಿಂದೆ ಆನ್ಲೈನ್ನಲ್ಲಿ ನಿವೇಶನ ರಹಿತರ ಫಲಾನುಭವಿಗಳನ್ನು ದಾಖಲಿಸಲಾಗಿತ್ತು. ಹೊಸದಾಗಿ ಸೇರ್ಪಡೆ ಮಾಡಲು ಸಾರ್ವಜನಿಕರಿಂದ ಪಿಡಿಒ ಯಾವುದೇ ನೋಟಿಸ್ ಹಚ್ಚದೇ, ಡಂಗೂರ ಹಾಕಿಸಿದೇ, ಮಾಹಿತಿ ನೀಡದೆ ಅಧ್ಯಕ್ಷರು ಮತ್ತು ಸದಸ್ಯರು ತಮಗೆ ಬೇಕಾದ ಫಲಾನುಭವಿಗಳನ್ನು ಒಬ್ಬರಿಗೆ ₹ 20000ದಂತೆ ೯೦ಕ್ಕೂ ಹೆಚ್ಚು ಜನರಿಂದ ಹಣ ಪಡೆದುಕೊಂಡಿದ್ದಾರೆ ಎಂದು ದೂರಿದರು.
ಹೊಸ ಪಟ್ಟಿಯನ್ನು ಗ್ರಾಮಸಭೆಯಲ್ಲಿ ಮಂಡಿಸದೆ ನಿಜವಾದ ಫಲಾನುಭವಿಗಳಿಗೆ ಅನ್ಯಾಯ ಮಾಡಿದ್ದಾರೆ. ಈ ಕುರಿತು ಬಗ್ಗೆ ತಾಪಂ ಇಒ, ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾಧಿಕಾರಿಗೆ ದೂರು ನೀಡಿದರೂ, ನ್ಯಾಯ ಸಿಗುತ್ತಿಲ್ಲ. ಚಂಡೂರು ಗ್ರಾಮದ ಪ್ರಭಾವಿ ಬ್ಲಾಕ್ ಕಾಂಗ್ರೆಸ್ನ ಅಧ್ಯಕ್ಷರ ಕುಮ್ಮಕ್ಕಿನಿಂದ ಈ ರೀತಿಯಾಗಿ ನಡೆಯುತ್ತಿದೆ. ಗ್ರಾಪಂನಿಂದ ಹೊಸದಾಗಿ ಗ್ರಾಮಸಭೆ ನಡೆಸಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಇಲ್ಲದಿದ್ದರೆ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ಗ್ರಾಮಸ್ಥರಾದ ನಿಂಗಪ್ಪ ಕುರಿ, ರವೀಂದ್ರಗೌಡ ಪಾಟೀಲ್, ಶರಣಪ್ಪ ಅರಕೇರಿ, ಬಸಯ್ಯ ಸಂಕಿನ್, ಹನುಮಪ್ಪ ಜ್ಯೋತಿ, ದ್ಯಾಮವ್ವ ಹಂದ್ರಾಳ, ಮುತ್ತವ್ವ ತಳಬಾಳ, ಮಾರುತೇಪ್ಪ ತಳಬಾಳ, ಪ್ರಕಾಶಯ್ಯ ಸಂಕಿನ ಮಾಜಿ ಸದ್ಯ, ಮಂಜಯ್ಯ ಸೇರಿದಂತೆ ಗ್ರಾಮಸ್ಥರು ಇದ್ದರು.