ಸಾರಾಂಶ
ಬ್ಯಾಡಗಿ: ರಸ್ತೆ ಅಗಲೀಕರಣಕ್ಕೆ ಆಗ್ರಹಿಸಿ ಶುಕ್ರವಾರ ಪಟ್ಟಣದಲ್ಲಿ ನಡೆಯುತ್ತಿದ್ದ ಹೋರಾಟದ ಸ್ಥಳಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರು ಸಂಧಾನ ನಡೆಸಿದರೂ ಯಾವುದೇ ಫಲ ನೀಡದೇ ಬರಿಗೈಯಲ್ಲಿ ತೆರಳುವಂತಾಯಿತು. ಅಲ್ಲದೇ ಪ್ರತಿಭಟನೆ ಮೂರನೇ ದಿನಕ್ಕೆ ಮುಂದುವರಿಯಿತು.
ವರ್ತಕರ ಸಂಘದ ಅಧ್ಯಕ್ಷ ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ಮುಖ್ಯರಸ್ತೆ ಅಗಲೀಕರಣ ಹೋರಾಟದ ಅಗಲೀಕರಣ ಆಗುವ ವರೆಗೂ ಯಾವುದೆ ಕಾರಣಕ್ಕೂ ಪ್ರತಿಭಟನೆ ವಾಪಸ್ ಪಡೆಯುವುದಿಲ್ಲ. ನಮ್ಮ ಮನವಿಗೆ ಸರ್ಕಾರ ಕೂಡಲೇ ಸ್ಪಂದಿಸಬೇಕು ಆಗ್ರಹಿಸಿದರು.ಮುಖ್ಯರಸ್ತೆಯಲ್ಲಿರುವ ಬಹುತೇಕ ಆಸ್ತಿಗಳಿಗೆ ಅಲ್ಲಿರುವ ಯಾರೂ ಮೂಲ ಮಾಲೀಕರಲ್ಲ. ಸರ್ಕಾರದ ಆಸ್ತಿಗಳನ್ನೇ ಒತ್ತುವರಿ ಮಾಡಿಕೊಂಡು ಇದೀಗ ಅಗಲೀಕರಣಕ್ಕೆ ಅಷ್ಟಕ್ಕೂ ರಾಜ್ಯ ಹೆದ್ದಾ ರಿಯನ್ನು 66 ಅಡಿಗಳಿಗೆ ಅಗಲೀಕರಣ ಮಾಡುವ ಮೂಲಕ ರಸ್ತೆ ಅಭಿವೃದ್ಧಿಪಡಿಸುವುದಾಗಿದೆ. ನಮ್ಮ ಬೇಡಿಕೆ ಈಡೇರುವವ ರೆಗೂ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲವೆಂದರು.ಕುಡಿಯುವ ನೀರು ಒಳಚರಂಡಿ ನೀಡಬೇಕು: ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ ಪಾಟೀಲ ಮಾತನಾಡಿ, ಮುಖ್ಯರಸ್ತೆ ಅಗಲೀಕರಣವಾಗದೇ ಸುಮಾರು ₹126 ಕೋಟಿ ವೆಚ್ಚದ ನಿರಂತರ ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಕೆಲವರು ಮಾಡಿದ ತಪ್ಪಿಗೆ ಸಾರ್ವಜನಿಕರು ಪುರಸಭೆಗೆ ಛೀಮಾರಿ ಹಾಕುತ್ತಿದ್ದಾರೆ. ಜನರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ವರೆಗೂ ಪ್ರತಿಭಟನೆ ಕೈಬಿಡುವ ಪ್ರಶ್ನೆಯಿಲ್ಲ ಎಂದರು.
ಪುರಸಭೆ ಸದಸ್ಯ ಹಾಗೂ ವರ್ತಕ ಬಸವರಾಜ ಛತ್ರದ ಮಾತನಾಡಿ, ಹೋರಾಟಗಾರರ ಉದ್ದೇಶವು ಸರ್ಕಾರಕ್ಕೆ ಸ್ಪಷ್ಟವಾಗಿ ಅರ್ಥವಾಗಬೇಕು. ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ವರ್ತಕರು ನೊಂದಷ್ಟು ಇಲ್ಲಿರುವ ಯಾರೂ ನೊಂದುಕೊಂಡಿಲ್ಲ ಎಂದರು.