ಸಾರಾಂಶ
ಪೂರ್ವಭಾವಿ ಸಿದ್ಧತಾ ಸಭೆ, ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಕುಂದು ಕೊರತೆ ಸಭೆ
ಕನ್ನಡಪ್ರಭ ವಾರ್ತೆ ಹೊಸಪೇಟೆಹಸಿರು ಕ್ರಾಂತಿ ಹರಿಕಾರ, ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಂ ರವರ ಜನ್ಮ ದಿನವನ್ನು ಏ. 5 ರಂದು ನಗರದಲ್ಲಿರುವ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಸರಳವಾಗಿ ಆಚರಿಸಿ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನ ಏ. 14ರಂದು ಇಬ್ಬರು ಮಹನೀಯರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ಏರ್ಪಡಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನ್ ರಾಂ ಅವರ ಜಯಂತಿಯ ಪೂರ್ವಭಾವಿ ಸಿದ್ಧತಾ ಸಭೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಳೆದೆರಡು ವರ್ಷಗಳಿಂದ ಜಯಂತಿಯನ್ನು ಸರಳವಾಗಿ ಆಚರಿಸಲಾಗಿದೆ. ಈ ಬಾರಿ ಜಿಲ್ಲಾಡಳಿತ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಅದ್ಧೂರಿ ಆಚರಣೆಗೆ ಸಿದ್ಧವಿದೆ. ಏ.5ರಂದು ನಗರದ ಡಾ.ಬಾಬು ಜಗಜೀವನರಾಂ ವೃತ್ತದಲ್ಲಿ ಸಾಂಕೇತಿಕವಾಗಿ ಆಚರಣೆ ಮಾಡಿ. ಏ.14ರಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ರವರ ಜಯಂತಿ ಜತೆಗೆ ಬಾಬುಜೀ ಅವರ ಜಯಂತಿಯನ್ನು ಆಚರಿಸೋಣ. ಇಬ್ಬರು ಮಹನೀಯರ ಭಾವಚಿತ್ರಗಳನ್ನು ನಗರದ ಜಂಬುನಾಥ ದೇವಸ್ಥಾನ ರಸ್ತೆಯ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜೈ ಭೀಮ್ ವೃತ್ತದವರಗೆ ವಿವಿಧ ವಾದ್ಯ, ಕಲಾ ತಂಡಗಳೊಂದಿಗೆ ಭವ್ಯ ಮೆರವಣಿಗೆ ನಡೆಸಲಾಗುವುದು ಎಂದರು.ಜಯಂತಿ ದಿನ ಮಹನೀಯರ ಕುರಿತು ಉಪನ್ಯಾಸ, ವಿಚಾರ ಸಂಕಿರಣಗಳನ್ನು ನಡೆಸುವ ಮೂಲಕ ಅವರ ತತ್ವಾದರ್ಶ ಮತ್ತು ಸಿದ್ದಾಂತಗಳನ್ನು ಯುವಜನತೆಗೆ ಜಾಗೃತಿ ಮೂಡಿಸುವಂತೆ ಆಯೋಜಿಸಬೇಕು. ವೇದಿಕೆ ಕಾರ್ಯಕ್ರಮದಲ್ಲಿ ಪ್ರಗತಿಪರ ಸ್ವಾಮೀಜಿಗಳು, ದಲಿತ ಸಾಹಿತಿಗಳು, ಪ್ರಗತಿ ಪರ ಚಿಂತಕರನ್ನು ಆಹ್ವಾನಿಸಿ ಉಪನ್ಯಾಸ ನಡೆಸಬೇಕು. ದಲಿತ ಸಂಘಟನೆಗಳ ಹೋರಾಟಗಾರರು, ಅಪ್ರತಿಮ ಸಾಧಕರು, ಕಲಾವಿದರು, ಸಮಾಜ ಸೇವಕರನ್ನು ಗುರುತಿಸಿ ಜಿಲ್ಲಾಡಳಿತದಿಂದ ಗೌರವಿಸಿ ಸನ್ಮಾನಿಸಬೇಕು. ಏ.14ರಂದು ಶಾಲಾ, ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಓದುವಂತೆ, ಸಂವಿಧಾನದ ಕೈಪಿಡಿ ಹಾಗೂ ಇಬ್ಬರು ಮಹನೀಯರ ಬದುಕು ಮತ್ತು ಸಾಧನೆಯ ಬಗ್ಗೆ ಕಿರುಪುಸ್ತಕಗಳನ್ನು ಮುದ್ರಿಸಿ ಉಚಿವಾಗಿ ವಿತರಿಸುವಂತೆ ವಿವಿಧ ಸಂಘಟನೆಗಳ ಮುಖಂಡರು ಸಲಹೆ ನೀಡಿದರು.ಎಸ್ಸಿ, ಎಸ್ಟಿ ಕುಂದು ಕೊರತೆ ಸಭೆ:
