ಸಾರಾಂಶ
ಎಎಲ್ಎನ್ ರಾವ್. ಆಯುರ್ವೇದ ಕಾಲೇಜಿನ ಕಾರ್ಯಕ್ಕೆ ಸಾರ್ವಜನಿಕರ ಪ್ರಶಂಸೆ.
ಕನ್ನಡಪ್ರಭ ವಾರ್ತೆ, ಕೊಪ್ಪಗುರುವಾರ ಆಟಿ ಅಮವಾಸ್ಯೆ ಪ್ರಯುಕ್ತ ಕೊಪ್ಪದ ಎ.ಎಲ್.ಎನ್.ರಾವ್. ಆಯುರ್ವೇದ ಕಾಲೇಜಿನ ದ್ರವ್ಯಗುಣ, ರಸಶಾಸ್ತ್ರ ವಿಭಾಗದಿಂದ ಸಾರ್ವಜನಿಕರಿಗೆ ಸಾಂಪ್ರದಾಯಿಕವಾಗಿ ತಯಾರಿಸಿದ ಔಷಧೀಯ ಗುಣ ಹೊಂದಿದ ಆಟಿ ಕಷಾಯವನ್ನು ಉಚಿತವಾಗಿ ವಿತರಿಸಲಾಯಿತು. ಅಂದೇ ಬೆಳಿಗ್ಗೆ ಕಾಲೇಜಿನ ಫಾರ್ಮಸಿಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ವಿವಿಧ ಗುಣವುಳ್ಳ ಹಾಲೆಮರದ ಚಕ್ಕೆ, ಶುಂಠಿ, ಕಾಳಮೆಣಸು, ಬೆಳ್ಳುಳ್ಳಿ ಮುಂತಾದ ಉಪಯುಕ್ತ ಪದಾರ್ಥ ಉಪಯೋಗಿಸಿ ಸುಮಾರು 2 ಗಂಟೆಗಳ ಒಳಗೆ ತಯಾರಿಸಿ.ಬೆಳಿಗ್ಗೆ ಆರು ಗಂಟೆಯಿಂದ ಎಂಟು ಗಂಟೆವರೆಗೆ ಸಾರ್ವಜನಿಕರಿಗೆ ಉಚಿತ ಬಿಪಿ ತಪಾಸಣೆ ಸಹ ನಡೆಸಿ ಕಷಾಯ ವಿತರಿಸಲಾಯಿತು. ಬೆಳಿಗ್ಗೆಯಿಂದಲೇ ಕಷಾಯ ಸೇವಿಸಲು ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತಿದ್ದು ವಿಶೇಷವಾಗಿತ್ತು. ಕಾಲೇಜಿನ ಪ್ರಾಂಶು ಪಾಲರಾದ ಡಾ: ಸಂಜಯ ಕೆ.ಎಸ್. ಅವರ ಮಾರ್ಗದರ್ಶನದಂತೆ ದ್ರವ್ಯಗುಣ ವಿಭಾಗದ ಡಾ ಪಂಕಜ್ ಮತ್ತು ಡಾ ಕೃಷ್ಣ ಕಿಶೋರ್ ಹಾಗೂ ತಂಡ ಮತ್ತು ರಸಶಾಸ್ರ್ರ ವಿಭಾಗದ ಡಾ ಡಿ.ಕೆ.ಮಿಶ್ರ ಹಾಗೂ ಕಾಲೇಜಿನ ಪಿ.ಜಿ. ವಿಭಾಗದ ವೈಧ್ಯಕೀಯ ವಿಧ್ಯಾರ್ಥಿಗಳು ಹಾಗೂ ಇತರ ವಿಧ್ಯಾರ್ಥಿಗಳು ಬಹಳ ಅಚ್ಚು ಕಟ್ಟಾಗಿ ಕಷಾಯ ತಯಾರಿಸಿದ್ದರು. ಪ್ರಥಮ ಬಾರಿಗೆ ಇಂತಹ ಸಾಂಪ್ರದಾಯಿಕ ಶೈಲಿಯ ಆಚರಣೆಯ ಕಷಾಯ ವಿತರಣೆಗೆ ಸಾರ್ವಜನಿಕರಿಂದ ಉತ್ತಮ ಪ್ರಶಂಸೆ ವ್ಯಕ್ತವಾಯಿತು ಮತ್ತು ಸುಮಾರು ೩೦೦ ಕ್ಕೂ ಅಧಿಕ ಜನರು ಬಂದು ಇದರ ಸದುಪಯೋಗ ಪಡೆದುಕೊಂಡರು.ಇಂತಹ ಒಂದು ವ್ಯವಸ್ಥೆ ಕಲ್ಪಿಸಿದ ವ್ಯವಸ್ಥಾಪಕ ಆರೂರು ರಮೇಶ್ ರಾವ್ ಮತ್ತು ಟ್ರಸ್ಟಿ ನಮಿತಾ ರಾವ್ ಅವರಿಗೆ ಸಾರ್ವಜನಿಕರು ಕೃತಜ್ಞತೆ ಸಲ್ಲಿಸಿದ್ದಾರೆ.