ಜಿಲ್ಲಾ ಮಟ್ಟದ ಕಲಾ ಪ್ರತಿಭೋತ್ಸವಕ್ಕೆ ಚಾಲನೆ

| Published : Nov 05 2025, 03:00 AM IST

ಸಾರಾಂಶ

ಜಿಲ್ಲಾಡಳಿತ, ಜಿ.ಪಂ., ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಇಲಾಖೆ ಸಹಯೋಗದಲ್ಲಿ ನಡೆದ ಕಲಾ ಪ್ರತಿಭೋತ್ಸವದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗಿಯಾದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಕಾರದಲ್ಲಿ ಮಂಗಳವಾರ ನಡೆದ ಕಲಾ ಪ್ರತಿಭೋತ್ಸವದಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಒಂದು ಕಡೆ ಶಾಸ್ತ್ರೀಯ ನೃತ್ಯ, ಮತ್ತೊಂದು ಕಡೆ ಜನಪದ ಗೀತೆ, ಇನ್ನೊಂದು ಕಡೆ ಚಿತ್ರಕಲೆ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಹೀಗೆ ಕಲಾ ಪ್ರತಿಭೋತ್ಸವದಲ್ಲಿ ನೂರಾರು ವಿದ್ಯಾರ್ಥಿಗಳು ಲವಲವಿಕೆಯಿಂದ ಪಾಲ್ಗೊಂಡಿದ್ದು ಕಂಡುಬಂದಿತು. ನಗರದ ಗಾಂಧಿ ಭವನದಲ್ಲಿ ನಡೆದ ಕಲಾ ಪ್ರತಿಭೋತ್ಸವದಲ್ಲಿ ಬಾಲಪ್ರತಿಭೆ, ಕಿಶೋರ ಪ್ರತಿಭೆ ಹಾಗೂ ಯುವ ಪ್ರತಿಭೆ ಹೀಗೆ ಸಮೂಹ ಸ್ಪರ್ಧೆಗಳು ನಡೆದಿದ್ದು ವಿಶೇಷವಾಗಿತ್ತು. ಬಾಲ ಪ್ರತಿಭೆ: ಶಾಸ್ತ್ರೀಯ ನೃತ್ಯ, ಜನಪದ ಗೀತೆ, ಚಿತ್ರಕಲೆ, ಕರ್ನಾಟಕ/ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಕರ್ನಾಟಕ/ಹಿಂದೂಸ್ತಾನಿ ವಾದ್ಯ ಸಂಗೀತ, ಸುಗಮ ಸಂಗೀತ.ಕಿಶೋರ ಪ್ರತಿಭೆ: ಚಿತ್ರಕಲೆ, ಕರ್ನಾಟಕ/ ಹಿಂದೂಸ್ತಾನಿ ಸಂಗೀತ, ಶಾಸ್ತ್ರೀಯ ನೃತ್ಯ, ಜನಪದ ಗೀತೆ, ಕರ್ನಾಟಕ/ ಹಿಂದೂಸ್ತಾನಿ ವಾದ್ಯ ಸಂಗೀತ ಮತ್ತು ಸುಗಮ ಸಂಗೀತಯುವ ಪ್ರತಿಭೆ: ಚಿತ್ರಕಲೆ, ಕರ್ನಾಟಕ/ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ನನ್ನ ಮೆಚ್ಚಿನ ಸಾಹಿತಿ ಆಶುಭಾಷಣ, ಶಾಸ್ತ್ರೀಯ ನೃತ್ಯ, ನಾಟಕ(ಸಮೂಹ ಸ್ಪರ್ಧೆ), ಕರ್ನಾಟಕ/ಹಿಂದೂಸ್ತಾನಿ ವಾದ್ಯ ಸಂಗೀತ ಹಾಗೂ ಸುಗಮ ಸಂಗೀತ ಮತ್ತಿತರ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಅವರು ಮಕ್ಕಳು ಮತ್ತು ಯುವಜನರ ಕಲಾಪ್ರತಿಭೆಯನ್ನು ಗುರುತಿಸಿ ಅವರಿಗೆ ಉತ್ತೇಜನ ನೀಡುವ ಮತ್ತು ಅವರು ತಮ್ಮ ಕಲಾ ನೈಪುಣ್ಯ ವೃದ್ಧಿಗೊಳಿಸುವಂತೆ ಪ್ರೋತ್ಸಾಹಿಸಲು ಕಲಾ ಪ್ರತಿಭೋತ್ಸವ ರೂಪಿಸಲಾಗಿದೆ ಎಂದರು. ಮಕ್ಕಳ ಆತ್ಮವಿಶ್ವಾಸ ವೃದ್ಧಿಸುವ ಮತ್ತು ಕಲಾವಿದರನ್ನು ಪ್ರೇರೇಪಿಸುವುದು ಇದರ ಉದ್ದೇಶವಾಗಿದೆ. ಕಲಾ ಪ್ರತಿಭೆಗಳು ಸಮಾಜದ ವಿಜ್ಞಾನ, ತಂತ್ರಜ್ಞಾನ, ಕ್ರೀಡೆ ಮುಂತಾದವು ಬೆಳವಣಿಗೆಗೆ ಅತ್ಯಗತ್ಯ ಎಂದರು.