ಸಮಾಜದಲ್ಲಿ ಓದುಗರ ಪ್ರಮಾಣ ಹೆಚ್ಚಾಗಬೇಕು

| Published : Nov 03 2025, 01:15 AM IST

ಸಾರಾಂಶ

ಮೈಸೂರು ಅರಸರು ಹಾಗೂ ದಿವಾನರುಗಳು ಶಿಕ್ಷಣ, ಸಾಹಿತ್ಯ ,ಸಂಸ್ಕೃತಿ ಕೃಷಿ,ಮತ್ತು ತಂತ್ರಜ್ಞಾನಗಳ ಬಗ್ಗೆ ನೀಡಿರುವ ಕೊಡುಗೆಗಳನ್ನು ಯಾರು ಮರೆಯಲಾಗದು. ಕನ್ನಡ ಭಾಷೆ,ಸಾಹಿತ್ಯ ಸಂಸ್ಕೃತಿ ನಿರ್ಮಾಣಕ್ಕಾಗಿ ಶಾಲಾ ಕಾಲೇಜುಗಳು, ವಿದ್ಯಾರ್ಥಿ ನಿಲಯಗಳು , ರಾತ್ರಿ ಶಾಲೆಗಳು ಹಾಗೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿರುತ್ತಾರೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸಾವಿರಾರು ವರ್ಷಗಳ ಪರಿಶ್ರಮದಿಂದ ನಮ್ಮ ಹಿರಿಯರು ನಾಡು ನುಡಿಯ ಪರಂಪರೆಯನ್ನು ಕಟ್ಟಿಕೊಟ್ಟಿದ್ದಾರೆ. ಇದರಿಂದಾಗಿ ದೇಶದಲ್ಲಿ ಕನ್ನಡ ನಾಡಿಗೆ ವಿಶೇಷ ಸ್ಥಾನವಿದೆ. ಇಂತಹ ಪರಂಪರೆಯನ್ನು ರೂಪಿಸಿರುವ ಮಹನೀಯರನ್ನು ನಾವು ಕೃತಜ್ಞತಾ ಭಾವದಿಂದ ಸ್ಮರಿಸಬೇಕು ಹಾಗೂ ಅವರ ಆಶಯಗಳನ್ನು ಅರ್ಥ ಮಾಡಿಕೊಂಡು ಆ ದಾರಿಯಲ್ಲಿ ಮುನ್ನಡೆಯಬೇಕೆಂದು ಕಸಾಪ ಜಿಲ್ಲಾಧ್ಯಕ್ಷ ಡಾ. ಕೋಡಿ ರಂಗಪ್ಪ ಹೇಳಿದರು.

ನಗರದ ನಂದಿ ರಂಗಮಂದಿರದ ಕಸಾಪ ಕಚೇರಿಯಲ್ಲಿ ಏರ್ಪಡಿಸಿದ್ದ 70 ನೇ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿಗೆ ಸುಮಾರು 2,000 ವರ್ಷಗಳ ಇತಿಹಾಸವಿದೆ. ವ್ಯಕ್ತಿ ಮತ್ತು ನಾಡಿನ ಉನ್ನತಿಗೆ ಸಾಹಿತ್ಯ ಪರಂಪರೆಯು ದಾರಿದೀಪವಾಗಿದೆ ಎಂದರು.

ಶ್ರೀಮಂತ ಕನ್ನಡ ಸಾಹಿತ್ಯ

ಶತ ಶತಮಾನಗಳ ಹಿಂದೆಯೇ ಕವಿಗಳು, ಲೇಖಕರು, ಅನುಭಾವಿಗಳು ಮತ್ತು ಹೋರಾಟಗಾರರು ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಉನ್ನತ ಮಟ್ಟದಲ್ಲಿ ಕಟ್ಟಿರುತ್ತಾರೆ. ಬೆರಳೆಣಿಕೆಯಷ್ಟು ಅಕ್ಷರಸ್ಥರಿದ್ದ ಕಾಲದಲ್ಲಿ ಭಕ್ತಿ ಪಂಥದವರು, ಬಸವಾದಿ ಶಿವಶರಣರು, ಕೀರ್ತನೆಕಾರರು, ದಾಸರು, ಮಹಾನ್ ಕವಿಗಳು,ನೆಲದ ಅಸ್ಮಿತೆಯನ್ನ ಕಲೆಯಾಗಿ ಪ್ರದರ್ಶಿಸಿದ ಜನಪದೀಯರು ಅತ್ಯಂತ ಸೃಜನಶೀಲಾ ಹಾಗೂ ಮೌಲಿಕ ಸಾಹಿತ್ಯವನ್ನು ಕೊಟ್ಟಿದ್ದಾರೆಂದರು,

ಆಧುನಿಕ ಕಾಲದಲ್ಲಿ ರಾಷ್ಟ್ರಕವಿ ಕುವೆಂಪು, ಬೇಂದ್ರೆ, ಮಾಸ್ತಿ ಕಾರಂತರು, ಎಸ್ಎಲ್ ಭೈರಪ್ಪ ಮೊದಲಾದವರು ಬರೆದಿರುವ ಕೃತಿಗಳು ಹಾಗೂ ಕಾದಂಬರಿಗಳು ಪ್ರಾಚೀನ,ಆಧುನಿಕ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟದ ಸಂದರ್ಭ ಮತ್ತು ದೇಶ ಸ್ವಾತಂತ್ರ ಗಳಿಸಿದ ಮೇಲೆ ಎದುರಾದ ಸಮಸ್ಯೆಗಳು ಮತ್ತು ಸಂಕಷ್ಟಗಳ ಬಗ್ಗೆ ವ್ಯಾಪಕ ಪ್ರಮಾಣದಲ್ಲಿ ಸಾಹಿತ್ಯವನ್ನು ರೂಪಿಸಿರುತ್ತಾರೆ. ಇಂತಹ ಮೌಲಿಕ ಕೃತಿಗಳನ್ನು ಎಲ್ಲರೂ ಓದುವುದರಿಂದ ಸಮಾಜಮುಖಿ ಚಿಂತನಶೀಲ ವ್ಯಕ್ತಿತ್ವವನ್ನು ಗಳಿಸಿಕೊಳ್ಳಬಹುದು ಎಂದರು. ಅರಸರು, ದಿವಾನರ ಕೊಡುಗೆ