ನಗರದ ಬಳ್ಳಾರಿ ರಸ್ತೆಯಲ್ಲಿರುವ ದಲಿತರ ರುದ್ರಭೂಮಿ ಅಭಿವೃದ್ಧಿ, ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಈಗಾಗಲೇ ಶೇ.30ರಷ್ಟು ಭೂಮಿ ಒತ್ತುವರಿಯಾಗಿದೆ. ತೆರವಿಗೆ ಜಿಲ್ಲಾಡಳಿತ ಕ್ರಮವಹಿಸಬೇಕು. ಅಭಿವೃದ್ಧಿ ಕೊರತೆಯಿಂದ ರುದ್ರಭೂಮಿ ಜಾಗದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಬಯಲು ಶೌಚ ಪ್ರದೇಶವಾಗಿದೆ ಎಂದು ಮುಖಂಡರು ಸಭೆಯ ಗಮನ ಸೆಳೆದರು. ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಕೇವಲ 15 ದಿನಗಳಲ್ಲಿ ರುದ್ರಭೂಮಿ ಜಾಗವನ್ನು ಪರಿಶೀಲಿಸಿ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.ನಗರದಲ್ಲಿ ಸುಮಾರು 8 ಸಾವಿರಕ್ಕೂ ಹೆಚ್ಚು ಕುಟುಂಬಗಳು ನಿವೇಶನ ರಹಿತರು ಇದ್ದಾರೆ. ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ನಗರಸಭೆಯಿಂದ ಸರ್ವೇ ನಡೆಸಿ ಸರ್ಕಾರಿ ನಿವೇಶನದಲ್ಲಿ ಸೂಕ್ತ ವಸತಿ ಸೌಲಭ್ಯಗಳನ್ನು ಪ್ರತಿ ಅಂಬೇಡ್ಕರ್ ಜಯಂತಿಗೆ ಹಂತ ಹಂತವಾಗಿ ವಿತರಿಸಬೇಕು. ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಹೆಚ್ಚಿಸಬೇಕು. ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ನಿಗದಿತ ವೇಳೆ ವಿದ್ಯಾರ್ಥಿ ವೇತನ ಪಾವತಿಸುತ್ತಿಲ್ಲ. ವಿಶೇಷವಾಗಿ ದೇವದಾಸಿ ಮಕ್ಕಳಿಗೆ ಶೈಕ್ಷಣಿಕ ತರಬೇತಿ, ಐಎಎಸ್, ಕೆಎಎಸ್ ಸೇರಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡಲು ಮುಂದಾಗಬೇಕು. ನಗರದಲ್ಲಿನ ಸಮಾಜ ಕಲ್ಯಾಣ ಇಲಾಖೆ ಡಾ. ಬಾಬು ಜಗಜೀವನರಾಂ ಭವನದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ದಲಿತ ಸಂಘಟನೆಗಳ ಉಪಯೋಗಕ್ಕಾಗಿ ಸ್ಥಳಾಂತರಿಸುವಂತೆ ಅನೇಕ ಬಾರಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಶೀಘ್ರವೇ ಖಾಲಿ ಮಾಡಿ ಸಂಘಟನೆಗಳ ಬಳಕೆಗೆ ನೀಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆ ಕಚೇರಿ ಸ್ಥಳಾಂತರಕ್ಕೆ ಪರಿಶೀಲನೆ ನಡೆಸಲಾಗುವುದು. ಈಗಾಗಲೇ ನಗರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಭೂಮಿ ಖರೀದಿಸಲಾಗಿದೆ. ಶೀಘ್ರವೇ ಭವನ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು ಎಂದು ಭರವಸೆ ನೀಡಿದರು.ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ಎಸ್ಪಿ ಬಿ.ಎಲ್. ಶ್ರೀಹರಿಬಾಬು, ಎಎಸ್ಪಿ ಸಲೀಂ ಪಾಷಾ, ಸಹಾಯಕ ಆಯುಕ್ತ ವಿವೇಕಾನಂದ, ಮುಖಂಡರಾದ ಎಂ.ಸಿ. ವೀರಸ್ವಾಮಿ, ಕೆ.ಪಿ. ಉಮಾಪತಿ, ದುರುಗಪ್ಪ ಪೂಜಾರಿ, ಜಂಬಯ್ಯ ನಾಯಕ, ಬಣ್ಣದಮನೆ ಸೋಮಶೇಖರ, ಸಣ್ಣಮಾರೆಪ್ಪ, ಮಾರೆಣ್ಣ, ರಾಮಕೃಷ್ಣ, ಎಚ್. ಶೇಷು, ಭರತ್ ಮತ್ತಿತರರಿದ್ದರು.