ಸಾರಾಂಶ
ಕ್ವಿಟ್ ಇಂಡಿಯಾ ದಿನಾಚರಣೆ ಅಂಗವಾಗಿ ಶನಿವಾರ ಜಿಲ್ಲಾಡಳಿತ ವತಿಯಿಂದ ಹಿರಿಯ ಸ್ವಾತಂತ್ರ್ಯ ಯೋಧ ಮಟ್ಟಾರು ವಿಠಲ ಕಿಣಿ ಅವರಿಗೆ ಗೌರವ ಸಲ್ಲಿಸಲಾಯಿತು. ನಗರದ ಕುದ್ರೋಳಿ ಅಳಕೆಯಲ್ಲಿರುವ ವಿಠಲ ಕಿಣಿ ಅವರ ಮನೆಗೆ ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಮತ್ತು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಭೇಟಿ ನೀಡಿ ಸನ್ಮಾನಿಸಿ, ಗೌರವಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಕ್ವಿಟ್ ಇಂಡಿಯಾ ದಿನಾಚರಣೆ ಅಂಗವಾಗಿ ಶನಿವಾರ ಜಿಲ್ಲಾಡಳಿತ ವತಿಯಿಂದ ಹಿರಿಯ ಸ್ವಾತಂತ್ರ್ಯ ಯೋಧ ಮಟ್ಟಾರು ವಿಠಲ ಕಿಣಿ ಅವರಿಗೆ ಗೌರವ ಸಲ್ಲಿಸಲಾಯಿತು. ನಗರದ ಕುದ್ರೋಳಿ ಅಳಕೆಯಲ್ಲಿರುವ ವಿಠಲ ಕಿಣಿ ಅವರ ಮನೆಗೆ ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಮತ್ತು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಭೇಟಿ ನೀಡಿ ಸನ್ಮಾನಿಸಿ, ಗೌರವಿಸಿದರು.ವಿಠಲ ಕಿಣಿ ಅವರೊಂದಿಗೆ ಸಮಾಲೋಚಿಸಿದ ಅವರು, ಸ್ವಾತಂತ್ರ್ಯ ಹೋರಾಟದ ಮಾಹಿತಿ ಪಡೆದರು.
ಈ ಸಂದರ್ಭ ಮಂಗಳೂರು ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ, ತಹಸೀಲ್ದಾರ್ ರಮೇಶ್ ಬಾಬು, ಕಸಬಾ ಕಂದಾಯ ನಿರೀಕ್ಷಕ ಚೇತನ್ ಮತ್ತಿತರರು ಇದ್ದರು.ಸ್ವಾತಂತ್ರ್ಯ ಹೋರಾಟಗಾರ ಮಟ್ಟಾರ ವಿಟ್ಠಲ ಕಿಣಿ ಅವರು ಜನಿಸಿದ್ದು 1929 ಏಪ್ರಿಲ್ 17ರಂದು. 1942ರಲ್ಲಿ ಭಾರತ ಛೋಡೊ ಚಳವಳಿ ದೇಶಾದ್ಯಂತ ನಡೆದಾಗ ಕಾಸರಗೋಡಿನಲ್ಲಿ ವಿದ್ಯಾರ್ಥಿಗಳ ಜತೆಗೂಡಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.
1954ರಲ್ಲಿ ಸರ್ವ ಪಕ್ಷ ಗೋವಾ ವಿಮೋಚನಾ ಸಮಿತಿಯನ್ನು ಪ್ರಾರಂಭಿಸಿ ಅದರ ಕೋಶಾಧ್ಯಕ್ಷರಾಗಿ ಕಾರ್ಯ ನಿರ್ವಹಣೆ ಮಾಡಿದ್ದ ಕಿಣಿ ಅವರು, 1955ರ ಆ.5ರಂದು ಗೋವಾ ವಿಮೋಚನೆಗಾಗಿ ಉಡುಪಿಯ ಮಾಜಿ ಪುರಸಭಾಧ್ಯಕ್ಷರು, ಸ್ವಾತಂತ್ರ್ಯ ಹೋರಾಟಗಾರರೂ ಆದ ದಿ. ಯು.ಎಸ್. ನಾಯಕರ ನೇತೃತ್ವದಲ್ಲಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಗೋವಾ ಪ್ರವೇಶ ಮಾಡಿ ಬಂಧನಕ್ಕೆ ಒಳಗಾಗಿದ್ದರು.