ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಯುಗಾದಿ ಹಬ್ಬದ ಪ್ರಯುಕ್ತ ಹಿಂದೂ ಸಂಪ್ರದಾಯದಲ್ಲಿ ನಡೆಯುವ ಗುಡ್ಡೆ ಮಾಂಸ ಮಾರಾಟಕ್ಕೆ ಲೋಕಸಭಾ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನಿಷೇಧ ಹೇರಿದ್ದಾರೆ. ಯುಗಾದಿ ಹಬ್ಬದ ಮರುದಿನ ನಡೆಯುವ ವರ್ಷದ ತೊಡಕಿನ ದಿನ ಮಾಂಸದ ಅಡುಗೆ ಮಾಡಿ ತಿನ್ನುವುದು ಮಾಂಸಹಾರಿಗಳಿಗೆ ಸಂಪ್ರದಾಯ. ಇಂತಹ ಗುಡ್ಡೆ ಮಾಂಸ ಮಾರಾಟಕ್ಕೆ ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಜಿಲ್ಲಾಡಳಿತ ನಿಷೇಧ ಹೇರಿದ್ದು ಜಿಲ್ಲೆಯ ಜನತೆ ಅಸಮಾಧಾನ ವ್ಯಕ್ತಪಡಿಸಿದೆ. ಮಾರಾಟ ಮಾಡಿದರೆ ಕ್ರಮಯುಗಾದಿ ಹಬ್ಬದ ಮರುದಿನ ನಡೆಯುವ ವರ್ಷದ ತೊಡಕಿನ ಪ್ರಯುಕ್ತ ಹಳ್ಳಿಗಾಡಿನಲ್ಲಿ ನಡೆಯುವ ಗುಡ್ಡೆ ಮಾಂಸ ಮಾರಾಟಕ್ಕೂ ಇತಿಹಾಸವಿದೆ. ಆದರೆ ಈ ಬಾರಿ ಗುಡ್ಡೆ ಮಾಂಸ ಮಾರಾಟ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾಡಲಿತ ಎಚ್ಚರಿಕೆ ನೀಡಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಣ, ಸೀರೆ, ಮದ್ಯ, ಮಾಂಸ ಸೇರಿದಂತೆ ಯಾವುದೇ ವಸ್ತುಗಳನ್ನು ವಿತರಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಯುಗಾದಿ ಹಬ್ಬದಂದು ಗುಡ್ಡೆ ಮಾಂಸ ಮಾರಾಟಕ್ಕೆ ಬ್ರೇಕ್ ಹಾಕಿದೆ.
ಗುಡ್ಡೆ ಮಾಂಸಕ್ಕಾಗಿ ಚೀಟಿಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಹಲವೆಡೆ ಹಲವು ಗ್ರಾಮಗಳು ಸೇರಿದಂತೆ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿಯೂ ವರ್ಷವಿಡೀ ಚೀಟಿ ಹೆಸರಿನಲ್ಲಿ ಹಣವನ್ನು ಸಂಗ್ರಹಿಸಿ, ಯುಗಾದಿ ಹಬ್ಬದಂದು ಹಬ್ಬಕ್ಕೆ ಬೇಕಾದ ವಸ್ತುಗಳು ಸೇರಿದಂತೆ ಗುಡ್ಡೆ ಮಾಂಸವನ್ನು ವಿತರಿಸುತ್ತಾರೆ.ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ ಎನ್ ರವೀಂದ್ರ ಹಾಗೂ ಜಿಲ್ಲಾ ವರಿಷ್ಠಾಧಿಕಾರಿ ಡಿ.ಎಲ್. ನಾಗೇಶ್,ಸಿಇಒ ಪ್ರಕಾಶ್.ಜಿ.ಟಿ. ನಿಟ್ಟಾಲಿ, ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು ಲೋಕಸಭಾ ಚುನಾವಣೆ ಹಿನ್ನೆಲೆ ಬೂತ್ ಮಟ್ಟದಲ್ಲಿ ಗ್ರಾಮಸ್ಥರ ಸಭೆಯನ್ನು ಹಮ್ಮಿಕೊಂಡಿದ್ದರು. ಇದೇ ವೇಳೆ ಗ್ರಾಮಸ್ಥರು ಗುಡ್ಡೆ ಮಾಂಸ ಮಾರಟಕ್ಕೆ ಅನುವು ಮಾಡಿಕೊಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡರು.
ಗ್ರಾಮಸ್ಥರ ಬೇಡಿಕೆಗೆ ತಿರಸ್ಕಾರಆದರೆ ಜಿಲ್ಲಾ ಅಧಿಕಾರಿಗಳು ನ್ಯಾಯಯುತ, ಮುಕ್ತ, ನಿರ್ಭೀತ ಮತದಾನ ನಡೆಸುವ ಹಿನ್ನೆಲೆಯಲ್ಲಿ ಗುಡ್ಡೆ ಮಾಂಸ ಮಾರಟಕ್ಕೆ ಬ್ರೇಕ್ ಹಾಕಲಾಗಿದೆ. ಗುಡ್ಡೆ ಮಾಂಸ ಮಾರಾಟದ ಮುಂದಾಳತ್ವ ವಹಿಸಿಕೊಂಡ ವ್ಯಕ್ತಿ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿದ್ದರೆ ಚುನಾವಣೆ ಸಂದರ್ಭದಲ್ಲಿ ಪ್ರಭಾವ ಬೀರುವ ಸಾಧ್ಯತೆ ಇರುವ ಕಾರಣ ಗುಡ್ಡೆ ಮಾಂಸ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.