ರಾಜು ಮೋರಿಗೇರಿ ಮಾತನಾಡಿ, ಇಲ್ಲಿಯವರೆಗೂ ಅಧಿಕಾರಿಗಳು ಮಾಡಿದ ತಪ್ಪಿನಿಂದಲೇ ಹೋರಾಟಕ್ಕೆ ಹಿನ್ನಡೆಯಾಗಿರುವುದು ಸತ್ಯ. ಇಲ್ಲಿನ ವಿರೋಧಿಗಳಿಗೆ ಜನರ ಬಗ್ಗೆ ಚಿಂತೆಯಿಲ್ಲ. ಅಗಲೀಕರಣ ವಿಳಂಬವಾಗುವಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.ಪ್ರತಿಭಟನೆ ವಾಪಸ್ ಪಡೆಯಿರಿ: ಪ್ರತಿಭಟನಕಾರರ ಜತೆ ಮಾತನಾಡಿದ ಜಿಲ್ಲಾಧಿಕಾರಿ ಡಾ. ವಿಜಯಮಹಂತೇಶ ದಾನಮ್ಮವರ, ರಸ್ತೆಯ ಪ್ರಾಮುಖ್ಯತೆ ಅರಿವಾಗಿದೆ. ಸರ್ಕಾರ ಅಗಲೀಕರಣದ ಪರವಾಗಿದೆ. ಈಗಾಗಲೇ ಕೋರ್ಟನಲ್ಲಿರುವ ತಡೆಯಾಜ್ಞೆ ಸರಿಪಡಿಕೊಂಡು ಬಳಿಕ ಎಲ್ಲ ಪ್ರಕ್ರಿಯೆ ತಪ್ಪಾಗದಂತೆ ಆರಂಭ ಮಾಡುತ್ತವೆ. ಆದ್ದರಿಂದ ನಮಗೆ 4 ತಿಂಗಳು ಅವಕಾಶ ನೀಡುವಂತೆ ಮನವಿ ಮಾಡಿದರು.ಧರಣಿ ಕೈಬಿಡುವ ಮಾತೇ ಇಲ್ಲ: ಗೌರವಾಧ್ಯಕ್ಷ ಗಂಗಣ್ಣ ಎಲಿ ಮಾತನಾಡಿ, ನೀವು ನಿಮ್ಮ ವ್ಯಾಪ್ತಿಯಲ್ಲಿ ಯಾವ ರೀತಿ ಕೆಲಸ ಮಾಡುತ್ತಿರೋ ನಮಗೆ ಗೊತ್ತಿಲ್ಲ, ನಮ್ಮದೇನಿದ್ದರೂ ಶೀಘ್ರದಲ್ಲಿ ಅಗಲೀಕರಣವಾಗಬೇಕು ಎಂಬ ಬೇಡಿಕೆ ಮಾತ್ರ. ಹೋರಾಟಗಾರರ ದಾರಿ ತಪ್ಪಿಸಿ ವಿರೋಧಿಗಳ ಜತೆ ಕೈಜೋಡಿಸಿರುವ ಉಪವಿಭಾಗಾಧಿಕಾರಿ ಕಚೇರಿಯ ರಾಘವೇಂದ್ರ ಭಜಂತ್ರಿ ಅವರನ್ನು ಮೊದಲು ಅಮಾನತು ಮಾಡಿ. ಎಷ್ಟು ದಿನಗಳಾದೂ ಸರಿ, ಅಲ್ಲಿಯವರಗೂ ನಾವು ಧರಣಿ ಕೈಬಿಡಲ್ಲ ಎಂದು ಪಟ್ಟು ಹಿಡಿದರು.ವರ್ತಕರಾದ ಎ.ಆರ್. ನದಾಫ್, ವಸಂತ ಮಾಸಣಗಿ, ಮಲ್ಲಣ್ಣ ಹುಚಗೊಂಡರ, ಅಶೋಕ ಮೂಲಿಮನಿ, ನಾಗರಾಜ ದೇಸೂರ, ಬಸವರಾಜ ಸುಂಕಾಪುರ, ಶಂಭಣ್ಣ ಅಂಗಡಿ, ಎನ್.ಎಚ್. ಹುಗ್ಗಿ. ಗಣೇಶ ಅಚಲಕರ, ಎಂ.ಎಚ್. ಬಾರ್ಕಿ, ಯಮನೂರಪ್ಪ ಉಜನಿ, ಶಂಭು ಮಠದ, ಬೀರಪ್ಪ ಹಾವನೂರ, ವಿನಾಯಕ ಕಂಬಳಿ, ಈರಣ್ಣ ಬಣಕಾರ ಪಾಂಡುರಂಗ ಸುತಾರ, ಹರೀಶ ರಿತ್ತಿ, ಶಿವಯೋಗಿ ಶಿರೂರ, ಸುರೇಶ ಚಲವಾದಿ ಸೇರಿದಂತೆ ಹಲವರು ಭಾಗವಹಿಸಿದ್ದರು. ಮಾತಿನ ಚಕಮಕಿ
ಇದಕ್ಕೂ ಮುನ್ನ ಶುಕ್ರವಾರ ಬೆಳಗ್ಗೆ 10ಕ್ಕೆ ವರ್ತಕರ ಸಂಘ ಹೋರಾಟಕ್ಕೆ ಬೆಂಬಲ ನೀಡಿ ಧರಣಿ ಆರಂಭಿಸಿದರು. ಈ ವೇಳೆ ಮುಖ್ಯರಸ್ತೆಯಲ್ಲಿನ ಅಂಗಡಿಗಳು ತೆರೆಯದಂತೆ ತಾಕೀತು ಮಾಡಿದರು. ಇದೇ ಸಂದರ್ಭದಲ್ಲಿ ಅಗಲೀಕರಣ ವಿರೋಧಿ ಬಣದ ವ್ಯಕ್ತಿಯೊಬ್ಬ ಅಂಗಡಿ ತೆರೆಯಲು ಮುಂದಾದಾಗ ಕೆಂಡಾಮಂಡಲವಾದ ಜನರು ಅಂಗಡಿ ಮುಚ್ಚುವಂತೆ ಆಗ್ರಹಿಸಿದರು. ಈ ವೇಳೆ ಮಾತಿನ ಚಕಮಕಿ ನಡೆಯಿತು. ಬಳಿಕ ಪೋಲೀಸರು ಮಧ್ಯ ಪ್ರವೇಶಿಸಿ ಅಂಗಡಿ ಮುಚ್ಚಿಸಿದರು.