ಮುಂಡರಗಿ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಆಶ್ರಯದಲ್ಲಿ ಆ. 1ರಂದು ಗದಗ ತಾಲೂಕಿನ ಹೊಸಳ್ಳಿ ಗ್ರಾಮದ ಬೂದೀಶ್ವರ ಮಠದ ಆವರಣದಲ್ಲಿ ನಡೆಯುವ ಜಿಲ್ಲಾ ದ್ವಿತೀಯ ಮಕ್ಕಳ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ನಿಂಗು ಸೊಲಗಿ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎ. ಬಳಿಗೇರ ಹೇಳಿದರು.ಭಾನುವಾರ ಸಂಜೆ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಪದಾಧಿಕಾರಿಗಳ ನಿಯೋಗವು ಮುಂಡರಗಿ ಡಾ. ನಿಂಗು ಸೊಲಗಿ ಅವರ ನಿವಾಸಕ್ಕೆ ಆಗಮಿಸಿ ಸಮ್ಮೇಳನದ ಸರ್ವಾಧ್ಯಕ್ಷತೆಯ ಅಧಿಕೃತ ಆಹ್ವಾನ ಪತ್ರ ನೀಡಿ ಗೌರವಿಸಿ ಮಾತನಾಡಿದರು.
ಡಾ. ನಿಂಗು ಸೊಲಗಿ ಶಿಕ್ಷಕ, ಸಾಹಿತಿ, ಸಂಶೋಧಕರಾಗಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಮೂರು ದಶಕಗಳಿಗೂ ಹೆಚ್ಚು ಕಾಲ ಅಪಾರ ಸೇವೆ ಸಲ್ಲಿಸಿದ್ದಾರೆ. ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಕೃಷಿ ಮಾಡಿರುವ ಇವರು, 10ಕ್ಕೂ ಹೆಚ್ಚು ಕವನ ಸಂಕಲನಗಳು ಹಾಗೂ 10ಕ್ಕೂ ಹೆಚ್ಚು ಸಂಪಾದಿತ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ ಎಂದರು.ಮಕ್ಕಳ ರಂಗಭೂಮಿ ಕುರಿತು ಸಂಶೋಧನೆ ನಡೆಸಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪದವಿ ಪಡೆದಿದ್ದಾರೆ. 2014ನೇ ಸಾಲಿನಲ್ಲಿ ಇವರ ಸೇವೆ ಗುರುತಿಸಿ ಕೇಂದ್ರ ಸರ್ಕಾರ ''''''''ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ'''''''' ನೀಡಿ ಗೌರವಿಸಿದೆ. ಇವರ ಬಂಡೆದ್ದ ಮುಂಡರಗಿ ಭೀಮರಾಯ ಐತಿಹಾಸಿಕ ನಾಟಕ ಆಂಗ್ಲ ಮಾಧ್ಯಮದ 7ನೇ ತರಗತಿಯ ದ್ವಿತೀಯ ಭಾಷೆ ಕನ್ನಡ ಪಠ್ಯಪುಸ್ತಕದಲ್ಲಿ ಸೇರ್ಪಡೆಯಾಗಿದೆ ಎಂದರು.ಆಹ್ವಾನ ಸ್ವೀಕರಿಸಿ ಸಾಹಿತಿ ಡಾ. ನಿಂಗು ಸೊಲಗಿ ಮಾತನಾಡಿ, ನಾನು ಕಳೆದ 33 ವರ್ಷಗಳಿಂದ ಮುಂಡರಗಿಯಲ್ಲಿ ವಾಸಿಸುತ್ತಿದ್ದು, ಇಲ್ಲಿನ ಜನರ ಪ್ರೀತಿ, ಗೌರವ ಮತ್ತು ಬೆಂಬಲ ತಮ್ಮ ಸಾಹಿತ್ಯ ಹಾಗೂ ಬರವಣಿಗೆಗೆ ದೊಡ್ಡ ಸ್ಫೂರ್ತಿಯಾಗಿದೆ. ಸಾಹಿತ್ಯ ವಲಯ ತಮ್ಮ ಮೇಲಿಟ್ಟಿರುವ ಪ್ರೀತಿ, ವಿಶ್ವಾಸವೇ ನನ್ನನ್ನು ಈ ಸ್ಥಾನಕ್ಕೆ(ಸಮ್ಮೇಳನಾಧ್ಯಕ್ಷರಾಗಿ) ಆಯ್ಕೆ ಮಾಡಲು ಕಾರಣವಾಗಿದೆ ಎಂದರು.ಶಿರಹಟ್ಟಿ ತಾಲೂಕು ಶಸಾಪ ಅಧ್ಯಕ್ಷ ಎಂ.ಕೆ. ಲಮಾಣಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಬೂದಪ್ಪ ಅಂಗಡಿ, ಕೋಶಾಧ್ಯಕ್ಷ ಡಿ.ಎಸ್. ಬಾಪುರೆ, ಗಜೇಂದ್ರಗಡ ಶಸಾಪ ಅಧ್ಯಕ್ಷ ಬಸವರಾಜ ಕೊಟಗಿ, ಗದಗ ಗ್ರಾಮೀಣ ಶಸಾಪ ಅಧ್ಯಕ್ಷ ಎಸ್.ಎಂ. ಮರಿಗೌಡ್ರ, ವೀರೇಶ ಬದಾಮಿ, ಕಳಕಯ್ಯ ಸಾಲಿಮಠ, ಬಿ.ಕೆ. ನಿಂಬಣಗೌಡ್ರ, ಪ್ರಸನ್ನ ಕೊಟಗಿ, ಮುಂಡರಗಿ ತಾಲೂಕು ಶಸಾಪ ಉಪಾಧ್ಯಕ್ಷ ಕಾಶಿನಾಥ ಶಿರಬಡಗಿ, ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ, ಎಸ್.ಎಂ. ಹೊಸಮಠ, ಎಸ್.ಸಿ. ಚಕ್ಕಡಿಮಠ, ಮಂಜುನಾಥ ತೆಗ್ಗಿನಮನಿ, ಮಂಜುನಾಥ ಇಟಗಿ, ಎಸ್.ಸಿ. ಹರ್ತಿ, ಎನ್.ಎಸ್. ಶೀರನಹಳ್ಳಿ, ಮಂಜುನಾಥ ಮುಧೋಳ, ಎಂ.ಎಸ್. ಶೀರನಹಳ್ಳಿ, ಸುರೇಶ ಭಾವಿಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.