ಮೈಸೂರು ಅರಸರು ಹಾಗೂ ದಿವಾನರುಗಳು ಶಿಕ್ಷಣ, ಸಾಹಿತ್ಯ ,ಸಂಸ್ಕೃತಿ ಕೃಷಿ,ಮತ್ತು ತಂತ್ರಜ್ಞಾನಗಳ ಬಗ್ಗೆ ನೀಡಿರುವ ಕೊಡುಗೆಗಳನ್ನು ಯಾರು ಮರೆಯಲಾಗದು. ಕನ್ನಡ ಭಾಷೆ,ಸಾಹಿತ್ಯ ಸಂಸ್ಕೃತಿ ನಿರ್ಮಾಣಕ್ಕಾಗಿ ಶಾಲಾ ಕಾಲೇಜುಗಳು, ವಿದ್ಯಾರ್ಥಿ ನಿಲಯಗಳು , ರಾತ್ರಿ ಶಾಲೆಗಳು ಹಾಗೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿರುತ್ತಾರೆ. ನಮ್ಮ ಜಿಲ್ಲೆಯ ಹೆಮ್ಮೆಯ ಪುತ್ರ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಅವರು ದೂರ ದೃಷ್ಟಿಯಿಂದ ಅನೇಕ ಯೋಜನೆಗಳನ್ನು ಜಾರಿಗೊಳಿಸಿ ನಾಡಿನ ಮುನ್ನಡೆಗೆ ವಿಶಿಷ್ಟ ಕೊಡುಗೆ ನೀಡಿದ್ದಾರೆ ಎಂದರು.

ವ್ಯಕ್ತಿ ಮತ್ತು ಸಮಾಜದಲ್ಲಿ ಓದುವವರ ಹಾಗೂ ಓದಿನ ಪ್ರಮಾಣ ತನ್ಮೂಲಕ ಸಾಹಿತ್ಯದ ಚಿಂತನೆಗಳು ಹೆಚ್ಚಬೇಕು. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ಪುಸ್ತಕ ಪ್ರೀತಿ ಮತ್ತು ಓದುವ ಅಭಿರುಚಿ ಹುಟ್ಟು ಹಾಕಿದರೆ ನಮ್ಮ ವಿದ್ಯಾರ್ಥಿಗಳು ಅಧ್ಯಯನಶೀಲರಾಗಿ ಸಾರ್ಥಕ ವ್ಯಕ್ತಿತ್ವ ಗಳಿಸಿಕೊಳ್ಳಬೇಕೆಂಬ ಆಶಯದಿಂದ ಇಷ್ಟೆಲ್ಲ ಕೆಲಸಗಳನ್ನು ಮಾಡಲಾಗಿದೆ ಎಂದರು,

ನಿವೃತ್ತ ಪ್ರಾಂಶುಪಾಲ ಡಾ.ಬಿ.ವಿ.ಕೃಷ್ಣ ಮತ್ತು ಹಳೆಯ ಕನ್ನಡ ಚಿತ್ರಗೀತೆಗಳ ಗಾಯಕ ಮುನೀರ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಧ್ವಜಾರೋಹಣ ಕಾರ್ಯಕ್ರಮದಲ್ಲಿ ಕಸಾಪ ತಾಲೂಕು ಅಧ್ಯಕ್ಷ ಯಲುವಹಳ್ಳಿ ಸೊಣ್ಣೆಗೌಡಜಿಲ್ಲಾ ಹಾಗೂ ತಾಲೂಕು ಸಮಿತಿಯ ಸದಸ್ಯರಾದ ಚೆನ್ನ ಮಲ್ಲಿಕಾರ್ಜುನಯ್ಯ, ಎಸ್.ಎನ್.ಅಮೃತ್ ಕುಮಾರ್ , ಕೆ.ಎಂ.ರೆಡ್ಡಪ್ಪ,ಸರ್ದಾರ್ ಚಾಂದ್ ಪಾಷಾ, ಮಂಚನ ಬಲೆ ಶ್ರೀನಿವಾಸ್, ಪಾಮು ಚಲಪತಿ ಗೌಡ, ಡಿ.ಎಂ.ಶ್ರೀ ರಾಮ್, ಮಹಾದೇವ್, ನಗರಸಭೆ ಸದಸ್ಯೆ ಅಣ್ಣಮ್ಮ ,ಎಲ್ ಐಸಿ ನರಸಿಂಹ , ಪ್ರೌಢಶಾಲಾ ಅಧ್ಯಾಪಕರಾದ ಅರುಣ, ಕೆ ಆರ್ ಶಶಿಧರ್ , ಮಂಜುನಾಥ್ ಮತ್ತು ವಿದ್ಯಾರ್ಥಿಗಳು ಇದ್ದರು.