ಕಲಾಪ್ರತಿಭೋತ್ಸವದಿಂದ ವಿದ್ಯಾರ್ಥಿಗಳಿಗೆ ಕಲೆ, ಸಂಗೀತ, ನೃತ್ಯ ಹಾಗೂ ಅನೇಕ ಪ್ರತಿಭೆಗಳನ್ನು ಬೆಳೆಸಲು ಸಾಧ್ಯ ಎಂದು ಹೇಳಿದರು. ಕೊಡಗು ಜಿಲ್ಲೆಯ ಮಕ್ಕಳಲ್ಲಿ ಅಸಾಮಾನ್ಯ ಪ್ರತಿಭೆಗಳು ಅಡಗಿವೆ. ತಮ್ಮ ಕಲೆಗಳ ಮೂಲಕ ಜಿಲ್ಲೆಯ ಗೌರವವನ್ನು ಹೆಚ್ಚಿಸುತ್ತಿದ್ದಾರೆ. ಸೋಲು ಅಥವಾ ಗೆಲುವು ಮುಖ್ಯವಲ್ಲ. ಪಾಲ್ಗೊಳ್ಳುವುದು ಮತ್ತು ಧೈರ್ಯದಿಂದ ಪ್ರದರ್ಶಿಸುವುದು ಅತ್ಯಂತ ಮುಖ್ಯ ಎಂದರು. ಕೊಡುಗು ಜಿಲ್ಲೆಯಲ್ಲಿ ಮತ್ತಷ್ಟು ಪ್ರತಿಭಾವಂತರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬೆಳಗಲಿ ಎಂದು ಆಶಿಸಿದರು. ಕೊಡಗು ಜಾನಪದ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷರಾದ ಬಿ.ಜಿ.ಅನಂತಶಯನ ಅವರು ಮಾತನಾಡಿ ಗುರಿ ಇಟ್ಟುಕೊಂಡರೆ ಜೀವನದಲ್ಲಿ ಮುಂದೆ ಸಾಗಲು ಸಾಧ್ಯ. ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.ಪ್ರತಿಯೊಬ್ಬರಲ್ಲಿಯೂ ಒಂದೊಂದು ರೀತಿಯ ಪ್ರತಿಭೆ ಇದ್ದು, ಇಂತಹ ಕಲಾ ಪ್ರತಿಭೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ತಮ್ಮಲ್ಲಿರುವ ಕಲೆಗಳ ಪ್ರದರ್ಶನಕ್ಕೆ ಅವಕಾಶವಿದೆ. ಆ ನಿಟ್ಟಿನಲ್ಲಿ ಆತ್ಮವಿಶ್ವಾಸದಿಂದ ಮುನ್ನಡೆಯಬೇಕು ಎಂದು ಬಿ.ಜಿ.ಅನಂತಶಯನ ಅವರು ಹೇಳಿದರು. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಚಿದಾನಂದ ಕುಮಾರ್ ಅವರು ಮಾತನಾಡಿ ಕೊಡಗು ಜಿಲ್ಲೆಯ ಮಕ್ಕಳಲ್ಲಿ ಪ್ರತಿಭೆಗಳನ್ನು ಅನಾವರಣಗೊಳಿಸಲು ಈ ವೇದಿಕೆಯು ಉತ್ತಮ ಅವಕಾಶವಾಗಿದೆ ಎಂದು ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಮುನೀರ್ ಅಹಮ್ಮದ್ ಅವರು ಮಾತನಾಡಿ ಪ್ರತಿಭಾ ಉತ್ಸವಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಮಹತ್ವವಾಗಿದೆ ಎಂದು ಹೇಳಿದರು. ಶಾಲಾ ಶಿಕ್ಷಣ ಇಲಾಖೆಯ ಕೆ.ಆರ್.ಬಿಂದು ಅವರು ಮಾತನಾಡಿ ಯಾವುದೇ ಪ್ರತಿಭೆ ಸ್ಪರ್ಧೆಗಳಲ್ಲಿ ಭಾಗವಹಿಸಿದರೆ ಗೆದ್ದರೆ ಪ್ರಶಸ್ತಿ ಹಾಗೂ ಸೋತರೆ ಅನುಭವ ಸಿಗುತ್ತೆ ಎಂಬ ಮನಸ್ಥಿತಿಯೊಂದಿಗೆ ಪಾಲ್ಗೊಳ್ಳಬೇಕು ಎಂದು ಸಲಹೆ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಕುಮಾರ ಸ್ವಾಗತಿಸಿದರು. ಬಿ.ಸಿ.ಶಂಕರಯ್ಯ ನಾಡಗೀತೆ ಹಾಡಿದರು. ಅನಿತಾ ನಿರೂಪಿಸಿದರು. ಮಣಜೂರು ಮಂಜುನಾಥ್ ವಂದಿಸಿದರು. ವಿದ್ಯಾರ್ಥಿಗಳು, ಪೋಷಕರು ಇತರರು ಇದ್ದರು.