ಕನ್ನಡಪ್ರಭ ವಾರ್ತೆ ಮೈಸೂರುಚುಟುಕು ಸಾಹಿತ್ಯದ ಬದುಕು ಲಾಲಿತ್ಯ ಮಾತ್ರವಲ್ಲದೆ ಭಾವನೆಗಳ ಸಾಂಗತ್ಯವಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಹೇಳಿದರು.ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕ, ಮೈಸೂರು ಜಿಲ್ಲಾ ಚುಟಿಕು ಸಾಹಿತ್ಯ ಪರಿಷತ್ ವತಿಯಿಂದ ಭಾನುವಾರ ಆಯೋಜಿಸಿದ್ದ ದಸರಾ ಚುಟುಕು ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಚುಟುಕು ಸಾಹಿತ್ಯದಷ್ಟು ವೇಗವಾಗಿ ಮಹಾಕಾವ್ಯ ಜನರನ್ನು ತಲುಪುವುದಿಲ್ಲ. ನಾಲ್ಕು ಸಾಲು ಇದ್ದರು ಅಂಗೈನಲ್ಲಿ ಎಲ್ಲರನ್ನು ಹಿಡಿಯುವ ಶಕ್ತ ಇದೆ. ಪಂಜಿನ ಜೊತೆಗೆ ಮಿಂಚಿನೊಂದಿಗೆ ಬದುಕು ಸೇರುವ ಶಕ್ತಿ ಚುಟುಕು ಸಾಹಿತ್ಯದಷ್ಟು ವೇಗವಾಗಿ ಜನರನ್ನು ತಲುಪುವುದಿಲ್ಲ ಎಂದರು.ಡಿವಿಜಿ ಅವರಿಗೆ ಮಂಕುತಿಮ್ಮನ ಕಗ್ಗ ಮತ್ತು ಮರುಳು ಮಿನಿಯನ ಕಗ್ಗ ಬಹಳ ಹೆಸರು ತಂದುಕೊಟ್ಟಿತು. ಚುಟುಕುಗಳ ಸಂಗ್ರಹವಾದ ಈ ಎರಡು ಕೃತಿಗಳು ಬದುಕಿನ ಸಾರವನ್ನೇ ಅಡಗಿಸಿಟ್ಟು ತಿಳಿಸಿವೆ. ಬಾನು ಮುಷ್ತಾಕ್ಅವರ ಎದೆಯ ಹಣತೆ ಇಂಗ್ಲಿಷ್ ಭಾಷಾಂತರ ಕೃತಿಗೆ ಬುಕರ್ ಪ್ರಶಸ್ತಿ ಬಂದಿದೆ. ಆದರೆ ಕಗ್ಗವನ್ನು ಭಾಷಾಂತರಿಸಿದ್ದರೆ ನೊಬೆಲ್ ಬರುತ್ತಿತ್ತು ಎಂದು ಅವರು ಹೇಳಿದರು.ಸಾಹಿತ್ಯಕ್ಕೆ ಸಮಾಜದ ಅಂಕುಡೊಂಕನ್ನು ತಿದ್ದುವ ಶಕ್ತಿ ಇದೆ. ಈ ಮೂಲಕ ಸಾಹಿತ್ಯ ಜನರಲ್ಲಿ ಜಾಗೃತಿ ಮೂಡಿಸುವಂತಾಗಲಿ. ದಸರಾ ಎಂಬ ಹೆಸರು ನೆನಪಾದಾಗ ಅದರದ್ದೇ ಆದ ಗಾಂಭೀರ್ಯ ಮೂಡುತ್ತದೆ. ಅಲ್ಲದೇ ದಸರಾ ಸಂದರ್ಭದಲ್ಲಿ ಚುಟುಕು ಕವಿಗೋಷ್ಠಿ ಆಯೋಜಿಸಿರುವುದು ಸಂತೋಷದ ಸಂಗತಿ ಎಂದರು.ದಸರಾ ಎಂಬ ಹೆಸರು ಕೇಳಿದರೆ ಸಾಕು ಮನಸ್ಸಿಗೆ ಅಕ್ಷರಗಳ ಪುಂಜವೇ ಬರಲಿದೆ. ಯಾವತ್ತು, ಯಾರ ಕೆಲಸವನ್ನು ಮಾಡಿಸಿಕೊಳ್ಳಬೇಕೋ ಎಂಬುದನ್ನು ಪ್ರಕೃತಿಯೇ ಮಾಡಲಿದೆ. ಚುಟುಕು ಸಾಹಿತ್ಯವನ್ನು ದಸರಾದೊಂದಿಗೆ ಸೇರಿಸಬೇಕು ಎಂಬ ಉದ್ದೇಶ ಈಡೇರಬೇಕು ಎಂದು ಅವರು ತಿಳಿಸಿದರು.ನಮ್ಮ ಬದುಕು ಹೇಗಿರಬೇಕು? ಯಾವುದಕ್ಕೆ ಮಾನ್ಯತೆ ನೀಡಬೇಕು. ಚುಟುಕು ಸಾಹಿತ್ಯ ಸಾಂಗತ್ಯವಾಗಿದ್ದು ಹೆಜ್ಜೆ ಹೆಜ್ಜೆಗೂ ವಿಷಯಗಳನ್ನು ತಿಳಿಸುತ್ತದೆ. ಬದುಕನ್ನು ಬದುಕುವುದು ಒಂದು ಕಲೆಯಾಗಿದ್ದು, ಬದುಕನ್ನು ಪ್ರೀತಿಸುವವರಿಗೆ ಸ್ವಲ್ಪ ಮಟ್ಟದಲ್ಲಿ ಸಮಸ್ಯೆ ಆಗಬಹುದು. ಆದರೆ ಯಶಸ್ಸು ಸಿಗುವುದು ನಿಶ್ಚಿತ. ಸಂಗೀತ ಸಾಹಿತ್ಯ ಕಲೆಯಿಂದ ಮಾತ್ರ ಬದುಕನ್ನು ನೆಮ್ಮದಿಯಿಂದ ಸಾಗಿಸುವುದಕ್ಕೆ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ತೋಂಟದಾರ್ಯ, ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಅಂಚೆ ಇಲಾಖೆ ವಿಶ್ರಾಂತ ಹಿರಿಯ ಅಧೀಕ್ಷಕ ಕೆ. ಓಬಯ್ಯ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ರತ್ನ ಹಾಲಪ್ಪಗೌಡ, ಡಾ.ಎಂ.ಜಿ.ಆರ್. ಅರಸ್ ಇದ್ದರು.
ಚುಟುಕು ಭಾವನೆಗಳ ಸಾಂಗತ್ಯ
ಚುಟುಕು ಸಾಹಿತ್ಯದಷ್ಟು ವೇಗವಾಗಿ ಮಹಾಕಾವ್ಯ ಜನರನ್ನು ತಲುಪುವುದಿಲ್ಲ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.